ಜನತೆಯ ಆಶೋತ್ತರಗಳನ್ನು ಪೂರೈಸುವ ಮೂಲಕ ನುಡಿದಂತೆ ನಡೆದ ಬಿಎಸ್ ವೈ: ಸಚಿವ ಗೋಪಾಲಯ್ಯ
ಹಾಸನ, ಜು.27: ರಾಜ್ಯದ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಅವರ ನೇತೃತ್ವದಲ್ಲಿ ಸರ್ಕಾರ ಒಂದು ವರ್ಷ ಯಶಸ್ವಿಯಾಗಿ ಪೊರ್ಣಗೊಳಿಸಿದ್ದು, ಜನತೆಯ ಆಶೋತ್ತರಗಳನ್ನು ಪೂರೈಸುವ ಮೂಲಕ ನುಡಿದಂತೆ ನಡೆದಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಹಾಗೂ ಆಹಾರ ಮತ್ತು ನಾಗರೀಕ ಸರಬರಾಜು ಇಲಾಖೆ ಸಚಿವ ಕೆ.ಗೋಪಾಲಯ್ಯ ತಿಳಿಸಿದರು.
ನಗರದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಯಡಿಯೂರಪ್ಪ ಅಧಿಕಾರ ಸ್ವೀಕರಿಸಿದ ಬಳಿಕ ಹಲವು ಸವಾಲುಗಳನ್ನು ಎದುರಿಸಬೇಕಾಯಿತು. ರಾಜ್ಯದ 21 ಜಿಲ್ಲೆ ಪ್ರವಾಹ ಪೀಡಿತವಾದವು. ಆ ವೇಳೆ ಸಮರ್ಥವಾಗಿ ನಿಭಾಯಿಸುವಲ್ಲಿ ಯಶಸ್ವುಯಾಗಿದ್ದಾರೆ. ಅಲ್ಲದೆ ಫೆಬ್ರವರಿ ತಿಂಗಳಲ್ಲಿ ಕೊರೋನ ಹಾವಳಿಯನ್ನು ಸಮರ್ಥವಾಗಿ ನಿಭಾಯಿಸಿದ್ದಾರೆ.
ನನಗೆ ಬುದ್ದಿ ಬಂದಾಗಿನಿಂದ ಕೊರೋನ ಹಾಗೂ ನೆರೆ ಹಾವಳಿಯಂತಹ ಕೆಟ್ಟ ಪರಿಸ್ಥಿತಿ ರಾಜ್ಯ ಕಂಡಿಲ್ಲ. ಯಾವ ನಾಯಕರಿಗೂ ಯಡಿಯೂರಪ್ಪ ಅವರು ಎದುರಿಸಿದಷ್ಟು ಸವಾಲು ಎದುರಾಗಿಲ್ಲ. ಎಲ್ಲಾ ಪರಿಸ್ಥಿತಿ ಯನ್ನು ಸಮರ್ಥವಾಗಿ ನಿಭಾಯಿಸಿದ ಕೀರ್ತಿ ನಮ್ಮ ರಾಜ್ಯ ಬಿಜೆಪಿಯ ನಾಯಕರಾದ ಯಡಿಯೂರಪ್ಪ ಅವರಿಗೆ ಸಲ್ಲುತ್ತದೆ. ನಮ್ಮ ಸರ್ಕಾರದ ಎಲ್ಲಾ ಖಾತೆಯ ಸಚಿವರು ಯಡಿಯೂರಪ್ಪ ಅವರೊಂದಿಗೆ ಸಮರ್ಥವಾಗಿ ಸ್ಪಂದಿಸಿದ್ದಾರೆ. ವಿವಿಧ ಇಲಾಖೆಗಳ ಯೋಜನೆಗಳನ್ನು ಜನರಿಗೆ ತಲುಪಿಸಲು ಸೂಕ್ತ ಕ್ರಮವಹಿಸಿದ್ದಾರೆ. ರಾಜ್ಯದಲ್ಲಿ ಆಹಾರ ಇಲಾಕೆಯಿಂದ ಪಡಿತರ ಕಾರ್ಡ್ ಇಲ್ಲದವರಿಗೂ ಆಹಾರ ಧಾನ್ಯ ವಿತರಿಸುವ ಮೂಲಕ ಕೊರೋನ ಸಂಕಷ್ಟದಲ್ಲಿ ಜನರಿಗೆ ನೆರವಾಗಿದ್ದೇವೆ ಎಂದು ತಿಳಿಸಿದರು.
ಸಿಎಂ ಯಡಿಯೂರಪ್ಪ ಅವರು ನುಡಿದಂತೆ ಎಚ್.ವಿಶ್ವನಾಥ್ ಅವರಿಗೆ ರಾಜಕೀಯ ಸ್ಥಾನಮಾನ ನೀಡಿದ್ದಾರೆ. ಮುಂದಿನ ದಿನ ಅವರಿಗೆ ಸಚಿವ ಸ್ಥಾನ ನೀಡುವ ವಿಚಾರ ಹಾಗೂ ರಾಜ್ಯ ಸಚಿವ ಸಂಪುಟ ಪುನಾರಚನೆ ಕುರಿತು ಹೈಕಮಾಂಡ್- ಮುಖ್ಯಮಂತ್ರಿ ಹಾಗೂ ರಾಜ್ಯ ಹಿರಿಯ ಬಿಜೆಪಿ ನಾಯಕರು ತೀರ್ಮಾನಿಸಲಿದ್ದಾರೆ ಎಂದರು.
ಕೊವಿಡ್ ಚಿಕಿತ್ಸಾ ಪರಿಕರ ಖರೀದಿ ಅಕ್ರಮ ವಿಚಾರವಾಗಿ ಸಿದ್ದರಾಮಯ್ಯ ಅವರು ಕಾನೂನು ಹೋರಾಟ ಮಾಡುವುದಾಗಿ ಹೇಳಿದ್ದಾರೆ. ಆದರೆ ಈ ವಿಚಾರವಾಗಿ ಬಿಜೆಪಿ ಸಚಿವರು ಲೆಕ್ಕ ನೀಡಿದ್ದಾರೆ. ಕೊವಿಡ್ ಪರಿಕರ ಖರೀದಿಯಲ್ಲಿ ಸರ್ಕಾರ ತಪ್ಪು ಮಾಡಿಲ್ಲ ಹಾಗೂ ಯಾವುದೇ ಅಕ್ರಮವೆಸಗಿಲ್ಲ ಎಂದು ಗೋಪಾಲಯ್ಯ ಸರ್ಕಾರದ ಕ್ರಮವನ್ನು ಸಮರ್ಥಿಸಿಕೊಂಡರು.
ಹಾಸನದ ಏಳು ಖಾಸಗಿ ಆಸ್ಪತ್ರಗಳು 300 ಹಾಸಿಗೆಗಳನ್ನು ಕೊವಿಡ್ ಚಿಕಿತ್ಸೆ ಗೆ ಸರ್ಕಾರಕ್ಕೆ ನೀಡಲಿದ್ದಾರೆ. ಈ ವಿಚಾರವಾಗಿ ಮಾತುಕತೆ ನಡೆದಿದ್ದು ಜನರಿಗೆ ಗುಣಮಟ್ಟದ ಚಿಕಿತ್ಸೆ ನೀಡಲು ಜಿಲ್ಲೆಯ ಖಾಸಗಿ ಆಸ್ಪತ್ರೆಗಳು ಸೂಕ್ತ ವಾಗಿ ಸ್ಪಂದಿಸಿವೆ ಎಂದು ಹೇಳಿದರು.
ಒಂದು ವರ್ಷ ಸಾಧನೆ ಕಾರ್ಯಕ್ರಮ
ನಗರಸಭೆ ಸಭಾಂಗಣದಲ್ಲಿ ಆಯೋಜಿಸಿದ್ದ ಸರ್ಕಾರದ ಒಂದು ವರ್ಷದ ಸಾಧನೆ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರೊಂದಿಗೆ ನಗರದ ಮಡಿವಾಳ ಸಮಾಜದ ಪುಷ್ಪ ಅವರು ಮಾತನಾಡಿದರು. ರಾಜ್ಯ ಸರ್ಕಾರದ ನೆರವಿನಿಂದಾಗಿ ಸಣ್ಣ ಸಮುದಾಯವಾದ ಮಡಿವಾಳ ಜನಾಂಗಕ್ಕೆ 5 ಸಾವಿರ ಸಹಾಯಧನದ ಸ್ಪಂದನೆ ಅಭಿನಂದನಾರ್ಹ ಎಂದರು.
ಹಾಗೂ ರಾಜ್ಯದ ಮಡಿವಾಳ ಸಮುದಾಯ ಕೊರೋನ ಸಂಕಷ್ಟದಲ್ಲಿ ಹೆಚ್ಚು ತೊಂದರೆಗೆ ತುತ್ತಾಗಿದೆ. ಆದ್ದರಿಂದ ಮುಂದಿನ ದಿನ ಇನ್ನಷ್ಟು ಹೆಚ್ಚಿನ ಪರಿಹಾರ ಒದಗಿಸಲು ಒತ್ತಾಯಿಸಿದರು. ಇದಕ್ಕೆ ಉತ್ತರಿಸಿದ ಸಿಎಂ ರಾಜ್ಯ ಸರ್ಕಾರ ಕೊರೋನ ಸಂಕಷ್ಟ ದಲ್ಲಿ ಆರ್ಥಿಕವಾಗಿ ಹಿಂದಿದ್ದರೂ ಸಹ ಜನರ ಸಮಸ್ಯೆ ಗೆ ಸ್ಪಂದಿಸಿದೆ. ಸಾಧ್ಯವಾದಷ್ಟು ಮುಂದೆಯೂ ಸಹ ನೆರವಿನ ಹಸ್ತ ಚಾಚುವುದಾಗಿ ಇದೇ ವೇಳೆ ಭರವಸೆ ನೀಡಿದರು.