ಕೋಳಿ ಸಾರಿಗಾಗಿ ನಡೆದ ಗಲಾಟೆ ಯುವಕನ ಕೊಲೆಯಲ್ಲಿ ಅಂತ್ಯ
ಮಡಿಕೇರಿ, ಡಿ.29: ಕೋಳಿ ಸಾರಿಗಾಗಿ ನಡೆದ ಕಾಳಗ ಕೊಲೆಯಲ್ಲಿ ಅಂತ್ಯವಾದ ಘಟನೆ ಪೊನ್ನಂಪೇಟೆಯ ನಾಲ್ಕೇರಿ ಗ್ರಾಮದಲ್ಲಿ ನಡೆದಿದೆ.
ಕಾಫಿ ತೋಟದಲ್ಲಿ ಕೆಲಸಕ್ಕಿದ್ದ ನಂಜನಗೂಡು ತಾಲೂಕಿನ ಕೊತ್ತೇನಹಳ್ಳಿ ನಿವಾಸಿ ಸುರೇಶ್ ಕುಮಾರ್ ದಾಸ (25) ಎಂಬವನೇ ಮೃತ ಕಾರ್ಮಿಕನಾಗಿದ್ದು, ಕೊಲೆ ಆರೋಪಿ, ಕಾರ್ಮಿಕ ರಾಜು(17)ವನ್ನು ಕುಟ್ಟ ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಸೋಮವಾರ ರಾತ್ರಿ ತೋಟದ ಸಮೀಪ ಕೋಳಿ ಸಾರು ಮಾಡಿ ಊಟ ಮಾಡುವ ಸಂದರ್ಭ ಮಾತಿಗೆ ಮಾತು ಬೆಳೆದಿದೆ. ಇದು ಅತಿರೇಕಕ್ಕೆ ತಿರುಗಿ ಸುರೇಶ್ ಕುಮಾರ್ ದಾಸನ ಮೇಲೆ ರಾಜು ಕ್ರಿಕೆಟ್ ಬ್ಯಾಟ್ ಮತ್ತು ಸೌದೆಯಿಂದ ಹಲ್ಲೆ ನಡೆಸಿದ್ದಾನೆ ಎನ್ನಲಾಗಿದ್ದು, ಈ ಸಂದರ್ಭ ಸ್ಥಳದಲ್ಲೇ ಸುರೇಶ್ ಮೃತಪಟ್ಟಿದ್ದಾನೆ.
ಸ್ಥಳಕ್ಕೆ ಭೇಟಿ ನೀಡಿದ ಕುಟ್ಟ ಪೊಲೀಸರು ಆರೋಪಿಯನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿಕೊಂಡಿದ್ದಾರೆ. ಈ ಇಬ್ಬರು ಕಾರ್ಮಿಕರು ಸುಮಾರು ಮೂರು ವಾರಗಳ ಹಿಂದೆ ಕೊತ್ತೇನಹಳ್ಳಿಯಿಂದ ನಾಲ್ಕೇರಿ ಗ್ರಾಮಕ್ಕೆ ಕಾಫಿ ತೋಟದ ಕೆಲಸಕ್ಕೆ ಬಂದಿದ್ದರೆಂದು ಹೇಳಲಾಗಿದೆ.
Next Story