'ಹಿಂಪಡೆದ ಕ್ರಿಮಿನಲ್ ಕೇಸ್'ಗಳ ಮಾಹಿತಿ ನೀಡಲು ಗೃಹ ಸಚಿವರಿಗೆ ವಿಪಕ್ಷ ನಾಯಕ ಸಿದ್ದರಾಮಯ್ಯ ಪತ್ರ
ಬೆಂಗಳೂರು, ಸೆ. 5: ಬಿಜೆಪಿ ಮುಖಂಡರು ಸೇರಿದಂತೆ ವಿವಿಧ ಸಂಘಟನೆಗಳು ಮತ್ತು ವ್ಯಕ್ತಿಗಳ ವಿರುದ್ಧ ರಾಜ್ಯದ ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದ ಕ್ರಿಮಿನಲ್ ಮೊಕದ್ದಮೆಗಳನ್ನು ವಾಪಸ್ ಪಡೆದಿರುವುದಕ್ಕೆ ಸಂಬಂಧಿಸಿದ ಸಮಗ್ರ ವಿವರಗಳನ್ನು ಅತ್ಯಂತ ಶೀಘ್ರ ನೀಡಬೇಕು ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ, ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರಿಗೆ ಪತ್ರ ಬರೆದಿದ್ದಾರೆ.
ಶನಿವಾರ ಗೃಹ ಸಚಿವ ಬಸವರಾಜ ಬೊಮ್ಮಾಯಿ ಹಾಗೂ ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಗೆ ಎರಡು ಪ್ರತ್ಯೇಕ ಪತ್ರ ಬರೆದಿರುವ ವಿಪಕ್ಷ ನಾಯಕ ಸಿದ್ದರಾಮಯ್ಯ, 2009ರಿಂದ ಇದುವರೆವಿಗೆ ವಿವಿಧ ವ್ಯಕ್ತಿ ಮತ್ತು ಸಂಘಟನೆಗಳಿಗೆ ಸಂಬಂಧಿಸಿದಂತೆ ವಿಚಾರಣೆ ಮತ್ತು ತನಿಖೆಯಿಂದ ವಾಪಸ್ ಪಡೆದಿರುವ ರಾಜಕೀಯ ವ್ಯಕ್ತಿಗಳು ಹಾಗೂ ವಿವಿಧ ಸಂಘಟನೆಗಳಿಂದ ಸಂಬಂಧಿಸಿದ ಎಲ್ಲ ಪ್ರಕರಣಗಳ ಮಾಹಿತಿಯನ್ನು ಕೂಡಲೇ ನೀಡಬೇಕು ಎಂದು ಕೋರಿದ್ದಾರೆ.
ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ವಿಚಾರಣೆಯಿಂದ ಹಿಂದಕ್ಕೆ ಪಡೆಯಲು ಮತ್ತು ರದ್ದು ಮಾಡಲು ತೀರ್ಮಾನಿಸಿರುವ ಪ್ರಕರಣಗಳ ಮಾಹಿತಿಯನ್ನೂ ನೀಡಿ, ರಾಜಕಾರಣಿಗಳ ಹೆಸರು, ಸಂಘಟನೆಗಳ ಹೆಸರು, ಆರೋಪಿತರ ಹೆಸರು, ಘಟನೆಯ ವಿವರ, ಪ್ರಕರಣ ದಾಖಲಿಸಲಾದ ಸೆಕ್ಷನ್, ಪ್ರಕರಣ ಹಿಂಪಡೆದ ದಿನಾಂಕ ಮತ್ತು ಆದೇಶ, ಹಿಂಪಡೆಯಲು ಕಾರಣ, ಈ ಸಂಬಂಧ ಕಾನೂನು ಇಲಾಖೆ ಹಾಗೂ ಅಡ್ವೊಕೇಟ್ ಜನರಲ್(ಎಜಿ) ಅಭಿಪ್ರಾಯ ಹಾಗೂ ಷರಾವನ್ನು ಒಳಗೊಂಡ ಮಾಹಿತಿಯನ್ನು ಅತ್ಯಂತ ಜರೂರಾಗಿ ನೀಡಬೇಕು ಎಂದು ಸಿದ್ದರಾಮಯ್ಯ ಮನವಿ ಮಾಡಿದ್ದಾರೆ.
'ಬಿಜೆಪಿ ನಾಯಕರ 62 ಕೇಸ್ ರದ್ದು' ಎಂದು ಸೆ.3ರಂದು ಪತ್ರಿಕೆ ಮುಖಪುಟದಲ್ಲಿ ಪ್ರಕಟವಾದ ಸುದ್ದಿಯನ್ನು ಆಧರಿಸಿ ವಿಧಾನಸಭೆ ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯನವರು ಗೃಹ ಸಚಿವ ಬಸವರಾಜ ಬೊಮ್ಮಾಯಿ ಅವರು ಮತ್ತು ಗೃಹ ಇಲಾಖೆ ಅಪರ ಮುಖ್ಯ ಕಾರ್ಯದರ್ಶಿಯವರಿಗೆ ಮೇಲ್ಕಂಡ ಪ್ರಕರಣಗಳ ಬಗ್ಗೆ ಸಮಗ್ರ ಮಾಹಿತಿ ಕೋರಿ ಪತ್ರ ಬರೆದಿದ್ದಾರೆ ಎಂದು ಗೊತ್ತಾಗಿದೆ.