ಶೀಘ್ರದಲ್ಲಿ ಸೆಟ್ಟೇರಲಿದೆ ‘ಟಿಪ್ಪು ಸುಲ್ತಾನ್ ಅನ್ಟೋಲ್ಡ್ ಸ್ಟೋರಿ’
ಬೆಂಗಳೂರು, ಜ.28: ಟಿಪ್ಪು ಸುಲ್ತಾನನ ವ್ಯಕ್ತಿತ್ವ ಮತ್ತು ಧರ್ಮ ನಿರಪೇಕ್ಷತೆಯನ್ನು ತಿಳಿಸಲು ಶೀಘ್ರದಲ್ಲಿ ‘ಟಿಪ್ಪು ಸುಲ್ತಾನ್ ಅನ್ಟೋಲ್ಡ್ ಸ್ಟೋರಿ’ ಚಿತ್ರ ಸೆಟ್ಟೇರಲಿದೆ ಎಂದು ಟಿಪ್ಪು ಸುಲ್ತಾನ್ ಸಂಯುಕ್ತ ರಂಗ ಸಂಘಟನೆಯ ಅಧ್ಯಕ್ಷ ಸರ್ದಾರ್ ಅಹಮದ್ ಖುರೇಷಿ ತಿಳಿಸಿದ್ದಾರೆ.
ಮಂಗಳವಾರ ಪ್ರೆಸ್ಕ್ಲಬ್ನ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಚಿತ್ರದಲ್ಲಿ ಟಿಪ್ಪುವಿನ ಬಾಲ್ಯಾವಸ್ಥೆಯಿಂದ ಬ್ರಿಟಿಷರ ವಿರುದ್ಧ ಹೋರಾಡಿ ಮಡಿಯುವವರೆಗಿನ ಕಥೆಯನ್ನು ಹೊಂದಿದ್ದು ಇದುವರೆಗೂ ತಿಳಿಯದ ಸಂಗತಿಗಳನ್ನು ಚಿತ್ರ ತಿಳಿಸಲಿದೆ. ಟಿಪ್ಪುವಿನ ಧಾರ್ಮಿಕ ಪ್ರೇಮ, ಕನ್ನಡ ಪ್ರೀತಿ, ಅಸಹಿಷ್ಣುತೆ ಮೊದಲಾದ ತಿಳಿಯದ ಸಂಗತಿಗಳ ಬಗ್ಗೆ ಚಿತ್ರ ಬೆಳಕು ಚೆಲ್ಲಲಿದೆ ಎಂದು ತಿಳಿಸಿದರು.
ಮಹಾರಾಷ್ಟ್ರದ ಮೂಲದ ರಕ್ಷಿತ್ ಖಾನ್ ಎಂಬುವವರು ಟಿಪ್ಪುವಿನ ಬಾಲ್ಯಾವಸ್ಥೆಯ ಪಾತ್ರ ನಿರ್ವಹಿಸಲಿದ್ದಾರೆ. ತಾರಾಗಣದ ಆಯ್ಕೆ ನಡೆಯುತ್ತಿದೆ. ಕೇರಳ ಮೂಲದ ಶ್ರೀಜೂ ಶ್ರೀಧರ್ ಚಿತ್ರವನ್ನು ನಿರ್ದೇಶಿಸುತ್ತಿದ್ದು, ಬಾಂಬೆ ಮೂಲದ ರಹಮತ್ ಶೇಖ್ ಬಂಡವಾಳ ಹೂಡುತ್ತಿದ್ದಾರೆ. ಸದ್ಯ ಕನ್ನಡ, ಹಿಂದಿ ಮತ್ತು ಮಲಯಾಳಂ ಭಾಷೆಗಳಲ್ಲಿ ಚಿತ್ರ ತಯಾರಾಗುತ್ತಿದೆ ಎಂದು ತಿಳಿಸಿದರು.