ನಿವೇಶನ ರಹಿತರಿಂದ ಡಿಸಿ ಕಚೇರಿ ಬಳಿ ಮತ್ತೆ ಆಹೋರಾತ್ರಿ ಸತ್ಯಾಗ್ರಹ ಅರಂಭ
ಮಂಡ್ಯ, ನ.23: ನಿವೇಶನಕ್ಕೆ ಗುರುತಿಸಿರುವ ಸರಕಾರಿ ಭೂಮಿಯನ್ನು ವಿತರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತ ಕಾರ್ಯಗತಗೊಳಿಸದ ಹಿನ್ನಲೆಯಲ್ಲಿ ತಾಲೂಕಿನ ಬೂದನೂರು ಗ್ರಾಮ ಪಂಚಾಯತ್ ನಿವೇಶನರಹಿತರು ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಮತ್ತೆ ಅನಿರ್ಧಿಷ್ಠಾವಧಿ ಆಹೋರಾತ್ರಿ ಸತ್ಯಾಗ್ರಹ ಅರಂಭಿಸಿದ್ದಾರೆ.
ಆಕ್ಟೋಬರ್ 12ರಿಂದ 6 ದಿನಗಳ ಕಾಲ ಆಹೋರಾತ್ರಿ ಧರಣಿ ನಡೆಸಿದ್ದ ನಿವೇಶನರಹಿತರ ಬೇಡಿಕೆ ಈಡೇರಿಸುವ ಭರವಸೆ ನೀಡಿದ್ದ ಜಿಲ್ಲಾಡಳಿತದ ಪ್ರತಿನಿಧಿಯಾಗಿ ಆಗಮಿಸಿದ್ದ ಮಂಡ್ಯ ತಹಶೀಲ್ದಾರ್ ಅವರ ಭರವಸೆ ಈಡೇರಿಸಲಿಲ್ಲ ಎಂದು ನಿವೇಶನ ರಹಿತರು ಅಳಲು ತೋಡಿಕೊಂಡರು.
ಜಿಲ್ಲಾಧಿಕಾರಿ ಡಾ.ಎಂ.ವಿ.ವೆಂಕಟೇಶ ಅವರು ಜಿಲ್ಲೆಗೆ ಆಗಮಿಸಿದ ಬಳಿಕ ನೂರಾರು ಎಕರೆ ಸರಕಾರಿ ಭೂಮಿಯನ್ನು ಗುರುತಿಸಿ ಬಡಜನರಿಗೆ ಹಂಚುವ ಕಾರ್ಯಕ್ರಮ ರೂಪಿಸಿದ್ದಾರೆ. ಹಾಗಾಗಿ ಅವರ ಹೆಸರಿನಲ್ಲಿ ನಮ್ಮ ಗ್ರಾಮದಲ್ಲಿ ನಿರ್ಮಾಣವಾಗುವ ಬಡಾವಣೆಗೆ ಡಾ.ಎಂ.ವಿ.ವೆಂಕಟೇಶ್ ಆಶ್ರಯ ಬಡಾವಣೆ ನಾಮಕರಣ ಮಾಡಲಾಗುವುದು ಎಂದು ನಾಮಫಲಕ ಪ್ರದರ್ಶನ ಮಾಡಿದರು.
ಬೂದನೂರು ಗ್ರಾಮ ಪಂಚಾಯತ್ ವ್ಯಾಪ್ತಿಯಲ್ಲಿ 50 ಎಕರೆ ಸರಕಾರಿ ಭೂಮಿ ಲಭ್ಯವಿದೆ. ಅದರಲ್ಲಿ ಗ್ರಾಮದ ಸರ್ವೇ ನಂ 190/ಪಿ10 ರ 2 ಎಕರೆ ಭೂಮಿಯನ್ನು ನಿವೇಶನಯೋಗ್ಯ ಭೂಮಿ ಎಂದು ಹಿಂದಿನ ಉಪ ವಿಭಾಗಾಧಿಕಾರಿ ಮತ್ತು ತಹಶೀಲ್ದಾರ್ ಗುರುತಿಸಿ ಸರಕಾರಕ್ಕೆ ವರದಿ ಮಾಡಿದ್ದರು. ಸದ್ಯ ಅಳತೆ, ಹದ್ದುಬಸ್ತ್ ಮಾಡುವ ಬದಲು ಪ್ರಭಾವಿಗಳ ಒತ್ತಡಕ್ಕೆ ಮಣಿದು ದಾಖಲೆಗಳನ್ನು ತಿರುಚುವ ಯತ್ನ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.
ಸ್ವಂತಮನೆ ನಮ್ಮ ಹಕ್ಕು ಹೋರಾಟ ಸಮಿತಿ ಸಂಚಾಲಕ ಎಂ.ಬಿ.ನಾಗಣ್ಣಗೌಡ ಮಾತನಾಡಿ, ಜಿಲ್ಲಾಡಳಿತ ನೀಡಿರುವ ಗಡುವು ಮುಗಿದಿದೆ. ಹಾಗಾಗಿ ಸರಕಾರಿ ಭೂಮಿ 1-5 ಮಾಡುವ ಮುನ್ನಾ ದಿಶಾಂಕ್ ತಂತ್ರಾಂಶ ಬಳಸಿ ಭೂಮಿ ಗುರುತಿಸಿಕೊಡಬೇಕು ಎಂದು ಜಿಲ್ಲಾಡಳಿತವನ್ನು ಒತ್ತಾಯಿಸಿದರು.
ಬೇಡಿಕೆ ಈಡೇರದಿದ್ದಲ್ಲಿ ಗ್ರಾಮಸಭೆಯಲ್ಲಿ ಮುಂದಿನ ಗ್ರಾಮ ಪಂಚಾಯತ್ ಚುನಾವಣೆ ಬಹಿಷ್ಕರಿಸುವ ನಿರ್ಣಯ ಕೈಗೊಂಡು ಮನವಿ ನೀಡಿರುವುದಾಗಿ ತಿಳಿಸಿದರು.
ಬೂದನೂರು ಗ್ರಾಮ ಪಂಚಾಯತ್ ಮಾಜಿ ಸದಸ್ಯ ಬಿ.ಕೆ.ಸತೀಶ ಮಾತನಾಡಿ, ಕಳೆದ 4 ವರ್ಷಗಳಿಂದ ನಿವೇಶನರಹಿತರು ಹಲವು ಮನವಿ ನೀಡಿ ಹೋರಾಟ ನಡೆಸುತ್ತಿದ್ದರೂ ಅಧಿಕಾರಿಗಳು ಸ್ಪಂದಿಸದೆ ಅಮಿಷಗಳಿಗೆ ಬಲಿಯಾಗಿ ನಿವೇಶನರಹಿತರನ್ನು ವಂಚಿಸುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕಳೆದ ನಾಲ್ಕು ವರ್ಷಗಳಲ್ಲಿ ತೆಗೆದುಕೊಂಡಿರುವ ಕ್ರಮಗಳ ಬಗ್ಗೆ ತನಿಖೆ ನಡೆಸಿ, ಅಧಿಕಾರಿಗಳ ವಿರುದ್ದ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ನಿವೇಶನರಹಿತರು ಆಗ್ರಹಿಸಿದರು.
ಪ್ರತಿಭಟನಾ ಧರಣಿಯಲ್ಲಿ ಗ್ರಾಪಂ ಮಾಜಿ ಸದಸ್ಯ ಕುಳ್ಳಪ್ಪ. ಸಿಐಟಿಯುನ ಪ್ರೇಮಾ, ಸುಧಾ, ಚೇತನ್, ಎಲ್ಲಮ್ಮ ಕಾಮಾಕ್ಷಿರಜನಿ ಮೊದಲಾದವರಿದ್ದರು.