ಶಿವಸೇನೆ ಈಗ ಕೋಮುವಾದಿಯಲ್ಲ: ಸಿದ್ದರಾಮಯ್ಯ
ಮೈಸೂರು,ನ.17: ಉಪಚುನಾವಣೆಯಲ್ಲಿ ಅನರ್ಹರನ್ನು ಸೋಲಿಸುವುದೇ ನನ್ನ ಟಾರ್ಗೆಟ್, ಅವರನ್ನು ಅನರ್ಹಗೊಳಿಸುವಂತೆ ಮಾಡಿದ್ದೇ ನಾನು, ಹಾಗಾಗಿ ಅವರು ನನ್ನನ್ನು ಟಾರ್ಗೆಟ್ ಮಾಡುತ್ತಿದ್ದಾರೆ ಎಂದು ಮಾಜಿ ಮುಖ್ಯಮಂತ್ರಿ, ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದರು.
ನಗರದಲ್ಲಿ ರವಿವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಈಗಾಗಲೇ ಹಲವು ಕಾಂಗ್ರೆಸ್ ಅಭ್ಯರ್ಥಿಗಳು ನಾಮಪತ್ರ ಸಲ್ಲಿಸಿದ್ದಾರೆ. ಉಳಿದವರು ನಾಳೆ ತಮ್ಮ ನಾಮಪತ್ರಗಳನ್ನು ಸಲ್ಲಿಸಲಿದ್ದಾರೆ. 15 ಕ್ಷೇತ್ರಗಳ ಪೈಕಿ ಕಾಂಗ್ರೆಸ್ 12 ಕ್ಷೇತ್ರಗಳಲ್ಲಿ ಜಯಗಳಿಸಲಿದೆ ಎಂದು ಹೇಳಿದರು.
ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದು ಹೇಳುತ್ತಿರುವ ಎಚ್.ವಿಶ್ವನಾಥ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಸಿದ್ದರಾಮಯ್ಯ, ಇದು ಕೇವಲ ಗಿಮಿಕ್ ಅಷ್ಟೆ. ಇಷ್ಟು ವರ್ಷ ಏಕೆ ಈ ಮಾತು ಹೇಳಿರಲಿಲ್ಲ ? ಇಷ್ಟು ವರ್ಷ ಕಾಲ ಏಕೆ ಅಭಿವೃದ್ದಿ ಕಾರ್ಯಗಳನ್ನು ಮಾಡಲಿಲ್ಲ ಎಂದು ಪ್ರಶ್ನಿಸಿದರು. ಈಗ ಏಕೆ ಹುಣಸೂರನ್ನು ಪ್ರತ್ಯೇಕ ಜಿಲ್ಲೆ ಮಾಡುತ್ತೇನೆ ಎಂದು ಹೇಳುತ್ತಿದ್ದಾರೆ. ಇದು ಕೇವಲ ಚುನಾವಣಾ ಗಿಮಿಕ್ ಅಗಿದೆ ಎಂದು ಹೇಳಿದರು.
ಶಿವಸೇನೆ ಎನ್ಡಿಎಯಿಂದ ಹೊರ ಬಂದಿದೆ. ಹಾಗಾಗಿ ಶಿವಸೇನೆ ಈಗ ಕೋಮುವಾದಿಯಲ್ಲ. ಶಿವಸೇನೆ, ಅಧಿಕೃತವಾಗಿ ಎನ್ಡಿಎಯಿಂದ ಹೊರಬಂದಿದೆ. ಕೋಮುವಾದದಿಂದ ದೂರ ಉಳಿಯುವುದಾಗಿ ಹೇಳಿದೆ. ಹಾಗಾಗಿ ಎನ್ಸಿಪಿ ಕಾಂಗ್ರೆಸ್ ಇದೀಗ ಶಿವಸೇನೆ ಜೊತೆ ಕೈ ಜೋಡಿಸಲು ಮುಂದಾಗಿವೆ. ಮುಂದೇನಾದರೂ ಶಿವಸೇನೆ ಮತ್ತೆ ಕೋಮುವಾದ ಪ್ರತಿಪಾದಿಸಿದರೆ ಅದರಿಂದ ದೂರಾಗುತ್ತೇವೆ ಎಂದು ಹೇಳಿದರು.