ಇಹ್ಸಾನ್ ಕರ್ನಾಟಕ ದಶಮಾನೋತ್ಸವ: ಫೆ.21ರಂದು ಸ್ವಾಗತ ಸಮಿತಿ ರಚನೆ
ಬಂಟ್ವಾಳ: ಉತ್ತರ ಕರ್ನಾಟಕ ಭಾಗಗಳಲ್ಲಿ ಧಾರ್ಮಿಕ ಮತ್ತು ಸಾಂತ್ವನ ಕ್ಷೇತ್ರಗಳಲ್ಲಿ ಕಳೆದ ಹತ್ತು ವರ್ಷಗಳಿಂದ ಗಮನಾರ್ಹ ಸೇವೆ ಸಲ್ಲಿಸುತ್ತಿರುವ 'ಇಹ್ಸಾನ್ ಕರ್ನಾಟಕ'ದ ದಶಮಾನೋತ್ಸವ ಅಭಿಯಾನವನ್ನು 2021 ಮಾರ್ಚ್ ನಿಂದ ಡಿಸೆಂಬರ್ ತನಕ ವಿವಿಧ ಯೋಜನೆಗಳೊಂದಿಗೆ ಹಮ್ಮಿಕೊಳ್ಳಲು ಇಹ್ಸಾನ್ ಅಧ್ಯಕ್ಷ ಶಾಫಿ ಸಅದಿ ಅವರ ಅಧ್ಯಕತೆಯಲ್ಲಿ ನಂದಾವರದಲ್ಲಿ ನಡೆದ ಸಭೆಯಲ್ಲಿ ನಿರ್ಣಯಿಸಲಾಯಿತು.
ಇದರ ಅಂಗವಾಗಿ ಹಲವು ಕಾರ್ಯಯೋಜನೆಗಳಿಗೆ ರೂಪು ಕೊಡಲಾಗಿದ್ದು, ಸಂಘದ ಸಲಹಾ ಮಂಡಳಿಗೆ ಜಂಇಯ್ಯತುಲ್ ಉಲಮಾ ರಾಜ್ಯ ಸಮಿತಿ, ಎಸ್.ವೈ.ಎಸ್.ರಾಜ್ಯ ಸಮಿತಿ ಹಾಗೂ ಕೆಸಿಎಫ್ ಇಂಟರ್ ನ್ಯಾಷನಲ್ ಸಮಿತಿಯ ಅಧ್ಯಕ್ಷ, ಪ್ರಧಾನ ಕಾರ್ಯದರ್ಶಿ ಹಾಗೂ ಕೋಶಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಎಸ್ಸೆಸ್ಸೆಫ್ ರಾಜ್ಯ ಸಮಿತಿಯ ಪ್ರಮುಖ ಪದಾಧಿಕಾರಿಗಳು ಈಗಾಗಲೇ ಸಮಿತಿಯ ಭಾಗವಾಗಿದ್ದಾರೆ.
ತೆರವಾದ ಪ್ರಧಾನ ಕಾರ್ಯದರ್ಶಿ ಹುದ್ದೆಗೆ ಉಪಾಧ್ಯಕ್ಷರಾಗಿದ್ದ ಎಂ.ವೈ.ಅಬ್ದುಲ್ ಹಫೀಲ್ ಸಅದಿ ಅವರನ್ನು ಆರಿಸಲಾಯಿತು. ಇದರ ಸ್ವಾಗತ ಸಮಿತಿ ರಚನಾ ಸಮಾವೇಶವು ಫೆಬ್ರವರಿ 21 ರವಿವಾರ ಅಪರಾಹ್ನ 2 ಗಂಟೆಗೆ ಮೆಲ್ಕಾರ್ ಆಲಡ್ಕ ಆಡಿಟೋರಿಯಂನಲ್ಲಿ ನಡೆಯಲಿದೆ.
ಉತ್ತರ ಕರ್ನಾಟಕದ ಹಲವು ಜಿಲ್ಲೆಗಳಲ್ಲಿ ಮಸ್ಜಿದ್, ಮದ್ರಸಗಳನ್ನು ಸ್ಥಾಪಿಸಿ ಧಾರ್ಮಿಕ ಜಾಗೃತಿ ಮೂಡಿಸುತ್ತಾ ಬರುತ್ತಿರುವ ಇಹ್ಸಾನ್ ಚಿತ್ರದುರ್ಗ ಸೀಬಾರ್ನಲ್ಲಿ ಬೃಹತ್ ದಾರುಲ್ ಉಲೂಂ ನಿರ್ಮಿಸಿದ್ದು ಹರಿಹರ, ಜಗಳೂರು, ಹುಬ್ಬಳ್ಳಿ, ಹಾನಗಲ್ ಮುಂತಾದ ಕಡೆಗಳಲ್ಲಿ ಬಹುಮುಖ ಶಿಕ್ಷಣ ಸಂಸ್ಥೆಗಳಿಗೆ ಯೋಜನೆ ಹಾಕಿ ಚಾಲನೆ ನೀಡಲಾಗಿದೆ. ಸಮರ್ಥ ದಾಇಗಳು ಕಾರ್ಯಯೋಜನೆಗಳ ಉಸ್ತುವಾರಿ ನೋಡುತ್ತಿದ್ದಾರೆ. ದಶಮಾನೋತ್ಸವದ ಅಂಗವಾಗಿ ಹತ್ತು ತಿಂಗಳ ಕಾಲ ಉತ್ತರದ ವಿವಿಧ ಜಿಲ್ಲೆಗಳಲ್ಲಿ ಶಿಕ್ಷಣ, ಸಾಂತ್ವನ ಮತ್ತು ದಅ್ವಾ ರಂಗಗಳಲ್ಲಿ ಹಲವಾರು ಕ್ರಾಂತಿಕಾರಕ ಯೋಜನೆಗಳನ್ನು ಜಾರಿಗೆ ತರಲಾಗುವುದು ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.
ಸ್ವಾಗತ ಸಮಿತಿ ರಚನಾ ಸಮಾವೇಶದಲ್ಲಿ ರಾಜ್ಯದ ಸುನ್ನೀ ಸಂಘ ಕುಟುಂಬದ ಎಲ್ಲ ನಾಯಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕು ಎಂದು ಇಹ್ಸಾನ್ ಕರ್ನಾಟಕ ಅಧ್ಯಕ್ಷ ಶಾಫಿ ಸಅದಿ ಬೆಂಗಳೂರು ಹಾಗೂ ಪ್ರಧಾನ ಕಾರ್ಯದರ್ಶಿ ಅಬ್ದುಲ್ ಹಫೀಲ್ ಸಅದಿ ಕೊಳಕೇರಿ ವಿನಂತಿಸಿದ್ದಾರೆ.