ಎಫ್ಡಿಎ ಸೋರಿಕೆ ಪ್ರಕರಣ: ಪೊಲೀಸ್ ಪೇದೆ ಬಂಧನ
ಬೆಂಗಳೂರು, ಜ.27: ಪ್ರಥಮದರ್ಜೆ ಸಹಾಯಕ(ಎಫ್ಡಿಎ) ನೇಮಕಾತಿ ಸಂಬಂಧದ ಪ್ರಶ್ನೆಪತ್ರಿಕೆ ಸೋರಿಕೆ ಪ್ರಕರಣದ ತನಿಖೆಯನ್ನು ಸಿಸಿಬಿ ಪೊಲೀಸರು ಚುರುಕುಗೊಳಿಸಿದ್ದು, ಪೊಲೀಸ್ ಪೇದೆಯೊಬ್ಬ ಸಿಕ್ಕಿಬಿದಿದ್ದಾನೆ.
ನಾಗರಿಕ ಹಕ್ಕು ಜಾರಿ ನಿರ್ದೇಶನಾಲಯ(ಡಿಎಆರ್) ಬೆಂಗಳೂರು ವಿಭಾಗದಲ್ಲಿ ಪೇದೆಯಾಗಿ ಕೆಲಸ ಮಾಡುತ್ತಿದ್ದ ಮುಸ್ತಾಕ್ ಕ್ವಾಟಿ ನಾಯಕ್ ಎಂಬಾತ ಬಂಧಿತ ಆರೋಪಿ ಎಂದು ಜಂಟಿ ಪೊಲೀಸ್ ಆಯುಕ್ತ ಸಂದೀಪ್ ಪಾಟೀಲ್ ಹೇಳಿದ್ದಾರೆ.
ಹಾವೇರಿ ಜಿಲ್ಲೆಯ ಅಗಡಿ ಗ್ರಾಮದ ಮೂಲದ ಆರೋಪಿಯು ಕರ್ನಾಟಕ ಲೋಕಸೇವಾ ಆಯೋಗ(ಕೆಪಿಎಸ್ಸಿ)ದಲ್ಲಿ ಕಾರ್ಯ ನಿರ್ವಹಿಸುತ್ತಿದ್ದನು. ಈ ಸಂದರ್ಭದಲ್ಲಿ ಆರೋಪಿ ಮುಸ್ತಾಕ್ಗೆ ಪರೀಕ್ಷಾ ವಿಭಾಗದ ಕಂಟ್ರೋಲ್ ವಿಭಾಗದಿಂದ ಸ್ಟೇನೋಗ್ರಾಫರ್ ಆಗಿ ಕೆಲಸ ಮಾಡುತ್ತಿದ್ದ ಬಂಧಿತ ಆರೋಪಿ ಸನಾ ಬೇಡಿ ಪರಿಚಯವಾಗಿದೆ.
ತದನಂತರ, ಈಕೆಯೇ ಪ್ರಶ್ನೆಪತ್ರಿಕೆಯನ್ನು ವಾಟ್ಸಾಪ್ ಮೂಲಕ ಈತನಿಗೆ ಕಳುಹಿಸಿದ್ದಳು. ಪ್ರಶ್ನೆಪತ್ರಿಕೆ ವಿಚಾರವಾಗಿಯೇ ಇಬ್ಬರು ಸಂದೇಶಗಳನ್ನು ಕಳುಹಿಸಿಕೊಂಡಿದ್ದರು. ಪ್ರಕರಣ ಬೆಳಕಿಗೆ ಬರುತ್ತಿದ್ದಂತೆ ಪೇದೆ ಹಾವೇರಿಯಲ್ಲಿ ನಾಪತ್ತೆಯಾಗಿದ್ದ. ಈ ಸಂಬಂಧ ತನಿಖೆ ಕೈಗೊಂಡ ಸಿಸಿಬಿ ಪೊಲೀಸರು ಆರೋಪಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಿದ್ದಾರೆ.