ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆ ಬಿಕ್ಕಟ್ಟು: 50ನೇ ದಿನಕ್ಕೆ ಕಾಲಿಟ್ಟ ಕಾರ್ಮಿಕರ ಹೋರಾಟ
ಬೆಂಗಳೂರು, ಡಿ. 28: ರಾಮನಗರ ಜಿಲ್ಲೆ ಬಿಡದಿಯ ಕೈಗಾರಿಕಾ ಪ್ರದೇಶದಲ್ಲಿ ಟೊಯೋಟಾ ಕಿರ್ಲೋಸ್ಕರ್ ಕಾರ್ಖಾನೆಯ ಆಡಳಿತ ಮಂಡಳಿ ಹಾಗೂ ಕಾರ್ಮಿಕರ ನಡುವಿನ ಬಿಕ್ಕಟ್ಟು ಮುಂದುವರೆದಿದ್ದು, ಅಮಾನತ್ತು ರದ್ದು ಸೇರಿದಂತೆ ಇನ್ನಿತರ ಬೇಡಿಕೆ ಈಡೇರಿಕೆಗೆ ಆಗ್ರಹಿಸಿ ನಡೆಸುತ್ತಿರುವ ಕಾರ್ಮಿಕರ ಹೋರಾಟ 50ನೆ ದಿನಕ್ಕೆ ಕಾಲಿಟ್ಟಿದೆ.
ಕಾರ್ಖಾನೆಯ ಏಳು ಮಂದಿ ಸಹೋದ್ಯೋಗಿಗಳ ಅಕಾಲಿಕ ಮರಣದ ಸ್ಮರಣಾರ್ಥ ಸೋಮವಾರ ಏರ್ಪಡಿಸಿದ್ದ ರಕ್ತದಾನ ಶಿಬಿರದಲ್ಲಿ ಒಟ್ಟು 400 ಯೂನಿಟ್ ರಕ್ತ ಸಂಗ್ರಹವಾಗಿದೆ. ಈ ಮಧ್ಯೆ ಕಾರ್ಮಿಕ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಕತ್ರಿ, ಕಾರ್ಮಿಕ ಮುಖಂಡರೊಂದಿಗೆ ಸಮಾಲೋಚನೆ ನಡೆಸಿದ್ದು, ಶೀಘ್ರದಲ್ಲೆ ಮತ್ತೊಂದು ಸುತ್ತಿನ ಮಾತುಕತೆ ಮೂಲಕ ಸಮಸ್ಯೆ ಇತ್ಯರ್ಥಪಡಿಸುವ ಭರವಸೆ ನೀಡಿದ್ದಾರೆಂದು ಗೊತ್ತಾಗಿದೆ.
'ಟೊಯೋಟಾ ಕಿರ್ಲೋಸ್ಕರ್ ಕಂಪೆನಿ ಆಡಳಿತ ಮಂಡಳಿ ಕಾರ್ಮಿಕರ ಅಮಾನತ್ತು ರದ್ದುಪಡಿಸಬೇಕು. ಕೂಡಲೇ ಕಾರ್ಖಾನೆಯಲ್ಲಿ ಉತ್ಪಾದನೆ ಆರಂಭಿಸಬೇಕು. ಅಲ್ಲದೆ, ಕಾರ್ಮಿಕರಿಗೆ ನೀಡುತ್ತಿರುವ ಎಲ್ಲ ರೀತಿಯ ಕಿರುಕುಳ ನಿಲ್ಲಿಸಬೇಕು. 'ರಕ್ತ ಕೊಟ್ಟೇವು ಸ್ವಾಭಿಮಾನ ಬಿಡೆವು' ಎಂದು ಕಾರ್ಮಿಕ ಮುಖಂಡರು ಆಕ್ರೋಶ ವ್ಯಕ್ತಪಡಿಸಿದ್ದಾರೆ.