ಜಾತಿವಾರು ಮೀಸಲಾತಿ ಹೋರಾಟ ಸಮಾಜಕ್ಕೆ ಕಂಟಕ: ಕೇಂದ್ರ ಸಚಿವ ಸದಾನಂದಗೌಡ
ಬೆಂಗಳೂರು, ಫೆ.15: ರಾಜ್ಯದಲ್ಲಿ ನಡೆಯುತ್ತಿರುವ ಜಾತಿವಾರು ಮೀಸಲಾತಿ ಹೋರಾಟಗಳಿಂದ ಸಮಾಜ ಮತ್ತು ಆಡಳಿತಕ್ಕೂ ಕಂಟಕ ಎದುರಾಗಲಿದೆ ಎಂದು ಕೇಂದ್ರ ಸಚಿವ ಡಿ.ವಿ.ಸದಾನಂದಗೌಡ ನುಡಿದರು.
ಸೋಮವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತ್ತೀಚೆಗೆ ರಾಜ್ಯದಲ್ಲಿ ಪ್ರಬಲವಾಗಿ ಮೀಸಲಾತಿ ಹೋರಾಟಗಳು ನಡೆಯುತ್ತಿವೆ. ಆದರೆ, ಇದು ಸರಿಯಾದ ಕ್ರಮವಲ್ಲ. ಬದಲಾಗಿ ಆರ್ಥಿಕ ಪರಿಸ್ಥಿತಿ ಅನುಗುಣವಾಗಿ ಮೀಸಲಾತಿ ಅಗತ್ಯತೆ ಇದೆ ತಿಳಿಸಿದರು.
ಯಾರು ಆರ್ಥಿಕವಾಗಿ ಹಿಂದುಳಿದಿದ್ದಾರೆ, ಅವರನ್ನು ಗುರಿಯಾಗಿಸಿಕೊಂಡು ಮೀಸಲಾತಿ ನೀಡಬೇಕು. ಅಲ್ಲದೆ, ಈ ಸಂಬಂಧ ಈಗಾಗಲೇ ಕೇಂದ್ರ ಸರಕಾರ 10ರಷ್ಟು ಮೀಸಲಾತಿ ಆರ್ಥಿಕವಾಗಿ ದುರ್ಬಲವಾಗಿರುವ ವರ್ಗಕ್ಕೆ ಪ್ರಕಟಿಸಿದೆ ಎಂದ ಅವರು, ರಾಜಕೀಯವನ್ನು ಗುರಿಯಾಗಿಸಿಕೊಂಡು ನಡೆಯುವ ಮೀಸಲಾತಿ ಹೋರಾಟಗಳು ಎಂದೂ ಸಹ ಸಮಾಜಕ್ಕೆ ಒಳ್ಳೆಯದಲ್ಲ ಎಂದತಿಳಿಸಿದರು.
‘ಬಿಪಿಎಲ್ ಮಾರ್ಪಾಡು ಪರಿಶೀಲನೆ ನಡೆಸಬೇಕು'
ಮನೆಯಲ್ಲಿ ಟಿವಿ, ಬೈಕ್, ಫ್ರಿಡ್ಜ್ ಇದ್ದರೆ ಅವರ ಬಿಪಿಎಲ್ ಪಡಿತರ ಚೀಟಿಯನ್ನು ರದ್ದುಗೊಳಿಸಲಾಗುವುದು ಎನ್ನುವುದು ಸರಿಯಲ್ಲ. ಇಂದು ಟಿವಿ ಇಲ್ಲದ ಮನೆಯಿಲ್ಲ. ಹೀಗಿರುವಾಗ, ರಾಜ್ಯ ಸರಕಾರ ಬಿಪಿಎಲ್ ಕುರಿತು ಒಮ್ಮೆ ಪರಿಶೀಲನೆ ನಡೆಸಲಿ ಎಂದು ಸದಾನಂದಗೌಡ ನುಡಿದರು.