ಸದಾನಂದಗೌಡರಿಗೆ ಕರೆ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ಮೋದಿ: ವಿಶ್ರಾಂತಿ ಪಡೆಯಲು ಸಲಹೆ
ಬೆಂಗಳೂರು, ಜ. 4: ಅನಾರೋಗ್ಯದ ಹಿನ್ನೆಲೆಯಲ್ಲಿ ನಗರದ ಖಾಸಗಿ ಆಸ್ಪತ್ರೆಗೆ ದಾಖಲಾಗಿದ್ದ ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ಅವರನ್ನು ಭೇಟಿ ಮಾಡಿದ ಮುಖ್ಯಮಂತ್ರಿ ಯಡಿಯೂರಪ್ಪ, ಗೃಹ ಸಚಿವ ಬಸವರಾಜ ಬೊಮ್ಮಾಯಿ, ಉಪಮುಖ್ಯಮಂತ್ರಿಗಳಾದ ಲಕ್ಷ್ಮಣ ಸವದಿ, ಗೋವಿಂದ ಕಾರಜೋಳ, ಡಾ.ಅಶ್ವತ್ಥ ನಾರಾಯಣ, ಸಚಿವ ಶ್ರೀರಾಮುಲು ಆರೋಗ್ಯ ವಿಚಾರಿಸಿದರು.
ದೇಹದಲ್ಲಿ ಸಕ್ಕರೆ ಅಂಶ(ಲೋ ಶುಗರ್) ಕಡಿಮೆಯಾದ ಹಿನ್ನೆಲೆಯಲ್ಲಿ ನಿನ್ನೆ ಚಿತ್ರದುರ್ಗದಲ್ಲಿ ಹಠಾತ್ತನೆ ಕುಸಿದು ಬಿದ್ದಿದ್ದರು. ಕೂಡಲೇ ಅವರನ್ನು ಅಲ್ಲಿನ ಬಸವೇಶ್ವರ ವೈದ್ಯಕೀಯ ಕಾಲೇಜು ಆಸ್ಪತ್ರೆಗೆ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ನೀಡಿ ಹೆಚ್ಚಿನ ಚಿಕಿತ್ಸೆಗಾಗಿ ಬೆಂಗಳೂರಿಗೆ ಆಂಬುಲೆನ್ಸ್ ಮೂಲಕ ಕರೆತಲಾಗಿತ್ತು.
ಸದ್ಯ ಸದಾನಂದಗೌಡ ಅವರ ಆರೋಗ್ಯ ಸ್ಥಿರವಾಗಿದ್ದು ಒಂದೆರಡು ದಿನಗಳಲ್ಲಿ ಅವರು ಆಸ್ಪತ್ರೆಯಿಂದ ಬಿಡುಗಡೆಗೊಳ್ಳುವ ಸಾಧ್ಯತೆಗಳಿವೆ ಎಂದು ಆಸ್ಪತ್ರೆಯ ಮೂಲಗಳು ತಿಳಿಸಿವೆ. ಈ ಮಧ್ಯೆ ಸದಾನಂದ ಗೌಡ ಅವರ ಆರೋಗ್ಯ ಕುರಿತು ಖುದ್ದು ಪ್ರಧಾನಿ ಮೋದಿ ಅವರು ಕರೆ ಮಾಡಿ ಆರೋಗ್ಯ ವಿಚಾರಿಸಿದ್ದು, ಆದಷ್ಟು ಬೇಗ ಚೇತರಿಕೆ ಕಾಣುವಂತೆ ಹಾರೈಸಿದರು. ಅಲ್ಲದೆ, ವಿಶ್ರಾಂತಿ ಪಡೆಯುವಂತೆ ಅವರಿಗೆ ಮೋದಿ ಸಲಹೆ ನೀಡಿದ್ದಾರೆಂದು ಗೊತ್ತಾಗಿದೆ.
ತೀವ್ರ ಕಾರ್ಯಬಾಹುಳ್ಯದ ಮಧ್ಯೆಯೂ ಫೋನ್ ಮಾಡಿ ಆರೋಗ್ಯ ವಿಚಾರಿಸಿದ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಹೃತ್ಪೂರ್ವಕ ಧನ್ಯವಾದಗಳು. ಈ ಸಂದರ್ಭದಲ್ಲಿ ಆರೋಗ್ಯದ ಬಗ್ಗೆ ಕೆಲವು ಅಮೂಲ್ಯ ಸಲಹೆಗಳನ್ನು ಕೊಡಲು ಅವರು ಮರೆಯಲಿಲ್ಲ. ಸರ್, ತಮ್ಮೆಲ್ಲರ ಶುಭಹಾರೈಕೆಯಿಂದ ನಾನು ಇನ್ನಷ್ಟು ಗಟ್ಟಿಯಾಗಿದ್ದೇನೆ.
-ಸದಾನಂದಗೌಡ, ಟ್ವೀಟ್ ಸಂದೇಶ