ತುರ್ತು ಅರ್ಜಿ ಮಾತ್ರ ವಿಚಾರಣೆ: ರಾಜ್ಯ ಹೈಕೋರ್ಟ್ನಿಂದ ಸುತ್ತೋಲೆ
ಕೊರೋನಾ ಭೀತಿ ಹಿನ್ನೆಲೆ
ಬೆಂಗಳೂರು, ಮಾ.15: ಕೊರೋನಾ ವೈರಸ್ ಭೀತಿ ಹಿನ್ನೆಲೆಯಲ್ಲಿ ಮಾ.16ರಿಂದ ರಾಜ್ಯ ಹೈಕೋರ್ಟ್ನಲ್ಲಿ ಕೇವಲ ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ಕೈಗೆತ್ತಿಕೊಳ್ಳಲು ನಿರ್ಧರಿಸಿದ್ದು, ಈ ಬಗ್ಗೆ ಸುತ್ತೋಲೆ ಹೊರಡಿಸಿರುವ ಹೈಕೋರ್ಟ್ ಬೆಂಗಳೂರು, ಕಲಬುರಗಿ, ಧಾರವಾಡ ಪೀಠಗಳಲ್ಲಿ ಹಾಗೂ ಅಧೀನ ನ್ಯಾಯಾಲಯಗಳಿಗೂ ಇದು ಅನ್ವಯಿಸುತ್ತದೆ ಎಂದು ತಿಳಿಸಿದೆ.
ಸಾರ್ವಜನಿಕ ಸ್ಥಳಗಳಲ್ಲಿ ಹೆಚ್ಚಿನ ಜನ ಸೇರುವುದನ್ನು ತಪ್ಪಿಸಿ ಕೊರೋನಾ ಹರಡುವುದನ್ನು ನಿಯಂತ್ರಿಸುವ ಬಗ್ಗೆ ಕೇಂದ್ರ ಸರಕಾರ ಸೂಚನೆ ನೀಡಿತ್ತು. ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ಆದೇಶದಂತೆ ರಾಜ್ಯ ಹೈಕೋರ್ಟ್ ಈ ನಿರ್ಧಾರವನ್ನು ಕೈಗೊಂಡಿದೆ.
ಕೋರ್ಟ್ ಸಿಬ್ಬಂದಿಯ, ವಕೀಲರ, ಕಕ್ಷಿದಾರರ, ವೀಕ್ಷಕರ ಹಿತದೃಷ್ಟಿಯಿಂದ ತುರ್ತು ಅರ್ಜಿಗಳನ್ನು ಮಾತ್ರ ವಿಚಾರಣೆಗೆ ತೆಗೆದುಕೊಳ್ಳುತ್ತೇವೆ. ಮುಂದಿನ ಆದೇಶದವರೆಗೂ ಇದೇ ರೀತಿ ಹೈಕೋರ್ಟ್ ಹಾಗೂ ಅಧೀನ ನ್ಯಾಯಾಲಯಗಳ ಕಾರ್ಯಕಲಾಪಗಳು ನಡೆಯುತ್ತವೆ ಎಂದು ಹೈಕೋರ್ಟ್ ಆದೇಶದಲ್ಲಿ ಹೇಳಿದೆ.
ಇನ್ನು, ಮಾ.17 ರಿಂದ ಹೈಕೋರ್ಟ್ಗೆ ಭೇಟಿ ನೀಡುವ ವೀಕ್ಷಕರನ್ನು(ಬಾರ್ ಕೌನ್ಸಿಲ್ ಸದಸ್ಯರನ್ನು ಹೊರತುಪಡಿಸಿ) ಆರೋಗ್ಯ ಇಲಾಖೆಯ ಅಧಿಕಾರಿಗಳಿಂದ ಥರ್ಮಲ್ ಸ್ಕ್ರೀನಿಂಗ್ಗೆ ಒಳಪಡಿಸಲಾಗುವುದು ಎಂದು ಹೈಕೋರ್ಟ್ ತಿಳಿಸಿದೆ. ಕೊರೋನಾ ಭೀತಿ ಹಿನ್ನೆಲೆ ಇದಕ್ಕೂ ಮುಂಚೆ ಸುಪ್ರೀಂಕೋರ್ಟ್ ಕೂಡ ತುರ್ತು ಅರ್ಜಿಗಳ ವಿಚಾರಣೆಗೆ ಮುಂದಾಗಿತ್ತು. ಸುಪ್ರೀಂಕೋರ್ಟ್ ನಡೆಯನ್ನೇ ಅನುಸರಿಸಿರುವ ಹಲವು ರಾಜ್ಯಗಳ ಹೈಕೋರ್ಟ್ಗಳೂ ತುರ್ತು ಅರ್ಜಿ ವಿಚಾರಣೆಗೆ ಮಾತ್ರ ಮುಂದಾಗಿವೆ.
ಇದುವರೆಗೂ ಭಾರತದಲ್ಲಿ ಕೊರೋನಾ ಸೋಂಕಿತರ ಸಂಖ್ಯೆ 107ಕ್ಕೆ ಏರಿದ್ದು, ಇಬ್ಬರು ಸಾವನ್ನಪ್ಪಿದ್ದಾರೆ. ಕರ್ನಾಟಕದಲ್ಲಿ ಒಟ್ಟು 6 ಕೊರೋನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿದ್ದು, ಒಬ್ಬರು ಮೃತಪಟ್ಟಿದ್ದಾರೆ. ಕೊರೊನಾ ಹರಡದಂತೆ ರಾಜ್ಯದಲ್ಲಿ ಹಲವು ಕ್ರಮಗಳನ್ನು ಕೈಗೊಂಡಿದ್ದು, ಶಾಲಾ-ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಹಾಗೂ ಚಿತ್ರಮಂದಿರ, ಮಾಲ್, ಪಬ್ಗಳನ್ನು ಒಂದು ವಾರ ಸ್ಥಗಿತಗೊಳಿಸಲಾಗಿದೆ.