ರಸ್ತೆ ಅಪಘಾತದ ಗಾಯಾಳುವನ್ನು ಸಕಾಲಕ್ಕೆ ಆಸ್ಪತ್ರೆಗೆ ಸೇರಿಸಿದ ಡಿವೈಎಸ್ಪಿ
ಶಿವಮೊಗ್ಗ: ಇಲ್ಲಿನ ತ್ಯಾವರೆಕೊಪ್ಪ ಎದುರು ರವಿವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ತೀವ್ರ ಗಾಯಗೊಂಡ ವ್ಯಕ್ತಿಯನ್ನು ಸಕಾಲಕ್ಕೆ ಆಸ್ಪತ್ರೆಗೆ ಕೊಂಡೊಯ್ಯಲು ಸಹಕರಿಸಿ ಡಿವೈಎಸ್ಪಿ ಉಮೇಶ್ ನಾಯ್ಕ ಅವರು ಮೆಚ್ಚುಗೆಗೆ ಪಾತ್ರರಾಗಿದ್ದಾರೆ.
ಸಿಗೇಹಟ್ಟಿ ನಿವಾಸಿ ರಿಯಾಝ್ (25) ಎಂಬಾತ ಗಾಯಗೊಂಡು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿರುವ ವ್ಯಕ್ತಿ. ಶಿವಮೊಗ್ಗ ಮೃಗಾಲಯದಿಂದ ಹೊರಗೆ ಬರುವಾಗ ಶಿವಮೊಗ್ಗ ಕಡೆಗೆ ಬರುತ್ತಿದ್ದ ಕಾರು ಮತ್ತು ದ್ವಿಚಕ್ರ ವಾಹನ ಮಧ್ಯೆ ಡಿಕ್ಕಿ ಸಂಭವಿಸಿದೆ. ಬೈಕ್ ನಲ್ಲಿದ್ದ ಇಬ್ಬರಲ್ಲಿ ರಿಯಾಝ್ ಅವರಿಗೆ ತೀವ್ರ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ.
ಅದೇ ಮಾರ್ಗದಲ್ಲಿ ಆಯನೂರು ಕಡೆ ಹೋಗುತ್ತಿದ್ದ ಡಿವೈಎಸ್ಪಿ ಉಮೇಶ್ ಅವರು ತಕ್ಷಣ ಅಪಘಾತ ಸಂಭವಿಸಿದ್ದನ್ನು ಕಂಡು ಖಾಸಗಿ ವಾಹನವೊಂದರ ಮೂಲಕ ಮೆಗ್ಗಾನ್ ಆಸ್ಪತ್ರೆಗೆ ಕಳುಹಿಸಿದ್ದಾರೆ. ಸಕಾಲಕ್ಕೆ ಆಸ್ಪತ್ರೆಗೆ ಕರೆದುಕೊಂಡು ಬಂದ ಫಲವಾಗಿ ರಿಯಾಝ್ ಪ್ರಾಣಾಪಾಯದಿಂದ ಪಾರಾಗಿದ್ದಾನೆ.
ತುಂಗಾನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story