ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷ, ಸದಸ್ಯರ ನೇಮಕ
ಬೆಂಗಳೂರು, ಜ.4: ರಾಜ್ಯಮಟ್ಟದ ಪರಿಸರ ಪರಿಣಾಮ ಮೌಲ್ಯಮಾಪನ ಪ್ರಾಧಿಕಾರದ ಅಧ್ಯಕ್ಷರಾಗಿ ಡಾ.ಕೆ.ಆರ್.ಶ್ರೀಹರ್ಷ ಅವರನ್ನು ನೇಮಕ ಮಾಡಿ ಕೇಂದ್ರ ಪರಿಸರ ಸಚಿವಾಲಯ ಅಧಿಸೂಚನೆ ಹೊರಡಿಸಿದೆ.
ಪರಿಸರ ಸಂರಕ್ಷಣಾ ಕಾಯ್ದೆ 1986ರ ಸೆಕ್ಷನ್ 3ರ ನಿಯಮಾನುಸಾರ ಕೇಂದ್ರ ಸರಕಾರ ಈ ಆದೇಶ ಹೊರಡಿಸಿದ್ದು ಡಾ. ಕೆ.ಆರ್ ಶ್ರೀಹರ್ಷ ಅವರನ್ನು ಅಧ್ಯಕ್ಷರನ್ನಾಗಿ, ಕೆ.ಎನ್ ಶಿವಲಿಂಗೇಗೌಡ ಅವರನ್ನು ಸದಸ್ಯರನ್ನಾಗಿ ಹಾಗೂ ರಾಜ್ಯ ಸರಕಾರದ ಅರಣ್ಯ ಮತ್ತು ಪರಿಸರ ವಿಜ್ಞಾನ ಇಲಾಖೆ ಪ್ರಧಾನ ಕಾರ್ಯದರ್ಶಿಯನ್ನು ಸದಸ್ಯ ಕಾರ್ಯದರ್ಶಿಯಾಗಿ ನೇಮಕ ಮಾಡಿ ಆದೇಶ ಹೊರಡಿಸಲಾಗಿದೆ. 3 ವರ್ಷಗಳ ಅವಧಿಗೆ ಇವರು ಪ್ರಾಧಿಕಾರದಲ್ಲಿ ಕಾರ್ಯ ನಿರ್ವಹಿಸಲಿದ್ದಾರೆ.
ಮೌಲ್ಯಮಾಪನ ಪ್ರಾಧಿಕಾರಕ್ಕೆ ಪೂರಕವಾಗಿ, ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿಯನ್ನು ರಚಿಸಲಾಗಿದೆ. ಇದಕ್ಕೆ ಅಧ್ಯಕ್ಷರಾಗಿ ವಿ.ವೇಣುಗೋಪಾಲ್ ಹಾಗೂ ಸದಸ್ಯರಾಗಿ ಡಾ. ಎಚ್.ಎಸ್.ಶೇಖರ್, ಡಾ.ಜೆ.ಬಿ.ರವಿ, ನಂದಕಿಶೋರ್, ಡಾ.ಎಸ್.ಕೆ.ಗಾಲಿ, ವಿನಾಯಕ ವಿ. ಆನಂದ್, ಎಮ್.ಸಿ.ದಿನೇಶ್, ದೇವ್ಗೌಡ ರಾಜು, ಶರಣಬಸವ ಚಂದ್ರಶೇಖರ್ ಪಿಳ್ಳೈ, ಜೆ.ಜಿ.ಕಾವೇರಿಯಪ್ಪ, ಎಮ್.ಸಿ.ಮಹೇಂದ್ರಕುಮಾರ್, ಬಿ.ವಿ.ಬೈರಾರೆಡ್ಡಿ, ಡಾ. ಸರ್ವಮಂಗಲ ಆರ್.ಪಾಟೀಲ್, ಬಿ.ರಾಮಸುಬ್ಬಾರೆಡ್ಡಿ ಅವರನ್ನು ನೇಮಕ ಮಾಡಲಾಗಿದೆ.
ಯಾವುದೇ ಬಿ.ವರ್ಗದ ಯೋಜನೆಗಳು ಜಾರಿಯಾಗುವ ಮುನ್ನ ಅವುಗಳಿಂದ ಪರಿಸರದ ಮೇಲಾಗುವ ಪರಿಣಾಮಗಳನ್ನು ರಾಜ್ಯ ತಜ್ಞರ ಮೌಲ್ಯಮಾಪನ ಸಮಿತಿ ಪರಿಶೀಲಿಸಿ ಮೌಲ್ಯಮಾಪನ ಪ್ರಾಧಿಕಾರಕ್ಕೆ ಶಿಫಾರಸ್ಸು ಮಾಡುತ್ತದೆ. ಪ್ರಾಧಿಕಾರ ಈ ಕುರಿತು ಮತ್ತಷ್ಟು ಪರಿಶೀಲಿಸಿ ಯೋಜನೆಯನ್ನು ಜಾರಿಗೊಳಿಸಬಹುದೇ ಬೇಡವೇ ಎಂಬ ಕುರಿತು ನಿರ್ಧರಿಸಲಿದೆ.