ರಾಜ್ಯದಲ್ಲಿ ಒಂದೇ ದಿನ 6,259 ಮಂದಿಗೆ ಕೊರೋನ ದೃಢ; 6,777 ಮಂದಿ ಆಸ್ಪತ್ರೆಯಿಂದ ಬಿಡುಗಡೆ
24 ಗಂಟೆಗಳಲ್ಲಿ 110 ಮಂದಿ ಸೋಂಕಿಗೆ ಬಲಿ
ಬೆಂಗಳೂರು, ಆ.4: ರಾಜ್ಯದಲ್ಲಿ ಕೆಲದಿನಗಳಿಂದ ಮಹಾಮಾರಿ ಕೊರೋನ ಸೋಂಕು ಆತಂಕಕಾರಿ ಸ್ಥಿತಿಯಲ್ಲಿ ಏರುತ್ತಿದೆ. ದೈನಂದಿನ ಪ್ರಕರಣಗಳಲ್ಲಿ ಮತ್ತಷ್ಟು ಹೆಚ್ಚಳವಾಗಿದ್ದು, ಇಂದು ಮತ್ತೆ 6 ಸಾವಿರಕ್ಕೂ ಅಧಿಕ ಪ್ರಕರಣಗಳು ಒಂದೇ ದಿನದಲ್ಲಿ ಪತ್ತೆಯಾಗಿವೆ. ಒಟ್ಟಾರೆ ಸೋಂಕಿತರ ಸಂಖ್ಯೆ 1.45 ಲಕ್ಷದ ಗಡಿ ದಾಟಿದೆ.
ಸೋಮವಾರ ಸಂಜೆಯಿಂದ ಮಂಗಳವಾರ ಸಂಜೆವರೆಗೆ ಮತ್ತೆ 6,259 ಮಂದಿಗೆ ಕೊರೋನ ವೈರಸ್ ಸೋಂಕು ದೃಢಪಟ್ಟಿದ್ದು, ಈ ಮೂಲಕ ಸೋಂಕಿತರ ಒಟ್ಟು ಸಂಖ್ಯೆ 1,45,830 ಕ್ಕೆ ಏರಿಕೆಯಾಗಿದೆ. 24 ಗಂಟೆಗಳಲ್ಲಿ 110 ಮಂದಿ ಸೋಂಕಿಗೆ ಬಲಿಯಾಗಿದ್ದಾರೆ. ಇದರೊಂದಿಗೆ ಸಾವಿನ ಸಂಖ್ಯೆ 2,704ಕ್ಕೆ ಏರಿಕೆಯಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.
ಬೆಂಗಳೂರು ನಗರ ಜಿಲ್ಲೆಯಲ್ಲಿ ಒಂದೇ ದಿನ 30 ಮಂದಿ ಕೊರೋನ ಸೋಂಕಿಗೆ ಬಲಿಯಾಗಿದ್ದಾರೆ. ದಕ್ಷಿಣ ಕನ್ನಡ 13, ಮೈಸೂರು 9, ಧಾರವಾಡ 8, ಉಡುಪಿ 6, ಬಳ್ಳಾರಿ 5, ದಾವಣಗೆರೆ 5, ಶಿವಮೊಗ್ಗ 4, ಚಿತ್ರದುರ್ಗ 3, ಚಾಮರಾಜನಗರ 3, ಬೀದರ್ 3, ಚಿಕ್ಕಬಳ್ಳಾಪುರ, ರಾಯಚೂರು, ಹಾಸನ, ಮಂಡ್ಯ, ಯಾದಗಿರಿ ಮತ್ತು ಚಿಕ್ಕಮಗಳೂರು ಜಿಲ್ಲೆಯಲ್ಲಿ ತಲಾ 2, ವಿಜಯಪುರ, ತುಮಕೂರು, ಗದಗ, ಬಾಗಲಕೋಟೆ, ಕೊಪ್ಪಳ, ಹಾವೇರಿ ಮತ್ತು ಬೆಳಗಾವಿ ಜಿಲ್ಲೆಯಲ್ಲಿ ತಲಾ ಒಂದು ಸಾವು ಸಂಭವಿಸಿದೆ.
ಸೋಂಕು ಖಚಿತಗೊಂಡ ಪ್ರಕರಣಗಳ ಪೈಕಿ ಬೆಂಗಳೂರು ನಗರ 2035, ಮೈಸೂರು 662, ಕಲಬುರಗಿ 285, ಬಳ್ಳಾರಿ 284, ಬೆಳಗಾವಿ 263, ದಕ್ಷಿಣ ಕನ್ನಡ 225, ದಾವಣಗೆರೆ 191, ಧಾರವಾಡ 188, ಹಾಸನ 188, ಚಿಕ್ಕಬಳ್ಳಾಪುರ 171, ಉಡುಪಿ 170, ಕೊಪ್ಪಳ 163, ಹಾವೇರಿ 157, ರಾಯಚೂರು 144, ಬಾಗಲಕೋಟೆ 144, ಮಂಡ್ಯ 126, ಬೀದರ್ 114, ಗದಗ 96, ಬೆಂಗಳೂರು ಗ್ರಾಮಾಂತರ 82, ತುಮಕೂರು 78, ಯಾದಗಿರಿ 76, ವಿಜಯಪುರ 71, ರಾಮನಗರ 65, ಚಿಕ್ಕಮಗಳೂರು 63, ಚಾಮರಾಜನಗರ 57, ಉತ್ತರ ಕನ್ನಡ 57, ಕೋಲಾರ 46, ಕೊಡಗು 31, ಶಿವಮೊಗ್ಗ 15, ಚಿತ್ರದುರ್ಗ ಜಿಲ್ಲೆಯಲ್ಲಿ 12 ಪ್ರಕರಣ ಪಾಸಿಟಿವ್ ಬಂದಿದೆ.
ಒಟ್ಟಾರೆ ರಾಜ್ಯದಲ್ಲಿ 1,45,830 ಕೊರೋನ ಸೋಂಕಿತರ ಪೈಕಿ 69,272 ಮಂದಿ ಸಂಪೂರ್ಣ ಗುಣಮುಖರಾಗಿದ್ದಾರೆ. ಇದರಲ್ಲಿ ಇಂದು ಒಂದೇ ದಿನ 6,777 ಮಂದಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಉಳಿದಂತೆ ಇದುವರೆಗೆ 2,704 ಮಂದಿ ಸೋಂಕಿನಿಂದ ಸಾವನ್ನಪ್ಪಿದ್ದು, 73,846 ಮಂದಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ತಿಳಿಸಿದೆ.