ಪ್ರೀತಿಸಿದ ಯುವಕನ ಜೊತೆ ಮದುವೆಯಾಗಲು ನಿರ್ಧರಿಸಿದ್ದ ಯುವತಿಗೆ ಪೋಷಕರಿಂದ ಹಲ್ಲೆ
ಕೊಳ್ಳೇಗಾಲ, ಡಿ.5: ಎರಡು ವರ್ಷದಿಂದ ಪ್ರೀತಿಸಿ ಡಿ.7ರಂದು ಮದುವೆಯಾಗಲು ನಿರ್ಧರಿಸಿದ್ದ ಯುವತಿಗೆ ಆಕೆಯ ತಂದೆ ಹಾಗೂ ಅಣ್ಣ ಮಾರಾಕಾಸ್ತ್ರಗಳಿಂದ ಹಲ್ಲೆ ನಡೆಸಿದ ಘಟನೆ ಪಿ.ಜಿ.ಪಾಳ್ಯದಲ್ಲಿ ನಡೆದಿದೆ.
ಪ್ರಕರಣದ ಹಿನ್ನೆಲೆ: ಹನೂರು ತಾಲೂಕಿನ ಪಿ.ಜಿ.ಪಾಳ್ಯ ಗ್ರಾಮದ ಧನಲಕ್ಷ್ಮಿ(21) ಹಾಗೂ ಅದೇ ಗ್ರಾಮದ ಸತ್ಯ(23) ಎರಡು ವರ್ಷದಿಂದ ಪ್ರೀತಿಸುತ್ತಿದ್ದರು.
ಸತ್ಯನ ಜೊತೆ ಮದುವೆ ಮಾಡಲು ಪೋಷಕರು ನಿರಾಕರಿಸಿದ್ದರಿಂದ, ಧನಲಕ್ಷ್ಮೀ ಬೆಂಗಳೂರಿನಲ್ಲಿ ಖಾಸಗಿ ಕಂಪೆನಿವೊಂದರಲ್ಲಿ ಕೆಲಸ ಮಾಡುತ್ತಿದ್ದ ಪ್ರಿಯಕರ ಸತ್ಯನ ಬಳಿ ತೆರಳಿದ್ದಳು ಎಂದು ತಿಳಿದುಬಂದಿದೆ.
ಮದುವೆಯಾಗದೆ ಜೊತೆಯಲ್ಲಿ ಇರುವುದು ಸರಿಯಿಲ್ಲ ಎಂದು ಇಬ್ಬರಿಗೂ ತಿಳಿ ಹೇಳಿದ ಸತ್ಯನ ಮನೆಯವರು, ಪಿ.ಜಿ.ಪಾಳ್ಯದಲ್ಲೇ ಮದುವೆ ಮಾಡಲು ನಿರ್ಧರಿಸಿದ್ದರು. ಈ ಹಿನ್ನೆಲೆಯಲ್ಲಿ ಪ್ರೇಮಿಗಳಿಬ್ಬರು ಬೆಂಗಳೂರಿನಿಂದ ಗ್ರಾಮಕ್ಕೆ ಬಂದಿದ್ದರು. ಇದನ್ನು ಗಮನಿಸಿದ ಯುವತಿಯ ತಂದೆ ಶಿವಸ್ವಾಮಿ ಹಾಗೂ ಅಣ್ಣ ಮಹೇಂದ್ರ, ಧನಲಕ್ಷ್ಮೀ ಮೆಡಿಕಲ್ವೊಂದರಲ್ಲಿ ಔಷಧಿ ಖರೀದಿಸುತ್ತಿದ್ದ ವೇಳೆ ಆಕೆಗೆ ಗಂಭೀರ ಹಲ್ಲೆ ಮಾಡಿದ್ದಾರೆ. ಗಾಯಗೊಂಡಿದ್ದ ಧನಲಕ್ಷ್ಮೀಯನ್ನು ತಕ್ಷಣ ಹನೂರು ಆಸ್ಪತ್ರೆಗೆ ಕರೆತಂದು ಪ್ರಥಮ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಕೊಳ್ಳೇಗಾಲ ಉಪವಿಭಾಗ ಆಸ್ಪತ್ರೆಗೆ ದಾಖಲಿಸಲಾಗಿದೆ.
ಈ ಸಂಬಂಧ ಹನೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.