ಶಿವಮೊಗ್ಗ: ಪೂಜೆಗೆಂದು ಬಂದಿದ್ದ ಅಪ್ರಾಪ್ತೆಯ ಅತ್ಯಾಚಾರ ಪ್ರಕರಣ: ಆರೋಪಿ ಪೂಜಾರಿಗೆ 14 ವರ್ಷಗಳ ಕಠಿಣ ಶಿಕ್ಷೆ
ಶಿವಮೊಗ್ಗ, ಅ.7: ಮನೆಯನ್ನೇ ದೇವಾಲಯ ಮಾಡಿಕೊಂಡಿದ್ದ ಪೂಜಾರಿಯೋರ್ವ ದೇವರ ಪೂಜೆಗೆಂದು ಬಂದ ಅಪ್ರಾಪ್ತ ಬಾಲಕಿಯ ಅತ್ಯಾಚಾರವೆಸಗಿದ ಅರೋಪ ಪ್ರಕರಣಕ್ಕೆ ಸಂಬಂಧಿಸಿದಂತೆ ನ್ಯಾಯಾಲಯ 14 ವರ್ಷಗಳ ಕಠಿಣ ಶಿಕ್ಷೆ ವಿಧಿಸಿದೆ.
ಒಂದನೇ ಜಿಲ್ಲಾ ಮತ್ತು ಸತ್ರ ನ್ಯಾಯಾಲಯವೂ ಆಗಿರುವ ಪೋಸ್ಕೋ ವಿಶೇಷ ನ್ಯಾಯಾಲಯದ ನ್ಯಾಯಾಧೀಶರಾದ ಕೆ.ಬಿ ಶಿವಪ್ರಸಾದ್ ಅವರು ಈ ತೀರ್ಪು ಪ್ರಕಟಿಸಿ, ಆರೋಪಿಗೆ 25 ಸಾವಿರ ರೂ. ದಂಡ ವಿಧಿಸಿದ್ದಾರೆ.
ಶಿವಕುಮಾರ್ ಎಂಬಾತ ನಗರದ ಅಚ್ಯುತ್ರಾವ್ ಬಡಾವಣೆಯಲ್ಲಿರುವ ತನ್ನ ಮನೆಯಲ್ಲಿಯೇ ಚೌಡೇಶ್ವರಿ ದೇವಿಯ ಪೂಜೆ ಮಾಡುತ್ತಿದ್ದ. ಈತನ ಮನೆಗೆ ಭಕ್ತಾದಿಗಳು ಬರುತ್ತಿದ್ದರು. ತಮ್ಮ ಸಂಕಷ್ಟ ನಿವಾರಣೆಗೆಂದು ಶಿವಕುಮಾರ್ ಹಲವು ಪೂಜೆಗಳನ್ನು ಮಾಡುತ್ತಿದ್ದ ಎನ್ನಲಾಗಿದೆ. ಅದೇ ರೀತಿ 2016 ರಲ್ಲಿ ಪೂಜೆಗೆಂದು ಬಂದ ಅಪ್ರಾಪ್ತ ಬಾಲಕಿಯನ್ನು ವಿಶೇಷ ಪೂಜೆಗೆಂದು ಕರೆಸಿ ಅತ್ಯಾಚಾರ ಎಸಗಿದ್ದ ಎಂದು ಆರೋಪಿಸಲಾಗಿದ್ದು, ಮೂರು ತಿಂಗಳ ನಂತರ ಬಾಲಕಿಯು ಲೈಂಗಿಕ ದೌರ್ಜನ್ಯ ನಡೆದಿರುವುದನ್ನು ತನ್ನ ಪೋಷಕರಿಗೆ ತಿಳಿಸಿದ್ದಳು. ಮೊದಲು ಆರೋಪಿ ಶಿವಕುಮಾರ್ ಅರೋಪವನ್ನು ನಿರಾಕರಿಸಿದ್ದ. ಆದರೆ ಫಾರೆನ್ಸಿಕ್ ವರದಿಯಲ್ಲಿ ಆರೋಪ ಸಾಬೀತಾಗಿತ್ತು.
ಪ್ರಕರಣವು ಮಹಿಳಾ ಠಾಣೆಯಲ್ಲಿ ದಾಖಲಾಗಿದ್ದು, ವಿಚಾರಣೆ ನಡೆಸಿದ ಪೊಲೀಸರು ಐಪಿಸಿ ಕಲಂ 376, ಪೋಸ್ಕೋ ಕಾಯ್ದೆ 6ರ ಅಡಿ ಪ್ರಕರಣ ದಾಖಲಿಸಿದ್ದರು. ಪೋಸ್ಕೋ ವಿಶೇಷ ನ್ಯಾಯಾಲಯದಲ್ಲಿ ವಿಚಾರಣೆ ನಡೆದು ಅಂತಿಮವಾಗಿ ಅ.06 ತೀರ್ಪು ರಂದು ಹೊರಬಿದ್ದಿದೆ.
ಸರ್ಕಾರಿ ಅಭಿಯೋಜಕ ಸತ್ತೀಶ್ ಕೆ.ಎಸ್ ಅವರು ವಾದ ಮಂಡಿಸಿದ್ದರು.