ಕಣ್ಣು, ಕಿವಿ ಮುಚ್ಚಿಕೊಂಡಿರುವ ರಾಜ್ಯದ ಬಿಜೆಪಿ ಸಂಸದರೇ ಎದ್ದೇಳಿ: ಸಿದ್ದರಾಮಯ್ಯ
ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲು ಇಳಿಕೆ
ಬೆಂಗಳೂರು, ಫೆ.3: ಹದಿನೈದನೇ ಹಣಕಾಸು ಆಯೋಗ ಇತಿಹಾಸದಲ್ಲಿಯೆ ಮೊದಲ ಬಾರಿ ಕೇಂದ್ರ ತೆರಿಗೆಯಲ್ಲಿ ರಾಜ್ಯಗಳ ಪಾಲನ್ನು ಶೇ.42ರಿಂದ ಶೇ.41ಕ್ಕೆ ಇಳಿಸಿ ಕರ್ನಾಟಕವೂ ಸೇರಿದಂತೆ ದಕ್ಷಿಣದ ರಾಜ್ಯಗಳಿಗೆ ಅನ್ಯಾಯ ಎಸಗಿದೆ. ಕಣ್ಣು, ಕಿವಿ ಮುಚ್ಚಿಕೊಂಡಿರುವ ರಾಜ್ಯದ ಬಿಜೆಪಿ ಸಂಸದರೇ ಎದ್ದೇಳಿ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.
ಅಭಿವೃದ್ಧಿ ಸೂಚ್ಯಂಕದಲ್ಲಿ ಮೈಲುಗೈ ಹೊಂದಿರುವ ದಕ್ಷಿಣದ ರಾಜ್ಯಗಳು ಸಂತಾನ ನಿಯಂತ್ರಣದಲ್ಲಿಯೂ ಮುಂದಿದೆ. ತಪ್ಪು ಮಾನದಂಡಗಳಿಂದಾಗಿ ಹಣಕಾಸು ಆಯೋಗದ ಶಿಫಾರಸ್ಸುಗಳು ಅಭಿವೃದ್ಧಿ ಹೊಂದಿದ್ದ ರಾಜ್ಯಗಳನ್ನು ಶಿಕ್ಷಿಸುವಂತಿದೆ. ಈ ತಾರತಮ್ಯವನ್ನು 2017ರಲ್ಲಿಯೆ ನಾನು ವಿರೋಧಿಸಿದ್ದೆ ಎಂದು ಅವರು ಹೇಳಿದ್ದಾರೆ.
ಸಂಪನ್ಮೂಲದ ಕೊರತೆಯಿಂದ ರಾಜ್ಯದ ಅಭಿವೃದ್ಧಿ ಕಾರ್ಯಗಳು ಕುಂಠಿತಗೊಂಡಿವೆ, ಶಿಕ್ಷಕರಿಗೆ ಸಂಬಳ ಇಲ್ಲ, ಸ್ಥಳೀಯ ತೆರಿಗೆ ಸಂಗ್ರಹ ಕಡಿಮೆಯಾಗಿದೆ. ಇಂತಹ ಆರ್ಥಿಕ ದುಸ್ಥಿತಿಯಲ್ಲಿ ಕೇಂದ್ರದ ತೆರಿಗೆ ಪಾಲಿನಲ್ಲಿ 11 ಸಾವಿರ ಕೋಟಿ ರೂ. ಕಡಿತ ರಾಜ್ಯದ ಪಾಲಿಗೆ ಹೊರಲಾರದ ಹೊರೆಯಾಗಲಿದೆ ಎಂದು ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.