ದಾಖಲಾತಿ ಇಲ್ಲದೆ 3 ವರ್ಷಗಳಿಂದ ಮುಚ್ಚಲಾಗಿದ್ದ ಸರಕಾರಿ ಶಾಲೆಗಳು ಪುನರಾರಂಭಕ್ಕೆ ಸಜ್ಜು
ಎಚ್.ಡಿ.ಕೋಟೆ, ಸೆ. 13: ಸುಮಾರು 3 ವರ್ಷಗಳ ಹಿಂದೆ ಮಕ್ಕಳ ದಾಖಲಾತಿಯೇ ಇಲ್ಲದೆ ಮುಚ್ಚಲಾಗಿದ್ದ ತಾಲೂಕಿನ 3 ಗ್ರಾಮಗಳ ಸರಕಾರಿ ಶಾಲೆಗಳನ್ನು ಪುನರಾರಂಭಿಸಲು ಶಿಕ್ಷಣ ಇಲಾಖೆ ಗ್ರಾಮಸ್ಥರು ಮತ್ತು ಪೋಷಕರ ಮನವೊಲಿಸುವಲ್ಲಿ ಯಶಸ್ವಿಯಾಗಿದೆ.
ತಾಲೂಕಿನ ಹಂಪಾಪುರ ಕ್ಲಸ್ಟರ್ ವಿಭಾಗದ ದಾಳೇಗೌಡನಹುಂಡಿ ಜಿ.ಎಲ್.ಪಿ.ಎಸ್ ಶಾಲೆ, ಕೆ.ಎಂ.ಹಳ್ಳಿ ಕ್ಲಸ್ಟರ್ ವಿಭಾಗದ ತಾರಕ ಜಿ.ಎಲ್.ಪಿ.ಎ.ಸ್. ಶಾಲೆ ಮತ್ತು ಹೆಗ್ಗನೂರು ವಿಭಾಗದ ಜೋರೆಹಳ್ಳ ಜಿ.ಎಲ್.ಪಿ.ಎಸ್. ಈ ಗ್ರಾಮಗಳ ಶೀಘ್ರದಲ್ಲಿ ಪುನರಾರಂಭಕ್ಕೆ ಸಜ್ಜುಗೊಂಡಿರುವ ಸರಕಾರಿ ಶಾಲೆಗಳು.
2017-18ನೇ ಸಾಲಿನಲ್ಲಿ ಈ ಶಾಲೆಗಳಿಗೆ ಮಕ್ಕಳ ದಾಖಲಾತಿ ಇಲ್ಲ ಎಂಬ ಕಾರಣದಿಂದ ಈ ಸರಕಾರಿ ಶಾಲೆಗಳನ್ನು ಮುಚ್ಚಲಾಗಿತ್ತು. ಈಗ ಹಲವು ದಿನಗಳ ಹಿಂದೆ ಶಿಕ್ಷಣ ಇಲಾಖೆಯ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ತಾಲೂಕು ಕ್ಷೇತ್ರ ಶಿಕ್ಷಣಾಧಿಕಾರಿ ರೇವಣ್ಣವರ ಸಹಕಾರದಿಂದ ಆಯಾ ಶಾಲೆಗಳ ವ್ಯಾಪ್ತಿಯ ಸಿ.ಆರ್.ಪಿ.ಗಳು ಗ್ರಾಮಗಳಿಗೆ ಭೇಟಿ ನೀಡಿ ಮಕ್ಕಳ ಸಮೀಕ್ಷೆ ನಡೆಸಿದಾಗ ದಾಳೇಗೌಡನಹುಂಡಿಯಲ್ಲಿ-12 ಮಕ್ಕಳು, ತಾರಕ-9 ಮತ್ತು ಜೋರೆಹಳ್ಳಿ-14 ಮಕ್ಕಳು ಶಿಕ್ಷಣಕ್ಕಾಗಿ ಬೇರೆಕಡೆಗಳಿಗೆ ಹೊಗುತ್ತಿರುವ ಅಂಶ ಬೆಳಕಿಗೆ ಬಂದಿದೆ.
ಕೂಡಲೇ ಶಿಕ್ಷಣ ಇಲಾಖೆ ಅಧಿಕಾರಿಗಳು ಗ್ರಾಮಸ್ಥರು ಮತ್ತು ಪೋಷಕರ ಸಭೆ ನಡೆಸಿ ಮಕ್ಕಳನ್ನು ಅದೇ ಗ್ರಾಮದ ಶಾಲೆಗಳಲ್ಲಿ ದಾಖಲಿಸುವುದಾದರೆ ಮುಚ್ಚಲಾಗಿರುವ ಶಾಲೆಗಳನ್ನು ಪುನರಾರಂಭಿಸುವುದಾಗಿ ತಿಳಿಸಿದರು. ಇಲಾಖಾ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಜೋರೆಹಳ್ಳ ಗ್ರಾಮದ ಗ್ರಾಮಸ್ಥರು ಸ್ವಯಂ ಪ್ರೇರಿತರಾಗಿ, ಕಲುಷಿತಗೊಂಡಿದ್ದ ಶಾಲಾ ಆವರಣವನ್ನು ಶ್ರಮದಾನದ ಮೂಲಕ ಶುಚಿಗೊಳಿಸುವ ಮೂಲಕ ಶಾಲೆಯ ಪುನರಾರಂಭಕ್ಕೆ ಸಿದ್ಧತೆ ನಡೆಸಿದ್ದಾರೆ.
ಮಕ್ಕಳ ದಾಖಲಾತಿ ಇಲ್ಲದ ಹಿನ್ನೆಲೆಯಲ್ಲಿ 2017-18ನೇ ಸಾಲಿನಲ್ಲಿ ತಾಲೂಕಿನ ಹಲವು ಸರಕಾರಿ ಶಾಲೆಗಳನ್ನು ಸರಕಾರದ ನಿಯಮಾನುಸಾರ ಮುಚ್ಚಲಾಗಿತ್ತು. ಈಗ ತಾಲೂಕಿ ದಾಳೇಗೌಡನಹುಂಡಿ, ತಾರಕ ಮತ್ತು ಜೋರೆಹಳ್ಳ ಗ್ರಾಮಗಳ ಸರ್ವೆ ನಡೆಸಿ ಮಕ್ಕಳ ದಾಖಲಾತಿ ಮಾಹಿತಿ ಪಡೆದುಕೊಂಡ ಹಿನ್ನೆಲೆಯಲ್ಲಿ ಶಾಲೆ ಪುನರಾಂಭಿಸಲು ಅವಕಾಶ ಇದೆ. ಹಾಗಾಗಿ ಸೆ.16ರಂದು ಆಯಾ ಗ್ರಾಪಂ, ತಾಪಂ ಮತ್ತು ಜಿಪಂ ಸದಸ್ಯರ ಸಲಹೆ ಮೇರೆಗೆ ಸಭೆ ನಡೆಸಿ ಅತೀ ಶೀಘ್ರದಲ್ಲಿ ಶಾಲೆಗಳನ್ನು ಪುನರಾರಂಭಿಸಲಾಗುವುದು.
-ರೇವಣ್ಣ, ಕ್ಷೇತ್ರ ಶಿಕ್ಷಣಾಧಿಕಾರಿ