ಮಡಿಕೇರಿ: ಬೈಕ್ - ಟಿಪ್ಪರ್ ನಡುವೆ ಅಪಘಾತ; ಇಬ್ಬರು ಮೃತ್ಯು
ಮಡಿಕೇರಿ, ಸೆ.1: ಬೈಕ್ ಮತ್ತು ಟಿಪ್ಪರ್ ನಡುವೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಬೈಕ್ ಸವಾರರಿಬ್ಬರು ಸಾವನ್ನಪ್ಪಿರುವ ಘಟನೆ ಬೇಟೋಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ರಾಮನಗರದಲ್ಲಿ ನಡೆದಿದೆ.
ರಾಮನಗರ ನಿವಾಸಿ ಭರತ್ (37) ಹಾಗೂ ಕುಶಾಲನಗರ ಹೊಸಪಟ್ಟಣ ನಿವಾಸಿ ಹಾಲಿ ರಾಮನಗರದಲ್ಲಿ ವಾಸವಿರುವ ಶಿವಕುಮಾರ್ (35) ಮೃತರು.
ಭರತ್ ಮತ್ತು ಶಿವಕುಮಾರ್ ಅವರು ಬೈಕ್ನಲ್ಲಿ ವಿರಾಜಪೇಟೆಯಿಂದ ಮಧ್ಯಾಹ್ನ ಮನೆಗೆ ಹಿಂದಿರುಗುತ್ತಿದ್ದರು. ಇದೇ ಸಂದರ್ಭ, ಹೆಗ್ಗಳ ಕಲ್ಲು ಕ್ವಾರೆಯಿಂದ ವೀರಾಜಪೇಟೆಗೆ ಆಗಮಿಸುತ್ತಿದ್ದ ಟಿಪ್ಪರ್ ಲಾರಿ ಮತ್ತು ಬೈಕ್ ನಡುವೆ ಮುಖಾಮುಖಿ ಢಿಕ್ಕಿ ಸಂಭವಿಸಿತು. ಸ್ಥಳದಲ್ಲೆ ಬೈಕ್ ಹಿಂಬದಿಯ ಸವಾರ ಶಿವಕುಮಾರ್ ಸಾವನ್ನಪ್ಪಿದರೆ, ಗಂಭೀರ ಸ್ವರೂಪದಲ್ಲಿ ಗಾಯಗೊಂಡಿದ್ದ ಭರತ್, ವಿರಾಜಪೇಟೆ ಆಸ್ಪತ್ರೆಗೆ ಸಾಗಿಸುವ ಮಾರ್ಗದ ಮಧ್ಯೆ ಕೊನೆಯುಸಿರೆಳೆದರು.
ಘಟನೆಗೆ ಸಂಬಂಧಿಸಿದಂತೆ ವಿರಾಜಪೇಟೆ ನಗರ ಪೊಲೀಸರು ಟಿಪ್ಪರ್ ಚಾಲಕ ಗಿರೀಶ್ ಎಂಬಾತನ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಘಟನಾ ಸ್ಥಳಕ್ಕೆ ಎಸ್ಪಿ ಕ್ಷಮಾ ಮಿಶ್ರ, ಡಿವೈಎಸ್ಪಿ ಸಿ.ಟಿ.ಜಯಕುಮಾರ್, ವಿರಾಜಪೇಟೆ ನಗರ ಠಾಣಾಧಿಕಾರಿ ಹೆಚ್.ಎಸ್.ಬೋಜಪ್ಪ ಭೇಟಿ ನೀಡಿ ಪರಿಶೀಲಿಸಿದರು.