ಬಿಜೆಪಿ ಸರಕಾರದ ಅವಧಿಯಲ್ಲೇ ದತ್ತ ಪೀಠಕ್ಕೆ ಮುಕ್ತಿ: ಸಂಸದೆ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು, ಡಿ.27: ಪೀಠದ ಮುಕ್ತಿಗೆ ಕಾನೂನಿನ ಅಡೆತಡೆಗಳಿವೆ. ಈ ಸಂಬಂಧ ಕಾನೂನು ತಜ್ಞರೊಂದಿಗೆ ಸಮಾಲೋಚನೆ ನಡೆಸಲಾಗುತ್ತಿದೆ. ದತ್ತಪೀಠಕ್ಕೆ ನಮ್ಮ ಸರಕಾರದ ಅವಧಿಯಲ್ಲೇ ಮುಕ್ತಿ ಸಿಗಲಿದೆ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದ್ದಾರೆ.
ರವಿವಾರ ನಗರದಲ್ಲಿ ವಿಶ್ವಹಿಂದೂ ಪರಿಷತ್ ಹಾಗೂ ಬಜರಂಗದಳ ಹಮ್ಮಿಕೊಂಡಿದ್ದ ಸಂಕೀರ್ತನಾ ಯಾತ್ರೆಯಲ್ಲಿ ಪಾಲ್ಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ದತ್ತಪಾದುಕೆ ಇರುವುದು ಚಿಕ್ಕಮಗಳೂರು ಜಿಲ್ಲೆಯಲ್ಲಾದರೂ ಜಗತ್ತಿನಾದ್ಯಂತ ದತ್ತನ ಭಕ್ತರಿದ್ದಾರೆ. ದತ್ತಪೀಠ ಹಿಂದೂಗಳದ್ದಾಗಬೇಕೆಂಬುದು ಬಿಜೆಪಿ ಪಕ್ಷದ ಸಂಕಲ್ಪವಾಗಿದೆ. ರಾಮಮಂದಿರದಂತೆ ದತ್ತಪೀಠದಲ್ಲಿ ದತ್ತನ ಮಂದಿರ ನಿರ್ಮಾಣವಾಗಬೇಕಿದೆ. ದತ್ತಪೀಠದ ಮುಕ್ತಿಗೆ ಕಾನೂನಿನಲ್ಲಿ ಸಾಕಷ್ಟು ಅಡೆತಡೆಗಳಿವೆ. ಈ ಸಂಬಂಧ ನಮ್ಮ ಪಕ್ಷದ ಕಾನೂನು ತಜ್ಞರು ಪರಿಶೀಲನೆ ನಡೆಸುತ್ತಿದ್ದಾರೆ ಎಂದರು.
ಬಿಜೆಪಿ ಸರಕಾರದ ಅವಧಿಯಲ್ಲೇ ದತ್ತಪೀಠಕ್ಕೆ ಮುಕ್ತಿ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ ಅವರು, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣವಾಗುತ್ತಿರುವಂತೆಯೇ ಈ ಪೀಠದಲ್ಲಿ ದತ್ತನ ಮಂದಿರ ನಿರ್ಮಾಣವಾಗಲಿದೆ. ಮುಂದಿನ ದಿನಗಳಲ್ಲಿ ದತ್ತಪೀಠ ನಮ್ಮದಾಗಲಿದೆ ಎಂದರು.