ಕಣ್ವ ಸಮೂಹ ಸಂಸ್ಥೆಯ 426 ಕೋಟಿ ರೂ. ಮೌಲ್ಯದ ಆಸ್ತಿ ಜಪ್ತಿ ಮಾಡಿದ ಸಿಐಡಿ
ಬೆಂಗಳೂರು, ಡಿ.16: ಹೆಚ್ಚಿನ ಬಡ್ಡಿಯ ಆಮಿಷವೊಡ್ಡಿ ನಿಶ್ಚಿತ ಠೇವಣಿ ಹೆಸರಿನಲ್ಲಿ ಕೋಟ್ಯಂತರ ರೂಪಾಯಿ ಸಂಗ್ರಹಿಸಿ ವಂಚಿಸಿರುವ ಆರೋಪ ಪ್ರಕರಣ ಸಂಬಂಧ ಕಣ್ವ ಸಮೂಹ ಸಂಸ್ಥೆಯ 426.19 ಕೋಟಿ ರೂ. ಮೌಲ್ಯದ ಆಸ್ತಿ ಅನ್ನು ಸಿಐಡಿ ಜಪ್ತಿ ಮಾಡಿದೆ.
ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಬ್ಯಾಂಕ್ನ ವ್ಯವಸ್ಥಾಪಕ ನಿರ್ದೇಶಕ ಹಾಗೂ ಸಂಸ್ಥಾಪಕ ಎನ್.ನಂಜುಂಡಯ್ಯ ಅವರನ್ನು ಜಾರಿ ನಿರ್ದೇಶನಾಲಯದ (ಈಡಿ) ಇತ್ತೀಚಿಗಷ್ಟೇ ಬಂಧಿಸಿ, ಈತನ ಹೆಸರಿನಲ್ಲಿದ್ದ ಆಸ್ತಿಯನ್ನು ಈಡಿ ವಶಕ್ಕೆ ಪಡೆದುಕೊಂಡಿತ್ತು.
ಇದರ ಬೆನ್ನಲ್ಲೇ, ಸಿಐಡಿ ತನಿಖಾಧಿಕಾರಿಗಳು ಒಟ್ಟು 111 ಆಸ್ತಿಗಳು ಒಳಗೊಂಡತೆ 426.19 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ತೆಗೆದುಕೊಂಡಿದೆ.
ಇನ್ನು, ಈ ಕುರಿತು ಪ್ರಕಟನೆ ಹೊರಡಿಸಿರುವ ಸಿಐಡಿ, ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಸಾರ್ವಜನಿಕರು ದಾಖಲಾತಿಗಳೊಂದಿಗೆ ದೂರುಗಳನ್ನು ಸಲ್ಲಿಸುತ್ತಿದ್ದು, ಇವುಗಳನ್ನು ಕ್ರೋಢಿಕರಿಸಿ ಒಟ್ಟು ಎಷ್ಟು ಮೊತ್ತ ಹಣವನ್ನು ಹೂಡಿಕೆ ಮಾಡಿಕೊಂಡಿದ್ದಾರೆ ಎಂಬುದನ್ನು ಪತ್ತೆ ಮಾಡಬೇಕಾಗಿದೆ.
ಹಾಗಾಗಿ, ಒಂದು ವೇಳೆ ಯಾರಾದರೂ, ಕಣ್ವ ಸೌಹಾರ್ದ ಕೋ-ಆಪರೇಟಿವ್ ಕ್ರೆಡಿಟ್ ಕೋ. ಸೊಸೈಟಿಯಲ್ಲಿ ಹಣ ಹೂಡಿಕೆ ಮಾಡಿದ್ದರೆ, ಬೆಂಗಳೂರಿನ ಸಿಐಡಿ ಕಚೇರಿಗೆ ಭೇಟಿ ನೀಡಿ ಡಿವೈಎಸ್ಪಿ ಮುಹಮ್ಮದ್ ರಫೀ ಅವರಿಗೆ ದಾಖಲಾತಿ ಸಹಿತ ದೂರು ನೀಡುವಂತೆ ತಿಳಿಸಿದೆ.