ಬಳ್ಳಾರಿ ಜಿಲ್ಲೆ ವಿಭಜನೆಗೆ ನಮ್ಮ ವಿರೋಧವಿದೆ: ರಾಜ್ಯಸಭಾ ಸದಸ್ಯ ನಾಸೀರ್ ಹುಸೇನ್
ಬುಡಾ ಕಚೇರಿ ಆವರಣದಲ್ಲಿ 'ಸಂಸದರ ಕಚೇರಿ' ಉದ್ಘಾಟನೆ
ಬಳ್ಳಾರಿ, ಜ.4: ಬಳ್ಳಾರಿ ಜಿಲ್ಲೆಯನ್ನು ವಿಭಜನೆ ಮಾಡುವ ಸರಕಾರದ ನಿರ್ಧಾರಕ್ಕೆ ನಮ್ಮ ವಿರೋಧವಿದೆ. ಅಖಂಡ ಬಳ್ಳಾರಿ ಜಿಲ್ಲೆಗಾಗಿ ನಡೆಯುತ್ತಿರುವ ಹೋರಾಟದ ಜೊತೆಗೆ ನಾನಿದ್ದೇನೆ ಎಂದು ರಾಜ್ಯಸಭಾ ಸದಸ್ಯ ಡಾ.ಸೈಯದ್ ನಾಸೀರ್ ಹುಸೇನ್ ತಿಳಿಸಿದ್ದಾರೆ.
ಸೋಮವಾರ ನಗರದ ಬುಡಾ ಕಚೇರಿ ಆವರಣದಲ್ಲಿ ತಮ್ಮ ಸಂಸದರ ಕಚೇರಿ ಉದ್ಘಾಟನೆಗೊಂಡ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಒಬ್ಬ ವ್ಯಕ್ತಿಯ ಸ್ವಾರ್ಥಕ್ಕಾಗಿ ಇಡೀ ಜಿಲ್ಲೆಯನ್ನು ವಿಭಜನೆ ಮಾಡುವುದು ಸರಿಯಾದ ಕ್ರಮವಲ್ಲ. ಬಳ್ಳಾರಿ ಜಿಲ್ಲೆಯನ್ನು ಯಾವುದೇ ಕಾರಣಕ್ಕೂ ವಿಭಜನೆ ಮಾಡಬಾರದು ಎಂದರು.
ಹೊಸದಿಲ್ಲಿಯಲ್ಲಿ ರೈತರು ಕೃಷಿ ಮಸೂದೆಗಳನ್ನು ವಿರೋಧಿಸಿ ಅಹೋರಾತ್ರಿ ಧರಣಿ ನಡೆಸುತ್ತಿದ್ದಾರೆ. ರೈತರ ಸಂಕಷ್ಟಗಳಿಗೆ ಸ್ಪಂದಿಸಿ ಎನ್ಡಿಎ ಮೈತ್ರಿಕೂಟದಿಂದ ಹಲವಾರು ಪಕ್ಷಗಳು ಹೊರ ಹೋಗಿವೆ. ಆದರೆ, ರೈತರ ಪರವಾಗಿ ಧ್ವನಿ ಎತ್ತಿರುವ ಯುಪಿಎ ಮೈತ್ರಿಕೂಟದಿಂದ ಯಾವ ಪಕ್ಷವು ಹೊರಹೋಗಿಲ್ಲ ಎಂದು ಅವರು ಹೇಳಿದರು.
ರೈತರು ನಡೆಸುತ್ತಿರುವ ಹೋರಾಟಕ್ಕೆ ಸ್ಪಂದಿಸಿ ಕಾಂಗ್ರೆಸ್ ಪಕ್ಷ ಸದನದ ಒಳಗೆ ಹಾಗೂ ಹೊರಗೆ ಹೋರಾಟ ನಡೆಸಿದೆ. ಕೇಂದ್ರ ಸರಕಾರದ ಈ ರೈತ ವಿರೋಧಿ ಕಾನೂನುಗಳನ್ನು ವಿರೋಧಿಸಿ ದೇಶದಾದ್ಯಂತ ಸುಮಾರು ಎರಡು ಕೋಟಿ ಸಹಿಗಳನ್ನು ಸಂಗ್ರಹಿಸಿ, ಯಾವುದೆ ಕಾರಣಕ್ಕೂ ಈ ರೈತ ವಿರೋಧಿ ಮಸೂದೆಗಳಿಗೆ ಸಹಿ ಹಾಕಬಾರದು ಎಂದು ರಾಷ್ಟ್ರಪತಿಗೆ ಕಳುಹಿಸಿಕೊಡಲಾಗಿದೆ ಎಂದು ನಾಸೀರ್ ಹುಸೇನ್ ಹೇಳಿದರು.