ಬಿ.ಎಲ್. ಸಂತೋಷ್ರಂತೆ ವೇಷ ಧರಿಸುತ್ತಿದ್ದ ವಂಚನೆ ಪ್ರಕರಣದ ಯುವರಾಜ್ ?
ಬೆಂಗಳೂರು, ಜ.11: ವಂಚನೆ ಪ್ರಕರಣದಲ್ಲಿ ಬಂಧನಕ್ಕೊಳಗಾಗಿರುವ ಯುವರಾಜ್, ಕೆಲವರಿಗೆ ತಾನು ಬಿಜೆಪಿ ನಾಯಕರ ಆಪ್ತ ಎಂದು ನಂಬಿಸಲು ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್.ಸಂತೋಷ್ ಅವರಂತೆ ವೇಷ ಧರಿಸುತ್ತಿದ್ದ ಎನ್ನುವ ವಿಚಾರ ಬೆಳಕಿಗೆ ಬಂದಿದೆ.
ಬಿಳಿ ಬಣ್ಣದ ಅರ್ಧ ಕುರ್ತಾ, ಪಂಚೆಯನ್ನೆ ಧರಿಸುತ್ತಿದ್ದ ಆರೋಪಿ ಯುವರಾಜ್, ನೋಟದಲ್ಲಿ ಬಿ.ಎಲ್.ಸಂತೋಷ್ರೊಂದಿಗೆ ಹೋಲಿಕೆ ಮಾಡುತ್ತಿದ್ದ. ಅಷ್ಟೇ ಅಲ್ಲದೆ, ಅಮಾಯಕರನ್ನು ತನ್ನ ಜಾಲದಲ್ಲಿ ಬೀಳಿಸಿಕೊಳ್ಳಲು ಬಿ.ಎಲ್.ಸಂತೋಷ್ ಅವರು ತನ್ನ ಸಹೋದರ ಸಂಬಂಧಿ ಎಂದೂ ಕತೆ ಕಟ್ಟುತ್ತಿದ್ದ ಎನ್ನುವ ಮಾಹಿತಿ ವಿಚಾರಣೆಯಲ್ಲಿ ಗೊತ್ತಾಗಿದೆ ಎಂದು ತಿಳಿದುಬಂದಿದೆ.
ಎಫ್ಐಆರ್ ದಾಖಲು: ಇದಕ್ಕೆ ಪುಷ್ಟಿ ನೀಡುವಂತೆ ಬಿಜೆಪಿ ರಾಷ್ಟ್ರೀಯ ಕಾರ್ಯದರ್ಶಿ ಸಂತೋಷ್ ಹೆಸರಲ್ಲಿ ಆರೋಪಿ ಯುವರಾಜ್ ಬಿಲ್ಡರ್ ಇನಿತ್ ಕುಮಾರ್ ಎಂಬುವರಿಗೆ ವಂಚಿಸಿರುವ ಆರೋಪ ಕೇಳಿಬಂದಿದ್ದು, ಈ ಸಂಬಂಧ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಸದ್ಯ ಈ ಪ್ರಕರಣವನ್ನು ಸಿಸಿಬಿಗೆ ವರ್ಗಾವಣೆ ಮಾಡಲಾಗಿದೆ.
ಏನಿದು ಆರೋಪ?: ಕೇಂದ್ರ ರೇಷ್ಮೆ ಮಂಡಳಿಗೆ ಅಧ್ಯಕ್ಷನನ್ನಾಗಿ ಮಾಡುವುದಾಗಿ ನಂಬಿಸಿ ಆರೋಪಿ ಯುವರಾಜ್, ಇನಿತ್ ಕುಮಾರ್ ಬಳಿ ಸುಮಾರು 30 ಲಕ್ಷ ಹಣ ಪಡೆದಿದ್ದಾನೆ ಎನ್ನಲಾಗಿದೆ. ಇದಕ್ಕಾಗಿ ಬಿ.ಎಲ್.ಸಂತೋಷ್ ಹೆಸರು ಉಪಯೋಗಿಸಿಕೊಂಡಿದ್ದ ಆರೋಪಿ, ತಾನು ಸಂತೋಷರ ಅಣ್ಣನ ಪುತ್ರ ಎಂದು ನಂಬಿಸಿದ್ದ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ಮುಂದುವರಿದ ರಾಧಿಕಾ ಸಹೋದರನ ವಿಚಾರಣೆ
ಆರೋಪಿ ಯುವರಾಜ್ ಜತೆ ಹಣ ವರ್ಗಾವಣೆ ಆರೋಪ ಪ್ರಕರಣ ಸಂಬಂಧ ನಟಿ ರಾಧಿಕಾ ಕುಮಾರಸ್ವಾಮಿ ಹಾಗೂ ಸಹೋದರ ರವಿರಾಜ್ ವಿಚಾರಣೆಯನ್ನು ಸಿಸಿಬಿ ತನಿಖಾಧಿಕಾರಿಗಳು ಮುಂದುವರಿಸಿದ್ದಾರೆ.
ಸೋಮವಾರವೂ ಇಲ್ಲಿನ ಚಾಮರಾಜಪೇಟೆಯ ಸಿಸಿಬಿ ಕಚೇರಿಯಲ್ಲಿ ರವಿರಾಜ್ನ ವಿಚಾರಣೆ ನಡೆಸಿದ ತನಿಖಾಧಿಕಾರಿಗಳು, ಅವರ ಹೇಳಿಕೆಗಳನ್ನು ದಾಖಲು ಮಾಡಿಕೊಂಡರು ಎಂದು ತಿಳಿದುಬಂದಿದೆ.