ಪ್ರತಿ ತಿಂಗಳ ಮೂರನೇ ಶನಿವಾರ ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಕಾರ್ಯಕ್ರಮ: ಸಚಿವ ಅಶೋಕ್
ಬೆಂಗಳೂರು, ಜ. 21: ಆಡಳಿತವನ್ನು ಜನಸಾಮಾನ್ಯರ ಬಳಿಗೆ ಕೊಂಡೊಯ್ಯುವ ಮೂಲಕ ಹಳ್ಳಿಗಳಲ್ಲಿ ಸಮಸ್ಯೆ ಪರಿಹರಿಸುವ ನಿಟ್ಟಿನಲ್ಲಿ ಜಿಲ್ಲಾಧಿಕಾರಿ, ಉಪವಿಭಾಗ ಸಹಾಯಕ ಆಯುಕ್ತರು, ತಹಶಿಲ್ದಾರರು ಪ್ರತಿ ತಿಂಗಳ ಮೂರನೇ ಶನಿವಾರ ಹಳ್ಳಿಗಳಿಗೆ ಭೇಟಿ ನೀಡಬೇಕು ಎಂದು ಕಂದಾಯ ಸಚಿವ ಆರ್.ಅಶೋಕ್ ತಿಳಿಸಿದ್ದಾರೆ.
ಗುರುವಾರ ವಿಧಾನಸೌಧದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಜಿಲ್ಲಾಧಿಕಾರಿಗಳ ನಡೆ ಹಳ್ಳಿ ಕಡೆ' ಎಂಬ ವಿನೂತನ ಕಾರ್ಯಕ್ರಮವು ಮುಂಬರುವ ಫೆಬ್ರವರಿ ಮೂರನೇ ಶನಿವಾರದಂದು ರಾಜ್ಯಾದ್ಯಂತ ಅಧಿಕೃತವಾಗಿ ಜಾರಿಗೆ ಬರಲಿದ್ದು, ಅಧಿಕಾರಿಗಳು ಬೆಳಗ್ಗೆ 10ರಿಂದ ಸಂಜೆ 5ಗಂಟೆಯ ವರೆಗೆ ಹಳ್ಳಿಗಳಲ್ಲೇ ಇದ್ದು ಜನರ ಸಮಸ್ಯೆಗಳನ್ನು ಆಲಿಸಿ ಸ್ಥಳದಲ್ಲೆ ಪರಿಹಾರ ಕಲ್ಪಿಸಬೇಕು ಎಂದು ಸೂಚಿಸಿದರು.
ಜಿಲ್ಲಾಧಿಕಾರಿಗಳು ಯಾವ ತಾಲೂಕಿನ ಗ್ರಾಮಕ್ಕೆ ಭೇಟಿ ನೀಡಲಿದ್ದಾರೆ, ಸಮಯ, ದಿನಾಂಕವನ್ನು ಮೊದಲೇ ತಿಳಿಸಬೇಕು. ಜಿಲ್ಲಾಧಿಕಾರಿ ಹೊರತುಪಡಿಸಿದರೆ ಆಯಾ ತಾಲ್ಲೂಕಿನ ತಹಶೀಲ್ದಾರ್ ಸೇರಿದಂತೆ ವಿವಿಧ ಅಧಿಕಾರಿಗಳು ಬೇರೆ ಬೇರೆ ಗ್ರಾಮಗಳಿಗೆ ಭೇಟಿ ಕೊಟ್ಟು ಜನರ ಸಮಸ್ಯೆಗಳನ್ನು ಆಲಿಸಬೇಕೆಂದು ನಿರ್ದೇಶನ ನೀಡಲಾಗಿದೆ ಎಂದರು.
ಅಧಿಕಾರಿಗಳು ಪಹಣಿ ಲೋಪದೋಷ, ಸ್ಮಶಾನ ಲಭ್ಯತೆ, ಆಶ್ರಯ ಯೋಜನೆಗೆ ಅಗತ್ಯ ಭೂಮಿ, ನಿವೇಶನ, ಸರಕಾರಿ ಭೂಮಿ ಒತ್ತುವರಿ, ಆಧಾರ್, ಪಡಿತರ ಮತ್ತು ಮತದಾರರ ಗುರುತಿನ ಚೀಟಿ, ನೆರೆ/ಬರ ಪರಿಹಾರ ವಿತರಣೆ ಸೇರಿದಂತೆ ಇನ್ನಿತರ ಸಮಸ್ಯೆಗಳಿಗೆ ಸ್ಥಳದಲ್ಲೆ ಪರಿಹಾರ ನೀಡಬೇಕು.
ಅಂಗನವಾಡಿಯಲ್ಲೇ ಊಟ: ಜಿಲ್ಲಾಧಿಕಾರಿಗಳು ಸೇರಿದಂತೆ ಎಲ್ಲ ಅಧಿಕಾರಿಗಳು ಗ್ರಾಮಗಳಿಗೆ ಭೇಟಿ ಕೊಟ್ಟ ವೇಳೆ ಯಾವುದೇ ಗಣ್ಯವ್ಯಕ್ತಿಗಳ ಮನೆಯಲ್ಲಿ ಊಟ ಸೇವಿಸಬಾರದು. ಸರಕಾರಿ ಶಾಲೆ ಅಥವಾ ಅಂಗನವಾಡಿ ಕೇಂದ್ರ ಇಲ್ಲವೇ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ(ಎಸ್ಸಿ-ಎಸ್ಟಿ) ವಿದ್ಯಾರ್ಥಿಗಳ ನಿಲಯಗಳಲ್ಲೇ ಊಟ ಮಾಡಬೇಕು. ಜೊತೆಗೆ ಅಲ್ಲಿನ ಸಮಸ್ಯೆಗಳನ್ನು ಪರಿಹರಿಸಬೇಕು ಎಂದು ಅವರು ತಿಳಿಸಿದರು.
ನಾನೂ ಹಳ್ಳಿಗಳಿಗೆ ಹೋಗುವೆ: ಗ್ರಾಮೀಣ ಪ್ರದೇಶದ ಜನರ ಸಂಕಷ್ಟಗಳನ್ನು ಆಲಿಸಿ ಪರಿಹರಿಸುವ ನಿಟ್ಟಿನಲ್ಲಿ ನಾನೂ ಅಧಿಕಾರಿಗಳೊಂದಿಗೆ ಹಳ್ಳಿಗಳಲ್ಲಿ ವಾಸ್ತವ್ಯ ಮಾಡಲಿದ್ದು, ಜನರಿಗೆ ಸರಕಾರದ ಸೌಲಭ್ಯ ಕಲ್ಪಿಸುವುದರ ಜೊತೆಗೆ ಅಲ್ಲಿನ ಜನರ ಸಮಸ್ಯೆಗಳನ್ನು ಆಲಿಸಿ ಪರಿಹಾರಕ್ಕೆ ಕ್ರಮ ವಹಿಸಲಾಗುವುದು ಎಂದರು.
709 ಕೋಟಿ ರೂ.ಪರಿಹಾರ: ರಾಜ್ಯದಲ್ಲಿನ ನೆರೆ ಮತ್ತು ಬರ ಪರಿಸ್ಥಿತಿ ಹಿನ್ನೆಲೆಯಲ್ಲಿ ಒಟ್ಟು 9,22,631 ಫಲಾನುಭವಿಗಳಿಗೆ ಒಟ್ಟು 709.67 ಕೋಟಿ ಪರಿಹಾರ ಮೊತ್ತವನ್ನು ನೇರವಾಗಿ ಆರ್ಟಿಜಿಎಸ್ ಮೂಲಕ ಅವರ ಬ್ಯಾಂಕ್ ಖಾತೆಗಳಿಗೆ ಜಮಾ ಮಾಡಲಾಗಿದೆ ಎಂದು ಅಶೋಕ್ ಇದೇ ವೇಳೆ ವಿವರ ನೀಡಿದರು.
‘ಅರವತ್ತು ವರ್ಷ ಮೇಲ್ಪಟ್ಟ ಅರ್ಹ ಹಿರಿಯ ನಾಗರಿಕರಿಗೆ ವೃದ್ಧಾಪ್ಯ ವೇತನಕ್ಕೆ ದಾಖಲೆಗಳನ್ನು ಹಿಡಿದು ಕಚೇರಿಗೆ ಅಲೆದು ಚಪ್ಪಲಿ ಸವೆಸುವುದನ್ನು ತಪ್ಪಿಸಲು ದೇಶದಲ್ಲಿ ಇದೇ ಮೊದಲ ಬಾರಿಗೆ ಆಪ್ ಮೂಲಕ ‘ಸಂಧ್ಯಾ ಸುರಕ್ಷಾ' ಯೋಜನೆಯನ್ನು ಅವರತ್ತು ವರ್ಷ ತುಂಬಿದ ಅರ್ಹ ಫಲಾನುಭವಿಗಳ ಮನೆ ಬಾಗಿಲಿಗೆ ತಲುಪಿಸುವ ನೂತನ ಯೋಜನೆಗೆ ಜ.27ಕ್ಕೆ ಸಿಎಂ ಚಾಲನೆ ನೀಡಲಿದ್ದಾರೆ'
-ಆರ್.ಅಶೋಕ್, ಕಂದಾಯ ಸಚಿವ