ಎಚ್.ವಿಶ್ವನಾಥ್ ಇನ್ನು ಯಾವ ಪಕ್ಷಕ್ಕೆ ಹೋಗುತ್ತಾರೆ: ಕುಮಾರಸ್ವಾಮಿ ಪ್ರಶ್ನೆ
ಬಾಗಲಕೋಟೆ, ಜ. 31: ಮಾಜಿ ಸಚಿವ ಹಾಗೂ ಪರಿಷತ್ ಸದಸ್ಯ ಎಚ್.ವಿಶ್ವನಾಥ್ ಅವರು ಈಗಾಗಲೇ ಕಾಂಗ್ರೆಸ್, ಜೆಡಿಎಸ್ ಪಕ್ಷಗಳನ್ನು ತ್ಯಜಿಸಿದ್ದಾರೆ. ಇದೀಗ ಬಿಜೆಪಿ ವಿರುದ್ಧ ತಿರುಗಿಬಿದ್ದಿದ್ದು ಇನ್ನೂ ಮುಂದೆ ಯಾವ ಪಕ್ಷಕ್ಕೆ ಸೇರಲಿದ್ದಾರೆಂದು ಜೆಡಿಎಸ್ ಶಾಸಕಾಂಗ ಪಕ್ಷದ ನಾಯಕ ಎಚ್.ಡಿ.ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ.
ರವಿವಾರ ನಗರದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಉಪಸಭಾಪತಿ ಆಯ್ಕೆ ವಿಚಾರದಲ್ಲಿ ಬಿಜೆಪಿ-ಜೆಡಿಎಸ್ ಹೊಂದಾಣಿಕೆ ಸಂಬಂಧದ ವಿಶ್ವನಾಥ್ ಟೀಕೆ ಮಾಡುವ ನೈತಿಕತೆ ಇಲ್ಲ. ವಿಶ್ವನಾಥ್ ಅವರು ಇನ್ನೊಂದು ಪಕ್ಷ ಇದ್ದಿದ್ದರೆ ಇಷ್ಟೊತ್ತಿಗೆ ಕರ್ಚೀಫ್ ಅಥವಾ ಟವೆಲ್ ಹಾಕಿರುತ್ತಿದ್ದರು ಎಂದು ಲೇವಡಿ ಮಾಡಿದರು.
ಮುಂದಿನ ದಿನಗಳಲ್ಲಿ ವಿಶ್ವನಾಥ್ ಯಾವ ಪಕ್ಷಕ್ಕೆ ಹೋಗುತ್ತಾರೆಂದು ಗೊತ್ತಿಲ್ಲ. ಸಾಹಿತಿ ಕೋಟಾದಲ್ಲಿ ವಿಧಾನ ಪರಿಷತ್ ಸದಸ್ಯರಾಗಿರುವ ಅವರು ಸಾಹಿತ್ಯದ ಪರಿಭಾಷೆಯಲ್ಲಿಯೇ ವಿರೋಧಿಗಳನ್ನು ಟೀಕಿಸುತ್ತಾರೆಂದು ಟೀಕಿಸಿದ ಕುಮಾರಸ್ವಾಮಿ, ವಿಶ್ವನಾಥ್ ವಿರುದ್ಧ ನಾನು ಹೆಚ್ಚು ಮಾತನಾಡಲು ಬಯಸುವುದಿಲ್ಲ ಎಂದು ನಿರಾಕರಿಸಿದರು.