ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವಕ್ಕೆ ‘ಕೊಡಗ್ರ ಸಿಪಾಯಿ’ ಆಯ್ಕೆ
ಮಡಿಕೇರಿ, ಫೆ.24: ತೀತಿಮಾಡ ಅರ್ಜುನ್ ದೇವಯ್ಯ, ತೇಜಸ್ವಿನಿ ಶರ್ಮ ಮುಖ್ಯ ಪಾತ್ರದಲ್ಲಿರುವ ‘ಕೊಡಗ್ರ ಸಿಪಾಯಿ’ ಕೊಡವ ಭಾಷಾ ಚಲನಚಿತ್ರವು ಬೆಂಗಳೂರಿನಲ್ಲಿ ನಡೆ ಯಲಿರುವ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕೆ ಆಯ್ಕೆಯಾಗಿದೆ.
ಬೆಂಗಳೂರಿನಲ್ಲಿ ಫೆ.26ರಿಂದ ಮಾರ್ಚ್ 4ರವರೆಗೆ ಅಂತಾರಾಷ್ಟ್ರೀಯ ಚಿತ್ರೋತ್ಸವ ನಡೆಯಲಿದೆ. ಈ ಚಿತ್ರೋತ್ಸವದಲ್ಲಿ ಪ್ರದರ್ಶನಕ್ಕಾಗಿ 220ಕ್ಕೂ ಅಧಿಕ ಚಿತ್ರಗಳು ಅರ್ಜಿ ಸಲ್ಲಿಸಿದ್ದವು. ಈ ಪೈಕಿ 1: 05 ಗಂಟೆ ಅವಧಿಯ ‘ಕೊಡಗ್ರ ಸಿಪಾಯಿ’ ಸೇರಿದಂತೆ 25 ಚಿತ್ರಗಳು ಆಯ್ಕೆಯಾಗಿವೆ.
ಕಳೆದ ಡಿಸಂಬರ್ನಲ್ಲಿ ಕೊಲ್ಕೋತ್ತದಲ್ಲಿ ನಡೆದ ಅಂತಾರಾಷ್ಟ್ರೀಯ ಸಿನಿ ಉತ್ಸವದಲ್ಲೂ ‘ಕೊಡಗ್ರ ಸಿಪಾಯಿ’ ಪ್ರದರ್ಶನ ಕಂಡಿತ್ತು.
ಕಳೆದ ವರ್ಷ ಸೆಪ್ಟೆಂಬರ್ನಲ್ಲಿ ತೆರೆಕಂಡಿರುವ ‘ಕೊಡಗ್ರ ಸಿಪಾಯಿ’ ಕೊಡಗಿನ ಬಹುತೇಕ ಊರುಗಳಲ್ಲಿ ಯಶಸ್ವಿ ಪ್ರದರ್ಶನ ಕಂಡಿತ್ತು. ಕೊಡಗಿನ ಸೈನಿಕನೋರ್ವ ಕರ್ತವ್ಯದಿಂದ ನಿವೃತ್ತನಾದ ಬಳಿಕ ಸಾಮಾಜಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳುವ ಮತ್ತು ನಿವೃತ್ತ ಯೋಧನ ಬದುಕು ಬವಣೆಯ ಕಥೆಯನ್ನು ಈ ಚಿತ್ರಹೊಂದಿದೆ. ಉಳುವಗಂಡ ಕಾವೇರಿ ಚಿತ್ರಕಥೆ ಬರೆದಿರುವ ಕೊಡವರ ಸಿಪಾಯಿಗೆ ಕೊಟ್ಟುಕತ್ತೀರ ಪ್ರಕಾಶ್ ಕಾರ್ಯಪ್ಪರ ನಿರ್ದೇಶನವಿದೆ.