ನಿಷ್ಟೆಯಿಂದ ದುಡಿದರೂ ಸೂಕ್ತ ಸ್ಥಾನ ಮಾನ ನೀಡಿಲ್ಲ: ರಾಜ್ಯಾಧ್ಯಕ್ಷರ ಮುಂದೆ ಅಳಲು ತೋಡಿಕೊಂಡ ಬಿಜೆಪಿ ಕಾರ್ಯಕರ್ತ
ಕೋಲಾರ : ಭಾರತೀಯ ಜನತಾ ಪಾರ್ಟಿಯಲ್ಲಿ ಸುಮಾರು ಹದಿನೈದು ವರ್ಷಗಳಿಂದ ನಿಷ್ಟಾವಂತ ಕಾರ್ಯಕರ್ತರಾಗಿ ಪಕ್ಷ ಸಂಘಟನೆ ಮಾಡಿ ಪ್ರಾಮಾಣಿಕವಾಗಿ ಪಕ್ಷದ ಸಂಘಟನೆಯಲ್ಲಿ ತೊಡಗಿಸಿಕೊಂಡಿರುವ ತನಗೆ ಇದುವರೆಗೂ ಸಹ ಯಾವುದೇ ಸೂಕ್ತ ಸ್ಥಾನ ಮಾನ ನೀಡಿಲ್ಲ ಎಂದು ಬೇಸರ ವ್ಯಕ್ತಪಡಿಸಿ, ಇಲ್ಲಿನ ನಂದಿನಿ ಪ್ಯಾಲೇಸ್ನ ಕಲ್ಯಾಣ ಮಂಟಪದಲ್ಲಿ ಹಮ್ಮಿಕೊಳ್ಳಲಾಗಿದ್ದ ಗ್ರಾಮ ಸ್ವರಾಜ್ ಸಮಾವೇಶಕ್ಕೆ ಆಗಮಿಸಿದ್ದ ಬಿಜೆಪಿ ರಾಜ್ಯಾಧ್ಯಕ್ಷ ನಳೀನ್ ಕುಮಾರ್ ಕಟೀಲ್ ಅವರಿಗೆ ಅಂಬೇಡ್ಕರ್ ನಗರದ ಬಿಜೆಪಿಯ ಯುವ ಮುಖಂಡ ಮೋಹನ್ಕಾಂತ್ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮನವಿ ಸಲ್ಲಿಸಿ ಬಿಜೆಪಿಯ ಯುವ ಮುಖಂಡ ಮೋಹನ್ ಕಾಂತ್ ಮಾತನಾಡಿ, ಪಕ್ಷದ ವಿವಿಧ ಸಮಿತಿಗಳಲ್ಲಿ ಕಾರ್ಯನಿರ್ವಹಿಸಿದ್ದು, ರಾಜ್ಯಮಟ್ಟದ ಆರ್.ಎಸ್.ಎಸ್.ಶಿಬಿರ, ಐಟಿಸಿ ಶಿಬಿರಗಳಲ್ಲಿ ಭಾಗಿಯಾಗಿರುತ್ತೇನೆ. ಧರ್ಮದ ಹಲವಾರು ಹೋರಾಟಗಳಲ್ಲಿ ಭಾವಹಿಸಿ, ಯುವಕರಲ್ಲಿ ಅರಿವು ಮೂಡಿಸುವಂತಹ ಕೆಲಸವನ್ನು ಮಾಡಿರುತ್ತೇನೆ ಆದರೆ ಇದುವರೆಗೂ ತನಗೆ ಸೂಕ್ತ ಸ್ಥಾನ ಮಾನ ಕಲ್ಪಿಸಿಕೊಡುವಲ್ಲಿ ಪಕ್ಷವು ಹಿಂದಿದೆ ಎಂದು ಬೇಸರ ವಕ್ತಪಡಿಸಿದ ಅವರು, ಪಕ್ಷದ ಕಾರ್ಯಕರ್ತರಾಗಿ ಸುಮಾರು ವರ್ಷಗಳ ಕಾಲ ಬಿಜೆಪಿ ಪಕ್ಷದ ಸಂಘಟನೆಯಲ್ಲಿ ತೊಡಗಿದ್ದು, ಕಳೆದ 2008 ರಲ್ಲಿ ನಗರಾಭಿವೃದ್ದಿ ಪ್ರಾಧಿಕಾರದ ನಾಮನಿರ್ದೇಶನ ಸ್ಥಾನವೂ ಸಹ ಕೈ ತಪ್ಪಿಹೋಗಿದೆ ಎಂದು ದೂರಿದರು.
ರಾಜ್ಯದಲ್ಲಿ ಬಿಜೆಪಿ ಸರ್ಕಾರ ಆಡಳಿತದಲ್ಲಿದ್ದು, ಈ ಬಾರಿ ನನಗೆ ಸಿಗಬೇಕಾಗಿದ್ದ ನಗರಾಭಿವೃದ್ದಿ ಪ್ರಾಧಿಕಾರದ ನಾಮ ನಿರ್ದೇಶನ ಸದಸ್ಯ ಸ್ಥಾನವನ್ನು ಮಾತ್ತೊಬ್ಬರಿಗೆ ನೀಡಲಾಗಿದೆ ಇದರಿಂದ ತುಂಬಾ ನೋವಾಗಿದ್ದು ಪಕ್ಷಕ್ಕಾಗಿ ನಿಷ್ಟಾವಂತವಾಗಿ ದುಡಿದ ನನಗೆ ಸೂಕ್ತ ಸ್ಥಾನ ನೀಡಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಮೋಹನ್ ಕಾಂತ್ ಅಭಿಮಾನಿ ಬಳಗದ ಜಿಲ್ಲಾಧ್ಯಕ್ಷ ಸುಪ್ರೀಮ್ ಚಲ, ಅಂಬೇಡ್ಕರ್ ನಗರದ ಯುವ ಮುಖಂಡ ಮಂಜುನಾಥ್, ಅಯ್ಯಾ, ಜಯರಾಮ್, ತ್ರಿಭುವನ್, ಪ್ರದೀಪ್ ಉಪಸ್ಥಿತರಿದ್ದರು.