ಎನ್ಪಿಆರ್ ಅನಾಥ ಶಿಶು, ತಂದೆ ಯಾರೆಂದೇ ಗೊತ್ತಿಲ್ಲ: ಪ್ರೊ.ರವಿವರ್ಮ ಕುಮಾರ್
"ಸಂವಿಧಾನ ವಿರೋಧಿ ಕಾನೂನು ವಿರೋಧಿಸಿದರೆ ಗುಂಡಿಕ್ಕಿ ಹೆದರಿಸುತ್ತಾರೆ"
ಮೈಸೂರು,ಫೆ.2: ಕೇಂದ್ರ ಸರ್ಕಾರ ಜಾರಿಗೆ ತರಲು ಮುಂದಾಗಿರುವ ಎನ್ಪಿಆರ್ ಒಂದು ಅನಾಥ ಶಿಶು. ಇದಕ್ಕೆ ತಂದೆ ಯಾರು ಎಂಬುದೇ ಗೊತ್ತಿಲ್ಲ ಎಂದು ಮಾಜಿ ಅಡ್ವೋಕೇಟ್ ಜನರಲ್ ಪ್ರೊ.ರವಿವರ್ಮ ಕುಮಾರ್ ವಾಗ್ದಾಳಿ ನಡೆಸಿದರು.
ನಗರದ ಕಾಂಗ್ರೆಸ್ ಕಚೇರಿ ಆವರಣದಲ್ಲಿ ರವಿವಾರ ಮೈಸೂರು ನಗರ ಹಾಗೂ ಗ್ರಾಮಾಂತರ ಜಿಲ್ಲಾ ಕಾಂಗ್ರೆಸ್ ಸಮಿತಿ ಆಯೋಜಿಸಿದ್ದ 'ಅಸಂವಿಧಾನಿಕ ಹಾಗೂ ತಾರತಮ್ಯದ ಎನ್ಪಿಆರ್-ಎನ್ಆರ್ಸಿ-ಸಿಎಎ' ಕುರಿತ ರಾಷ್ಟ್ರೀಯ ವಿಚಾರ ಸಂಕಿರಣದಲ್ಲಿ ಭಾಗವಹಿಸಿ ಅವರು ಮಾತನಾಡಿದರು. ಸಂವಿಧಾನದ ಅಡಿಯಲ್ಲಿ ಎನ್ಪಿಆರ್ ಜಾರಿಗೆ ತರಲು ಅವಕಾಶವೇ ಇಲ್ಲ. 2003 ರಲ್ಲಿ ಅಂದಿನ ಪ್ರಧಾನಿ ವಾಜಪೇಯಿ ಎನ್ಪಿಆರ್ ವಿಷಯ ಪ್ರಸ್ತಾಪಿಸಿದರು. ಅದನ್ನು ಕಾರ್ಯರೂಪಕ್ಕೆ ತರಲು ಮುಂದಾಗುವಷ್ಟರಲ್ಲಿ ಅವರ ಸರ್ಕಾರ ಬಿದ್ದು ಹೋಯಿತು. ಅಲ್ಲಿಂದ ಇಲ್ಲಿವರೆಗೆ ಅದರ ವಿಚಾರವೇ ಇಲ್ಲದ ಸಂದರ್ಭದಲ್ಲಿ ಮೋದಿ, ಅಮಿತ್ ಶಾ ನೇತೃತ್ವದ ಆರೆಸ್ಸೆಸ್ ಸರ್ಕಾರ ಎನ್ಪಿಆರ್ ಜಾರಿಗೆ ತರಲು ಮುಂದಾಗಿದೆ. ಒಂದು ರೀತಿಯಲ್ಲಿ ತಂದೆ ಯಾರೆಂದೇ ಗೊತ್ತಿಲ್ಲದೆ ಹುಟ್ಟುವ ಮಗುವಿನ ರೀತಿಯಲ್ಲಿ ಈ ಕಾನೂನು ಇದೆ ಎಂದು ಟೀಕಿಸಿದರು.
ಸಿಎಎ ಜಾರಿಗೆ ತರಲು ಮುಂದಾದಾಗ ಎನ್ಆರ್ಸಿ ಸೇರಿಸಿದರು. ನಂತರ ಎನ್ಪಿಆರ್ ಜಾರಿ ಮಾಡುವುದಾಗಿ ಹೇಳುತ್ತಿದ್ದಾರೆ. ಒಂದು ರೀತಿಯಲ್ಲಿ ಜನರಲ್ಲಿ ಗೊಂದಲ ಉಂಟುಮಾಡಿ ಸುಳ್ಳುಗಳ ಸರಮಾಲೆಯನ್ನು ಸೇರಿಸಿ ಅಸಂವಿಧಾನಿಕ ಕಾನೂನನ್ನು ತರಲು ಮುಂದಾಗಿದ್ದಾರೆ. ಪ್ರಜ್ಞಾವಂತ ನಾಗರೀಕರು ಇವರ ಅಟ್ಟಹಾಸವನ್ನು ಮಟ್ಟಹಾಕಬೇಕಿದೆ ಎಂದು ಹೇಳಿದರು.
ಸಂವಿಧಾನದಲ್ಲಿ ದೇಶದ ಪೌರತ್ವವನ್ನು ಯಾರು ಹೊಂದಬೇಕು, ಯಾರು ಹೊಂದಬಾರದು ಎಂದು ಹೇಳಿಲ್ಲ. ಧರ್ಮದ ಆಧಾರದಲ್ಲಿ ಪೌರತ್ವ ನೀಡಬೇಕು ಎಂದು ಹೇಳಿಲ್ಲ. ಭಾರತೀಯರೆಲ್ಲರಿಗೂ ಈ ದೇಶದಲ್ಲಿ ವಾಸಿಸಲು ಅವಕಾಶ ನೀಡಲಾಗಿದೆ. ಆದರೆ ಆರೆಸ್ಸೆಸ್ ಸರ್ಕಾರ ತಮ್ಮ ಅಜೆಂಡಾವನ್ನು ಮುಂದಿಟ್ಟುಕೊಂಡು ಹಿಂದೂ ರಾಷ್ಟ್ರಕಟ್ಟಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ನಮ್ಮ ದೇಶವನ್ನು ಆಳುತ್ತಿರುವವರು ಮೋದಿಯಲ್ಲ, ಆರೆಸ್ಸೆಸ್ ನವರು. ಚುನಾಯಿತ ಪ್ರತಿನಿಧಿಗಳು ತೀರ್ಮಾನ ಮಾಡಬೇಕಿರುವುದನ್ನು ಬ್ರಾಹ್ಮಣರ ಅಗ್ರಹಾರದಲ್ಲಿ ತೀರ್ಮಾನ ಮಾಡಲಾಗುತ್ತಿದೆ. ಆರೆಸ್ಸೆಸ್ ಒಳಗೆ ಶೂದ್ರರಿಗೂ ಪ್ರವೇಶವಿಲ್ಲ, ಅಷ್ಟೇ ಏಕೆ ಆರೆಸ್ಸೆಸ್ ನಲ್ಲಿ ಒಬ್ಬ ಮಹಿಳೆಗೂ ಅವಕಾಶ ಇಲ್ಲ ಎಂದು ಕಿಡಿಕಾರಿದರು.
ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ನಿಂದ ಮುಸ್ಲಿಮರಿಗಷ್ಟೆ ತೊಂದರೆಯಲ್ಲ, ಈ ದೇಶದ ದಲಿತ, ಹಿಂದುಳಿದ ವರ್ಗದವರು, ದ್ರಾವಿಡರು, ಸೇರಿದಂತೆ ಪ್ರತಿಯೊಬ್ಬರಿಗೂ ತೊಂದರೆಯೇ. ದೇಶದ ಪ್ರಜ್ಞಾವಂತ ನಾಗರಿಕರು, ಮಹಿಳೆಯರು ಎಚ್ಚೆತ್ತುಕೊಳ್ಳದಿದ್ದರೆ, ಮಹಿಳೆಯರಿಗೆ ಇರುವ ಮತದಾನದ ಹಕ್ಕನ್ನು ಮುಂದೊಂದು ದಿನ ಕಿತ್ತುಕೊಳ್ಳಲಿದ್ದಾರೆ ಎಂದು ಭವಿಷ್ಯ ನುಡಿದರು.
ಸಂವಿಧಾನವನ್ನು ರಕ್ಷಣೆ ಮಾಡಬೇಕಾದ ನ್ಯಾಯಾಂಗ ವ್ಯವಸ್ಥೆಯೇ ಮೂಕಪ್ರೇಕ್ಷಕವಾಗಿ ಕುಳಿತಿದೆ. ಸಂವಿಧಾನಕ್ಕೆ ವಿರುದ್ಧವಾದ ಕಾನೂನುಗಳ ವಿರುದ್ಧ ತೀರ್ಪು ನೀಡಲು ವಿಳಂಬ ಮಾಡುತ್ತಿರುವುದು ನಮ್ಮ ದೇಶದ ದೌರ್ಭಾಗ್ಯ. ಪ್ರಧಾನಿ ನರೇಂದ್ರ ಮೋದಿ ಸಿಬಿಐ, ಐಟಿ, ಜಾರಿ ನಿರ್ದೇಶನಾಲಯ ಸೇರಿದಂತೆ ಅನೇಕ ಸ್ವಾಯತ್ತ ಸಂಸ್ಥೆಗಳನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಬೇಸರ ವ್ಯಕ್ತಪಡಿಸಿದರು.
ನಿವೃತ್ತ ಸುಪ್ರೀಂಕೋರ್ಟ್ ನ್ಯಾಯಾಧೀಶ ವಿ.ಗೋಪಾಲಗೌಡ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಮೂಲಕ ಕಾರ್ಯಕ್ರಮವನ್ನು ಉದ್ಘಾಟಿಸಿದರು. ಮಾಜಿ ಸಚಿವ ಡಾ.ಎಚ್.ಸಿ.ಮಹದೇವಪ್ಪ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಕಾಯ್ದೆ ವಿರೋಧಿಸಿದರೆ ಗುಂಡು ಹೊಡೆಸುತ್ತಿದ್ದಾರೆ: ಪ್ರೊ.ರವಿವರ್ಮ ಕುಮಾರ್
ಪ್ರಧಾನಿ ನರೇಂದ್ರ ಮೋದಿಗೆ ನಾಯಕತ್ವದ ಗುಣಕ್ಕಿಂತ ನಾಲಾಯಕನ ಗುಣ ತುಂಬಿದೆ. ಸಂವಿಧಾನಕ್ಕೆ ವಿರುದ್ಧವಾದ ಕಾನೂನುನ್ನು ವಿರೋಧಿಸಿದರೆ ಗುಂಡು ಹೊಡೆಸುವ ಮೂಲಕ ಹೆದರಿಸುತ್ತಿದ್ದಾರೆ ಎಂದು ಪ್ರೊ.ರವಿವರ್ಮಕುಮಾರ್ ಆಕ್ರೋಶ ವ್ಯಕ್ತಪಡಿಸಿದರು.
ಯಾವುದೇ ಒಂದು ಕಾಯ್ದೆ ಜಾರಿಯಾಗುವ ಮುನ್ನ ಚರ್ಚೆ ಮಾಡಬೇಕು. ಆದರೆ ಸರ್ಕಾರ ನಮಗೆ ಬಹುಮತ ಇದೆ ಎಂಬ ಕಾರಣಕ್ಕೆ ಏಕಾಏಕಿ ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಬಿಲ್ ಅನ್ನು ಲೋಕಸಭೆ ಮತ್ತು ರಾಜ್ಯಸಭೆಯಲ್ಲಿ ಪಾಸ್ ಮಾಡಲಾಯಿತು. ಜೊತೆಗೆ ತರಾತುರಿಯಲ್ಲಿ ರಾಷ್ಟ್ರಪತಿಗಳ ಅಂಕಿತವನ್ನು ಹಾಕಿಸಲಾಯಿತು. ಅಂತಹ ಆತುರ ಏನಾಗಿತ್ತು ಎಂದು ಪ್ರಶ್ನಿಸಿದರು.
ಸಿಎಎ, ಎನ್ಆರ್ಸಿ ಮತ್ತು ಎನ್ಪಿಆರ್ ಅನ್ನು ಯಾರ್ಯಾರೋ ವಿರೋಧಿಸುತ್ತಿಲ್ಲ. ಈ ದೇಶದ ವಿದ್ಯಾರ್ಥಿಗಳು, ಬುದ್ದಿಜೀವಿಗಳು, ನಿವೃತ್ತ ನ್ಯಾಯಾಧೀಶರು ಸೇರಿದಂತೆ ಪ್ರಜ್ಞಾವಂತರು ವಿರೋಧಿಸುತ್ತಿದ್ದಾರೆ. ಅವರನ್ನು ಕರೆದು ಚರ್ಚೆ ಮಾಡುವ ಬದಲು ಗೂಂಡಾಗಿರಿ ಮೂಲಕ ಗುಂಡು ಹೊಡೆಸಿ ಹೆದರಿಸುವ ಕೆಲಸವನ್ನು ಮಾಡುತ್ತಿದ್ದಾರೆ. ಇವರಲ್ಲಿ ನಾಯಕತ್ವದ ಗುಣಕ್ಕಿಂತ ನಾಲಾಯಕನ ಗುಣ ಅಡಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಯಡಿಯೂರಪ್ಪ ಆರೆಸ್ಸೆಸ್ ನವರ ಕಿಟಕಿ, ಬಾಗಿಲು ಕಾಯುತ್ತಿದ್ದಾರೆ
ಸಾರ್ವಭೌಮತ್ವ ಹೊಂದಿರುವ ಮುಖ್ಯಮಂತ್ರಿ ಯಡಿಯೂರಪ್ಪ ಸಂಪುಟ ವಿಸ್ತರಣೆ ಮಾಡಲು ಆರೆಸ್ಸೆಸ್ ನವರ ಕಿಟಕಿ, ಬಾಗಿಲು ಕಾಯುತ್ತಿದ್ದಾರೆ. ನಮ್ಮನ್ನು ಆಳಲಿ ಎಂದು ಅಧಿಕಾರ ಕೊಟ್ಟಿದ್ದರೆ, ಇವರು ಬ್ರಾಹ್ಮಣರ ಅಗ್ರಹಾರಕ್ಕೆ ಹೋಗುತ್ತಿದ್ದಾರೆ. ಯಡಿಯೂರಪ್ಪ ಸ್ವಾಭಿಮಾನಿಯಾಗಿದ್ದರೆ ನಾನು ಮಾಡುತ್ತಿರುವುದು ಸರಿಯಾಗಿದೆಯೇ ಎಂದು ಪ್ರಶ್ನೆ ಮಾಡಿಕೊಳ್ಳಲಿ. ಆರೆಸ್ಸೆಸ್ ನವರ ಮನೆ ಬಾಗಿಲು ತಿರುಗಿ ಅವರು ತೀರ್ಮಾನ ಮಾಡಿದವರನ್ನು ಸಂಪುಟಕ್ಕೆ ಸೇರಿಸಿಕೊಳ್ಳುವ ಅಗತ್ಯವಿಲ್ಲ, ನಿಮ್ಮ ಅಧಿಕಾರವನ್ನು ಬಳಸಿ ಮುಖ್ಯಮಂತ್ರಿಗಳ ಘನತೆಯನ್ನು ಕಾಪಾಡಿ ಎಂದು ಹೇಳಿದರು.