ಸಚಿವ ಸುಧಾಕರ್ ರನ್ನು ಸಂಪುಟದಿಂದ ವಜಾ ಮಾಡಿ: ಬಿಎಸ್ವೈಯನ್ನು ಭೇಟಿಯಾಗಿ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು
ಬೆಂಗಳೂರು, ಎ.13: ಕೊರೋನ ಸಂಕಷ್ಟದ ಸಂದರ್ಭದಲ್ಲಿ ಈಜುಕೊಳದಲ್ಲಿ ವೈದ್ಯಕೀಯ ಸಚಿವ ಸುಧಾಕರ್ ತಮ್ಮ ಕುಟುಂಬದ ಸದಸ್ಯರ ಜತೆಗಿರುವ ಫೋಟೋ ಹಾಕಿದ್ದನ್ನು ಖಂಡಿಸಿ ಹಾಗೂ ಅವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಬೇಕೆಂದು ಆಗ್ರಹಿಸಿ ಕಾಂಗ್ರೆಸ್ ಪಕ್ಷದ ಮುಖಂಡರು ಮುಖ್ಯಮಂತ್ರಿ ಯಡಿಯೂರಪ್ಪಗೆ ಮನವಿ ಸಲ್ಲಿಸಿದ್ದಾರೆ.
ಸೋಮವಾರ ಗೃಹ ಕಚೇರಿ ಕೃಷ್ಣಾದಲ್ಲಿ ಮುಖ್ಯಮಂತ್ರಿ ಬಿಎಸ್ವೈರನ್ನು ಭೇಟಿಯಾದ ಕಾಂಗ್ರೆಸ್ ಯುವ ಘಟಕದ ಮುಖಂಡರು, ಕೂಡಲೇ ಸುಧಾಕರ್ ರನ್ನು ಸಚಿವ ಸಂಪುಟದಿಂದ ವಜಾ ಮಾಡಬೇಕು ಎಂದು ಆಗ್ರಹಿಸಿದರು.
ಕೊರೋನದಿಂದ ಜನರು ಸಂಕಷ್ಟದಲ್ಲಿರುವಾಗ ಸಚಿವರಾಗಿ ಸುಧಾಕರ್ ಜನರ ಸಮಸ್ಯೆಗಳಿವೆ ಸ್ಪಂದಿಸದೆ ಈಜುಕೊಳದಲ್ಲಿ ನೆಮ್ಮದಿಯಾಗಿ ಮಜಾ ಮಾಡುತ್ತಿದ್ದಾರೆ. ಅಲ್ಲದೆ, ಅದನ್ನು ಸಾಮಾಜಿಕ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ. ಇಂತಹವರಿಂದ ಜನರನ್ನು ರಕ್ಷಿಸಲು ಸಾಧ್ಯವಿಲ್ಲ. ಹೀಗಾಗಿ, ಅವರನ್ನು ಕೂಡಲೇ ಸಂಪುಟದಿಂದ ಕೈಬಿಡಬೇಕು ಎಂದು ಕಾಂಗ್ರೆಸ್ ಮುಖಂಡರು ಮುಖ್ಯಮಂತ್ರಿಯನ್ನು ಆಗ್ರಹಿಸಿದ್ದಾರೆ.
ಕೊರೋನ ನಿಯಂತ್ರಣ ಉಸ್ತುವಾರಿಯನ್ನು ಹೊತ್ತಿರುವ ಸಚಿವ ಡಾ.ಕೆ.ಸುಧಾಕರ್ ರವಿವಾರ ತಮ್ಮ ಕುಟುಂಬ ಸದಸ್ಯರ ಜತೆಗೆ ಈಜುಕೊಳದಲ್ಲಿ ಈಜಾಡುತ್ತಿರುವ ಮಾಡುತ್ತಿದ್ದ ಫೋಟೋವನ್ನು ಟ್ವೀಟ್ ಮಾಡಿದ್ದರು. ಈ ಫೋಟೋಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿದ್ದವು. ಬಳಿಕ ಟ್ವೀಟ್ ಅನ್ನು ಅವರು ಡಿಲಿಟ್ ಮಾಡಿದ್ದಾರೆ.