ಸಿಎಂ ಮಾಡುವುದಾಗಿ ಯತ್ನಾಳ್ಗೆ ಮೋದಿ, ಶಾ ಭರವಸೆ ನೀಡಿದ್ದಾರೆ: ಬಸವರಾಜ ಹೊರಟ್ಟಿ
ಕೋಲಾರ: ಶಾಸಕ ಬಸವರಾಜ್ ಯತ್ನಾಳ್ಗೆ ಕೇಂದ್ರ ಸರ್ಕಾರದ ಬೆಂಬಲ ಇರುವುದರಿಂದ ಅವರ ವಿರುದ್ಧ ಕ್ರಮ ಕೈಗೊಳ್ಳುವ ಧಮ್ ರಾಜ್ಯ ಬಿಜೆಪಿಗಿಲ್ಲ ಎಂದು ಎಂಎಲ್ಸಿ ಬಸವರಾಜ ಹೊರಟ್ಟಿ ಲೇವಡಿ ಮಾಡಿದ್ದಾರೆ.
ಅವರು ಆಗ್ನೇಯ ಪದವೀಧರರ ಕ್ಷೇತ್ರದ ಅಭ್ಯರ್ಥಿ ಚೌಡರೆಡ್ಡಿ ಪರ ಪ್ರಚಾರಕ್ಕೆ ಆಗಮಿಸಿದ್ದ ವೇಳೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ಉತ್ತರ ಕರ್ನಾಟಕದಿಂದ ನಿನ್ನನ್ನೇ ಸಿಎಂ ಮಾಡುವುದಾಗಿ ಪ್ರಧಾನಿ ಮೋದಿ ಅಥವಾ ಗೃಹ ಸಚಿವ ಅಮೀತ್ ಶಾ ಅವರು ಯತ್ನಾಳ್ಗೆ ಭರವಸೆ ನೀಡಿರುವುದರಿಂದ ಬಹಿರಂಗವಾಗಿ ಸಿಡಿದೆದ್ದಿದ್ದಾರೆ. ಹೀಗಾಗಿ ಸಚಿವ ಕೆ.ಎಸ್.ಈಶ್ವರಪ್ಪ ಮುಂತಾದವರಿಗೆ ಕ್ರಮ ಕೈಗೊಳ್ಳಲು ಧಮ್ ಇಲ್ಲ ಎಂದರು.
ಸಮ್ಮಿಶ್ರ ಸರ್ಕಾರ ಪತನಕ್ಕೆ ಕಾಂಗ್ರೆಸ್, ಬಿಜೆಪಿ ಸಮಾನ ಕಾರಣರಾಗಿದ್ದು ಇದೀಗ ಎಲ್ಲ ಹುನ್ನಾರಗಳು ಬೆಳಕಿಗೆ ಬರುತ್ತಿವೆ. ಹೀಗಾಗಿ ಜೆಡಿಎಸ್ಗೆ ಬಿಜೆಪಿ ಮೇಲೆ ಯಾವುದೇ ಸಾಫ್ಟ್ ಕಾರ್ನರ್ ಇಲ್ಲ. ಕೊರೋನ ಸಂಕಷ್ಟದಲ್ಲಿ ಸಿಎಂ ಯಡಿಯೂರಪ್ಪ ಅವರನ್ನು ಅಡಕತ್ತರಿಗೆ ಸಿಕ್ಕಿಸುವುದು ಬೇಡ ಎಂಬುದು ಮಾಜಿ ಸಿಎಂ ಕುಮಾರಸ್ವಾಮಿ ನಿಲುವಾಗಿದೆ. ಆದರೂ ಸಂದರ್ಭ ಬಂದಾಗ ಸರ್ಕಾರದ ಲೋಪಗಳನ್ನು ಎತ್ತಿಹಿಡಿಯುವ ಮೂಲಕ ಜನರ ಮುಂದೆ ಇಡುತ್ತಿದ್ದಾರೆ. ಅಂತೆಯೇ ವಿಪಕ್ಷ ನಾಯಕ ಸಿದ್ದರಾಮಯ್ಯ ಅವರು ಪ್ರತಿಯೊಂದಕ್ಕೂ ಸರ್ಕಾರವನ್ನು ಟೀಕೆ ಮಾಡುವುದು ಸರಿಯಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದರು.
ಕೊರೋನ ತಾಂಡವಾಡುತ್ತಿರುವಾಗ ಚುನಾವಣೆ ನಡೆಸುತ್ತಿರುವುದು ತಪ್ಪು, ಮುಂದೆ ಎಲೆಕ್ಷನ್ ನಡೆಸಿದ್ದರೆ ಜಗತ್ತು ಮುಳುಗಿ ಹೋಗುತ್ತಿರಲಿಲ್ಲ. ಕೊರೋನ ಲಸಿಕೆ ಮೇಲೆ ಯಾರೂ ರಾಜಕಾರಣ ಮಾಡಬಾರದು. ರಾಜಕಾರಣಕ್ಕೆ ಕೊರೋನ ಬಳಕೆ ಸರಿಯಿಲ್ಲ. ಬಿಎಸ್ವೈ ಮುಖ್ಯಮಂತ್ರಿ ಆಗಿ ಮುಂದುವರಿಯಬೇಕು ಎಂಬುದು ಎಲ್ಲರ ಆಸೆಯಾದರೂ ಅಂತಹ ಸಾಧ್ಯತೆ ಕಡಿಮೆ. ಸಿಎಂ ಬದಲಾದರೂ ಆಶ್ಚರ್ಯವಿಲ್ಲ ಎಂದು ಪ್ರತಿಕ್ರಿಯಿಸಿದರು.
ಈಗ ರಾಜ್ಯದಲ್ಲಿರುವುದು ಜೆಸಿಬಿ ಸರ್ಕಾರ. ಕಾಂಗ್ರೆಸ್, ಜೆಡಿಎಸ್ ಶಾಸಕರು ಸೇರಿಕೊಂಡು ಬಿಜೆಪಿ ಮೂಲಕ ಆಡಳಿತ ನಡೆಸುತ್ತಿರುವುದರಿಂದಾಗಿ ಮೂಲ ಬಿಜೆಪಿಗರಿಗೆ ಆತಂಕ ಉಂಟಾಗಿದ್ದು ಸಚಿವರ ನಡುವೆ ಸಮನ್ವಯವೇ ಇಲ್ಲ ಎಂದು ಟೀಕಿಸಿದರು. ಕೊರೋನ ಸಂದರ್ಭದಲ್ಲಿ ಶಿಕ್ಷಕರಿಗಂತೂ ನೆಮ್ಮದಿಯೇ ಇಲ್ಲವಾಗಿದ್ದು ವಿದ್ಯಾಗಮದಿಂದ 72 ಶಿಕ್ಷಕರು ಮೃತಪಟ್ಟಿದ್ದಾರೆ. ಹೀಗಾಗಿ ನ.17ರಿಂದ ಕಾಲೇಜು ಆರಂಭಿಸುವ ಸರ್ಕಾರದ ಯೋಜನೆ ಸ್ವಾಗತಾರ್ಹ ಎಂದು ನುಡಿದರು.
ಜೆಡಿಎಸ್ ಜಿಲ್ಲಾಧ್ಯಕ್ಷ ಜಿ.ಕೆ.ವೆಂಕಟಶಿವಾರೆಡ್ಡಿ ಮತ್ತು ಬಿಜೆಪಿ ಎಂಎಲ್ಸಿ ಅಭ್ಯರ್ಥಿ ಚೌಡರೆಡ್ಡಿ ಮಾತನಾಡಿ ಮತಯಾಚನೆ ಮಾಡಿದರು. ಎಂಎಲ್ಸಿ ಗೋವಿಂದರಾಜು, ತಾಲೂಕು ಜೆಡಿಎಸ್ ಅಧ್ಯಕ್ಷ ಬಾಬುಮೌನಿ, ಮುಖಂಡ ಬಣಕನಹಳ್ಳಿ ನಟರಾಜ್, ಮಲ್ಲೇಶ್, ವಕ್ಕಲೇರಿ ರಾಮು, ಸಿಎಂಆರ್ ಶ್ರೀನಾಥ್, ನಗರಸಭೆ ಸದಸ್ಯ ಮಂಜುನಾಥ್ ಇದ್ದರು.
'ಚೌಡರೆಡ್ಡಿಗೆ ಟಿಕೇಟ್ ನೀಡಲು ಜೆಡಿಎಸ್ ಹಿಂದೇಟು'
ಆಗ್ನೇಯ ಪದವೀಧರರ ಕ್ಷೇತ್ರದಿಂದ ಚೌಡರೆಡ್ಡಿಗೆ ಟಿಕೇಟ್ ನೀಡಲು ಕುಮಾರಸ್ವಾಮಿ ಹಿಂದೆ ಮುಂದೆ ನೋಡಿದರು. ತಕ್ಷಣ ಎಚ್ಚೆತ್ತ ನಾನು ಚೌಡರೆಡ್ಡಿಗೆ ಟಿಕೇಟ್ ನೀಡದಿದ್ದರೆ ನಾನು ರಾಜೀನಾಮೆ ನೀಡುವುದಾಗಿ ಹೇಳಿದೆ. ಎಂಎಲ್ಸಿ ಆದವರು ಸ್ವರ್ಗ ನಿರ್ಮಾಣ ಮಾಡಲು ಸಾಧ್ಯವಿಲ್ಲವಾದರೂ ಚೌಡರೆಡ್ಡಿ ತಮ್ಮದೇ ಆದ ಇತಿಮಿತಿಯಲ್ಲಿ ಶಿಕ್ಷಕರು ಮತ್ತು ಪದವೀಧರರ ಪರವಾಗಿ ಕೆಲಸ ಮಾಡಿದ್ದಾರೆ. ಪಶ್ಚಿಮ ಪದವೀಧರರ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿ ಶಿವಶಂಕರ ಕಲ್ಲೂರು ಅವರ ಮಾವ (ಪತ್ನಿ ತಂದೆ) ತೀರಿಕೊಂಡ ಹಿನ್ನೆಲೆಯಲ್ಲಿ 6 ದಿನ ಪ್ರಚಾರ ನಡೆಸಲು ಸಾಧ್ಯವಾಗಲಿಲ್ಲ. ಹೀಗಾಗಿ ಕಲ್ಲೂರು ಸ್ವಯಂ ನಿವೃತ್ತಿ ಘೋಷಿಸಿದ್ದರಿಂದಾಗಿ ಪಕ್ಷೇತರ ಅಭ್ಯರ್ಥಿ ಬಸವರಾಜ ಗುರಿಕಾರಗೆ ಜೆಡಿಎಸ್ ಬೆಂಬಲ ಕೊಟ್ಟಿದ್ದು ಇದರಲ್ಲಿ ಮತ್ತೇನೂ ರಹಸ್ಯವಿಲ್ಲ ಎಂದು ಬಸವರಾಜ ಹೊರಟ್ಟಿ ಸ್ಪಷ್ಟಪಡಿಸಿದರು.