ವಾಹನ ಅಡ್ಡಗಟ್ಟಿ ನಗನಾಣ್ಯ ದರೋಡೆ
ಮಂಡ್ಯ, ನ.26: 6 ಮಂದಿ ಮುಸುಕುಧಾರಿ ದುಷ್ಕರ್ಮಿಗಳು ಗೂಡ್ಸ್ ವಾಹನ ಅಡ್ಡಗಟ್ಟಿ ನಗನಾಣ್ಯ ದರೋಡೆ ಮಾಡಿರುವ ಘಟನೆ ಮದ್ದೂರು ತಾಲೂಕು ಕೆ.ಎಂ.ದೊಡ್ಡಿ ಸಮೀಪದ ಮುಡೇನಹಳ್ಳಿ ಗೇಟ್ ಬಳಿ ಬುಧವಾರ ತಡರಾತ್ರಿ ನಡೆದಿದೆ.
ಸಬ್ಬನಹಳ್ಳಿ ಗ್ರಾಮದ ಸಂತೋಷ್ ಕುಮಾರ್ ಎಂಬವರಿಗೆ ಮುಸುಕುದಾರಿಗಳು ಚಾಕು ತೋರಿಸಿ ಅವರ ಬಳಿ ಇದ್ದ 40 ಗ್ರಾಂ ತೂಕದ ಚಿನ್ನದ ಚೈನ್, 54 ಸಾವಿರ ರೂ. ನಗದು ಹಾಗೂ 20 ಸಾವಿರ ಮೌಲ್ಯದ ಮೊಬೈಲ್ ಕಿತ್ತುಕೊಂಡು ಪರಾರಿಯಾಗಿದ್ದಾರೆ.
ಕುಣಿಗಲ್ ತಾಲೂಕಿನ ಹುಲಿಯೂರು ದುರ್ಗ ಹೋಬಳಿಯ ಬೆಣಕಲ್ಲು ಗ್ರಾಮದ ಸಂತೋಷ್ ಕುಮಾರ್ ತನ್ನ ಅಜ್ಜಿ ಮನೆಯಾದ ಸಬ್ಬನಹಳ್ಳಿ ಗ್ರಾಮದಲ್ಲಿ ವಾಸಿಸುತ್ತಿದ್ದು, ಹಸುಗಳ ಫಾರಂ ಮಾಡಿಕೊಂಡಿದ್ದಾರೆ.
ಸಂತೋಷ್ ಕುಮಾರ್ ಗೂಡ್ಸ್ ವಾಹನದಲ್ಲಿ ಚನ್ನಪಟ್ಟಣ ತಾಲೂಕು ಇಗ್ಗಲೂರು, ಹಾರೋಹಳ್ಳಿ ಗ್ರಾಮದಿಂದ ಹಸುಗಳಿಗೆ ಹುಲ್ಲು ತುಂಬಿಕೊಂಡು ಬರುತ್ತಿದ್ದಾಗ ಮಾರ್ಗಮಧ್ಯೆ ದುಷ್ಕರ್ಮಿಗಳು ಈ ಕೃತ್ಯ ಎಸಗಿದ್ದಾರೆ ಎಂದು ಪೊಲೀಸರಿಗೆ ದೂರು ನೀಡಲಾಗಿದೆ.
ಕೆ.ಎಂ.ದೊಡ್ಡಿ ಠಾಣೆ ಪೊಲೀಸರು ಪ್ರಕರಣ ದಾಖಲಿಸಿಕೊಂಡು ದರೋಡೆಕೋರರ ಪತ್ತೆಗೆ ಬಲೆಬೀಸಿದ್ದಾರೆ.