ದೇಶದ ಜಿಡಿಪಿ ಕುಸಿತದ ಬಗ್ಗೆ ಪ್ರಶ್ನಿಸಿದಾಗ ಸಂಸದೆ ಶೋಭಾ ಉತ್ತರಿಸಿದ್ದು ಹೀಗೆ...
ಮೈಸೂರು : ಭಾರತದ ಜಿಡಿಪಿ ಕುಸಿತ ಕುರಿತು ಮಾತನಾಡಲು ಸಂಸದೆ ಶೋಭಾ ಕರಂದ್ಲಾಜೆ ನಿರಾಕರಿಸಿದ ಘಟನೆ ಮೈಸೂರಿನಲ್ಲಿ ನಡೆಯಿತು.
ಸಂಸದೆ ಶೋಭಾ ಕರಂದ್ಲಾಜೆ ಅವರು ಪ್ರತಿವರ್ಷದಂತೆ ಈ ಬಾರಿಯೂ ದಸರಾಸಲ್ಲಿ ಭಾಗವಹಿಸಿರುವ ಮಾವುತರು ಮತ್ತು ಕಾವಾಡಿಗಳಿಗೆ ಉಪಹಾರ ಬಡಿಸಿದರು. ನಂತರ 'ವಾರ್ತಾಭಾರತಿ' ಯೊಂದಿಗೆ ಮಾತನಾಡಿದ ಅವರು ದೇಶದ ಜಿಡಿಪಿ ಕುಸಿತದ ಬಗ್ಗೆ ಕೇಳುತ್ತಿದ್ದಂತೆ. ನಾನು ಈಗ ಮಾತನಾಡುವುದಿಲ್ಲ, ಈಗ ನವರಾತ್ರಿ ಬಗ್ಗೆಯಷ್ಟೆ ನಾತನಾಡುತ್ತೇನೆ ಎಂದು ಹೊರಟು ಹೋದರು.
ಇದಕ್ಕೂ ಮೊದಲು ಬೇರೆ ಜಿಲ್ಲೆಯ ಸಂಸದರಾದ ನೀವು ಪ್ರತಿ ಬಾರಿ ಮೈಸೂರಿನಲ್ಲಿ ನಡೆಯುವ ದಸರಾ ಮಾವುತರು ಮತ್ತು ಕಾವಾಡಿಗಳಿಗೆ ಉಪಹಾರ ಏರ್ಪಡಿಸುವ ವಿಶೇಷ ಏನು ಎಂಬ ಪ್ರಶ್ನೆಗೆ ಪ್ರತಿಕ್ರಿಸಿದ ಅವರು, ಮಾವುತರು ಮತ್ತು ಕಾವಾಡಿಗಳು ನನ್ನ ಪ್ರೀತಿ ಮಾಡುತ್ತಾರೆ. ಹಾಗಾಗಿ ಅವರನ್ನು ದಸರಾ ಸಂದರ್ಭದಲ್ಲಿ ಭೇಟಿ ಮಾಡಿ ಉಪಹಾರ ಏರ್ಪಡಿಸುತ್ತೇನೆ ಎಂದರು.
ಈ ಹಿಂದೆ 2008 ರಲ್ಲಿ ಯಡಿಯೂರಪ್ಪ ಅವರು ಮುಖ್ಯಮಂತ್ರಿಯಾಗಿದ್ದ ವೇಳೆ ನಾನು ಮೈಸೂರು ಜಿಲ್ಲೆ ಉಸ್ತುವಾರಿ ಸಚಿರಾಗಿದ್ದ ಸಂದರ್ಭ ಬಹಳ ವರ್ಷದಿಂದ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಿರಲಿಲ್ಲ ಅವರ ಬೇಡಿಕೆಯನ್ನು ನಮ್ಮ ಸರ್ಕಾರ ಈಡೇರಿಸಿ ಅವರನ್ನು ಸರ್ಕಾರಿ ನೌಕರರು ಎಂದು ಪರಿಗಣಿಸಲಾಯಿತು. ಹಾಗಾಗಿ ಅವರು ನಮ್ಮನ್ನು ಪ್ರೀತಿ ಮಾಡುತ್ತಾರೆ ಎಂದು ಹೇಳಿದರು.
ನಾನು ಪ್ರತಿ ವರ್ಷ ಮೈಸೂರಿಗೆ ಬರುವುದು, ಚಾಮುಂಡಿ ಬೆಟ್ಟ ಹತ್ತುವುದು ಮತ್ತು ಪೂಜೆ ಸಲ್ಲಿಸುವುದನ್ನು ಹಲವು ವರ್ಷ ಗಳಿಂದ ಮಾಡಿಕೊಂಡು ಬರುತ್ತಿದ್ದೇನೆ ಎಂದು ಹೇಳಿದರು.