ಕೋಲಾರ : ವಿಸ್ಟ್ರಾನ್ ಕಂಪೆನಿಯಲ್ಲಿ ಕಾರ್ಮಿಕರ ಮುಷ್ಕರ
ಐಫೋನ್ ತಯಾರಿಸುವ ದೇಶದ ಏಕೈಕ ಕಂಪೆನಿಗೆ ಬೆಂಕಿ ಹಚ್ಚಿದ ಪ್ರತಿಭಟನಾಕಾರರು
ಕೋಲಾರ : ಇತ್ತೀಚೆಗೆ ಕೋಲಾರದ ನರಸಾಪುರ ಕೈಗಾರಿಕಾ ಪ್ರದೇಶದಲ್ಲಿ ಆರಂಭಿಸಲಾಗಿದ್ದ ವಿಸ್ಟ್ರಾನ್ ಕಂಪೆನಿಯಲ್ಲಿ ಕಾರ್ಮಿಕರು ಮುಷ್ಕರ ನಡೆಸುತ್ತಿದ್ದಾರೆ.
ಕಳೆದ ಎರಡು ಮೂರು ತಿಂಗಳಿಂದ ಕಾರ್ಮಿಕರಿಗೆ ಸರಿಯಾಗಿ ವೇತನ ನೀಡದ ಕಾರಣ ಬೆಳ್ಳಂಬೆಳಗ್ಗೆ ಸಾವಿರಾರು ಕಾರ್ಮಿಕರು ಕಂಪೆನಿ ಮುಂದೆ ಜಮಾವಣೆಗೊಂಡು ಕಂಪೆನಿ ವಿರುದ್ಧ ಪ್ರತಿಭಟನೆ ನಡೆಸುತ್ತಿದ್ದಾರೆ. ಮುಷ್ಕರ ನಿರತ ಕಾರ್ಮಿಕರು ಕಂಪನಿಯ ಕಿಟಕಿ ಗಾಜುಗಳನ್ನು ಹೊಡೆದು ಕಂಪೆನಿಗೆ ಬೆಂಕಿ ಹಚ್ಚಿ ತಮ್ಮ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸ್ಥಳೀಯರಿಗೆ ಗುತ್ತಿಗೆ ಆಧಾರದ ನಾಲ್ಕನೆಯ ದರ್ಜೆಯ ಕೆಲಸಗಳನ್ನು ನೀಡಿ ಹೊರ ರಾಜ್ಯದ ಅಭ್ಯರ್ಥಿಗಳನ್ನು ಖಾಯಂ ಉದ್ಯೋಗ ಅವಕಾಶಗಳನ್ನು ನೀಡುತ್ತಿರುವ ಬಗ್ಗೆ ಕಾರ್ಮಿಕರಲ್ಲಿ ಆರಂಭದಿಂದಲೂ ಅಸಮದಾನವಿತ್ತು. ಇದೀಗ ವೇತನ ಕೂಡ ಸರಿಯಾಗಿ ಕೊಡ್ತಾ ಇಲ್ಲಾ ಎಂದು ಕಾರ್ಮಿಕರು ಬೀದಿಗೆ ಬಂದಿದ್ದಾರೆ. ಸುಮಾರು ಹದಿನೈದು ಸಾವಿರ ಉದ್ಯೋಗ ಸೃಷ್ಟಿಯ ಬೃಹತ್ ಕಂಪೆನಿ ಇದಾಗಿದ್ದು, ಇನ್ನೂ ಅರ್ಧದಷ್ಟು ನೇಮಕಾತಿಯೂ ಮುಗಿದಿರಲಿಲ್ಲ.
ಐಫೋನ್ ತಯಾರಿಸುವ ದೇಶದ ಏಕೈಕ ಕಂಪನಿ ವಿಸ್ಟ್ರಾನ್, ಆರಂಭದಲ್ಲೇ ಕಾರ್ಮಿಕರ ಆಕ್ರೋಶಕ್ಕೆ ಗುರಿಯಾಗಿದೆ. ಸ್ಥಳಕ್ಕೆ ಆಗಮಿಸಿರುವ ಪೊಲೀಸರು ಗುಂಪು ಚದುರಿಸಲು ಲಾಠೀ ಪ್ರಹಾರ ನಡೆಸಿದ್ದಾರೆ. ಕೆಲವು ಕಾರ್ಮಿಕರನ್ನು ವಶಕ್ಕೆ ಪಡೆದಿದ್ದಾರೆ. ಪ್ರಸ್ತುತ ಈಗ ಕಂಪನಿಯ ಬಳಿ ಪ್ರಕ್ಷುಬ್ದ ವಾತಾವರಣ ನಿರ್ಮಾಣ ಆಗಿದೆ.
ಸ್ಥಳಕ್ಕೆ ಜಿಲ್ಲಾಧಿಕಾರಿ ಸತ್ಯಭಾಮ, ಪೊಲೀಸ್ ಅಧೀಕ್ಷಕ ಕಾರ್ತಿಕ್ ರೆಡ್ಡಿ ಭೇಟಿ ನೀಡಿ ಘಟನೆಯ ಬಗ್ಗೆ ಪರಿಶೀಲನೆ ನಡೆಸುತ್ತಿದ್ದಾರೆ.