ಕಳಸ: ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಶ್ರೀನಿವಾಸ್ ಹೆಬ್ಬಾರ್ ಕೋವಿಡ್ಗೆ ಬಲಿ
ಕಳಸ, ನ.6: ಹೋಬಳಿ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಹಾಗೂ ಉದ್ಯಮಿ ತೋಟದೂರು ಶ್ರೀನಿವಾಸ್ ಹೆಬ್ಬಾರ್(54) ಕೊರೋನ ಸೋಂಕಿಗೆ ತುತ್ತಾಗಿ ಬಲಿಯಾಗಿದ್ದಾರೆ.
ಕಳೆದ ಒಂದು ತಿಂಗಳ ಹಿಂದೆ ಶ್ರೀನಿವಾಸ್ ಹೆಬ್ಬಾರ್ ಅವರಿಗೆ ಕೊರೋನ ಸೋಂಕು ಇರುವುದು ಪತ್ತೆಯಾಗಿದ್ದು, ಚಿಕಿತ್ಸೆಗಾಗಿ ಅವರು ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿ ದಾಖಲಾಗಿದ್ದರು. ಕಳೆದೊಂದು ತಿಂಗಳನಿಂದ ಇದೇ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರ ಆರೋಗ್ಯ ಸ್ಥಿತಿ ಇತ್ತೀಚಿಗೆ ಗಂಭೀರವಾಗಿತ್ತು. ಶುಕ್ರವಾರ ಮಧ್ಯಾಹ್ನ ಅವರು ಚಿಕಿತ್ಸೆ ಫಲಕಾರಿಯಾಗದೇ ಬೆಂಗಳೂರಿನ ಮಣಿಪಾಲ್ ಆಸ್ಪತ್ರೆಯಲ್ಲಿಯೇ ಮೃತಪಟ್ಟಿದ್ದಾರೆ ಶ್ರೀನಿವಾಸ್ ಕುಟುಂಬಸ್ಥರು ತಿಳಿಸಿದ್ದಾರೆ.
ಶ್ರೀನಿವಾಸ್ ಹೆಬ್ಬಾರ್ ಕಳಸ ಬ್ಲಾಕ್ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಕಳೆದ ಕೆಲ ವರ್ಷಗಳಿಂದ ಕಾಂಗ್ರೆಸ್ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದರು. ಕಾಲೇಜು ಅಭಿವೃದ್ಧಿ ಸಮಿತಿ, ರೋಟರಿ ಸಂಸ್ಥೆ ಸೇರಿದಂತೆ ವಿವಿಧ ಸಂಸ್ಥೆಗಳಲ್ಲಿ ಅವರು ಸಕ್ರೀಯರಾಗಿದ್ದರು. ಕಳಸ ಪಟ್ಟಣದಲ್ಲಿ ಯಾತ್ರಿ ನಿವಾಸ್ ಹೆಸರಿನ ಹೊಟೇಲ್ ಮಾಲಕರಾಗಿದ್ದ ಶ್ರೀನಿವಾಸ್ ತೋಟದೂರು ಗ್ರಾಮದ ಪ್ರಮುಖ ಕಾಫಿ, ಅಡಿಕೆ ಬೆಳೆಗಾರರಾಗಿದ್ದಾರೆ.
ಕಳೆದ 50 ದಿನಗಳ ಹಿಂದೆಯಷ್ಟೆ ಅವರ ತಂದೆ ಶ್ಯಾಮಣ್ಣ ವಯೋಸಹಜ ಅನಾರೋಗ್ಯದಿಂದ ಮೃತರಾಗಿದ್ದು, ಶ್ರೀನಿವಾಸ್ ಹೆಬ್ಬಾರ್ ತಾಯಿ, ಪತ್ನಿ ಹಾಗೂ ಇಬ್ಬರು ಗಂಡು ಮಕ್ಕಳನ್ನು ಅಗಲಿದ್ದಾರೆ. ಶ್ರೀನಿವಾಸ್ ಹೆಬ್ಬಾರ್ ನಿಧನಕ್ಕೆ ಮಾಜಿ ಸಚಿವೆ ಮೋಟಮ್ಮ, ಜಿಪಂ ಸದಸ್ಯ ಕೆ.ಆರ್.ಪ್ರಭಾಕರ್, ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಅಂಶುಮಂತ್, ಮೂಡಿಗೆರೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಚ್.ಜಿ.ಸುರೇಂದ್ರ, ಮಾಜಿ ಅಧ್ಯಕ್ಷ ಯು.ಎಚ್.ಹೇಮಶೇಖರ, ಮಾಜಿ ಜಿ.ಪಂ ಸದಸ್ಯ ಎಂ.ಎಸ್.ಅನಂತ್, ಮೂಡಿಗೆರೆ ಪಪಂ ಸದಸ್ಯ ಎಚ್..ಬಿ.ರಮೇಶ್, ಕಳಸ ಯೂತ್ ಕಾಂಗ್ರೆಸ್ ಅಧ್ಯಕ್ಷ ವೀರೇಂದ್ರ ಸೇರಿದಂತೆ ಜಿಲ್ಲೆಯ ಕಾಂಗ್ರೆಸ್ ಮುಖಂಡರು ಸಂತಾಪ ಸೂಚಿಸಿದ್ದಾರೆ.