ನೆರೆ ಪರಿಹಾರ ನೀಡದ ಆರೋಪ: ಸರಕಾರಕ್ಕೆ ಹಣ ಕಳುಹಿಸಲು ಭಿಕ್ಷೆ ಬೇಡಿದ ರೈತರು
ಸಾಂದರ್ಭಿಕ ಚಿತ್ರ
ರಾಯಚೂರು, ಅ.23: ಬರಗಾಲ, ಪ್ರವಾಹದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದರೂ ಸರಕಾರ ಪರಿಹಾರ ನೀಡಲಿಲ್ಲ ಎಂದು ಆರೋಪಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆಯ ಮುಖಂಡರು ಶುಕ್ರವಾರ ರಾಯಚೂರು ನಗರದ ತೀನ್ ಖಂದಿಲ್ ವೃತ್ತದಲ್ಲಿ ಭಿಕ್ಷೆ ಬೇಡಿ ಹಣ ಸಂಗ್ರಹಿಸಿ ಸರಕಾರಕ್ಕೆ ಕಳುಹಿಸಿ ವಿನೂತನ ಪ್ರತಿಭಟನೆ ನಡೆಸಿದರು.
ಮುಖಂಡರು ಜೋಳಿಗೆ ಹಿಡಿದು ರಸ್ತೆ ಬದಿಯ ಅಂಗಡಿ, ವಾಹನ ಸವಾರರು, ಪಾದಚಾರಿಗಳ ಬಳಿ ತೆರಳಿ ಭಿಕ್ಷೆ ಬೇಡಿದರು.
ರೈತ ಸಂಘದ ಗೌರವಾಧ್ಯಕ್ಷ ಚಾಮರಸ ಮಾಲಿಪಾಟಿಲ ಮಾತನಾಡಿ, ನಾಲ್ಕೈದು ವರ್ಷಗಳಿಂದ ಬರಗಾಲದಿಂದ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಕೊರೋನ, ಪ್ರವಾಹದಿಂದಾಗಿ ಮನೆ, ಆಸ್ತಿಗಳನ್ನು ಕಳೆದುಕೊಳ್ಳುವ ಹಂತಕ್ಕೆ ಬಂದು ತಲುಪಿದ್ದಾರೆ. ಆದರೆ, ದಿವಾಳಿ ಎದ್ದಿರುವ ಕೇಂದ್ರ, ರಾಜ್ಯ ಸರಕಾರಗಳು ರೈತರ ಸಂಕಷ್ಟಕ್ಕೆ ಸ್ಪಂದಿಸಲು ಹಿಂದೇಟು ಹಾಕುತ್ತಿವೆ. ಸರಕಾರ ಈ ಕೂಡಲೇ ಪರಿಹಾರ ನೀಡಬೇಕೆಂದು ಒತ್ತಾಯಿಸಿದರು.
ಮುಖಂಡರಾದ ಅಮರಣ್ಣ ಗುಡಿಹಾಳ, ಜಿಲ್ಲಾಧ್ಯಕ್ಷ ಸುಗೂರಯ್ಯ ಸ್ವಾಮಿ ಉಪಸ್ಥಿತರಿದ್ದರು.
Next Story