ಮೈಸೂರು: ದಿಶಾ ರವಿ ಬಂಧನ ಖಂಡಿಸಿ ಸಂವಿಧಾನ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ
ಮೈಸೂರು,ಫೆ.17: ರೈತರ ಪರ ಧ್ವನಿ ಎತ್ತಿದ ಪರಿಸರ ಕಾರ್ಯಕರ್ತೆ ದಿಶಾ ರವಿ ಬಂಧನ ಖಂಡಿಸಿ ಹಾಗೂ ಅವರನ್ನು ಬಿಡುಗಡೆಗೊಳಿಸುವಂತೆ ಆಗ್ರಹಿಸಿ ಸಂವಿಧಾನ ರಕ್ಷಣಾ ವೇದಿಕೆ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ನಗರದ ಪುರಭವನದ ಆವರಣದಲ್ಲಿರುವ ಡಾ.ಬಿ.ಆರ್.ಅಂಬೇಡ್ಕರ್ ಪ್ರತಿಮೆ ಮುಂಭಾಗ ಬುಧವಾರ ಪ್ರತಿಭಟನೆ ನಡೆಸಿ, ಕೇಂದ್ರ ಮತ್ತು ರಾಜ್ಯ ಸರ್ಕಾರ ವಿರುದ್ಧ ಧಿಕ್ಕಾರದ ಘೋಷಣೆ ಕೂಗಿದರು.
ಇದೇ ವೇಳೆ ಮಾತನಾಡಿದ ಪ್ರತಿಭಟನಾಕಾರರು, ಕೇಂದ್ರ ಸರರ್ಕಾದ ಮೂರು ಕೃಷಿ ಸಂಬಂಧಿ ಕಾಯ್ದೆಗಳ ವಿರುದ್ಧ ರೈತರು ನಡೆಸುತ್ತಿರುವ ಪ್ರತಿಭಟನೆಯನ್ನು ಹೇಗೆ ಬೆಂಬಲಿಸಬೇಕು ಎಂಬುದನ್ನು ವಿವರಿಸುವ ಟೂಲ್ ಕಿಟ್ ತಯಾರಿಸಿದ ಆರೋಪ ಹೊರಿಸಿ ಕೇಂದ್ರ ಸರ್ಕಾರ ಪರಿಸರ ಹಾಗೂ ಸಾಮಾಜಿಕ ಕಾರ್ಯಕರ್ತೆ ದಿಶಾ ರವಿ ಅವರನ್ನು ಬಂಧಿಸಿರುವುದು ಖಂಡನೀಯ. ಇದು ಪ್ರಜಾಪ್ರಭುತ್ವ ದೇಶದಲ್ಲಿ ಪ್ರಜಾಸತ್ತಾತ್ಮಕ ಹಕ್ಕುಗಳ ಮೇಲಿನ ಕ್ರೂರ ದಾಳಿಯಾಗಿದೆ. ಕೂಡಲೇ ದಿಶಾ ರವಿ ಅವರನ್ನು ಬಿಡುಗಡೆಗೊಳಸಿಬೇಕು ಎಂದು ಒತ್ತಾಯಿಸಿದರು.
ಸರ್ಕಾರದ ದೃಷ್ಟಿಯಲ್ಲಿ ಜನತೆ ರೈತರ ಹೋರಾಟಕ್ಕೆ ಬೆಂಬಲಿಸುವುದು ಅಪರಾಧವಾಗಿ ಕಾಣುತ್ತಿರುವುದು ಅಪಾಯಕಾರಿಯಾಗಿದೆ. ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ರಾಜಕೀಯ ಭಿನ್ನಾಬಿಪ್ರಾಯಗಳನ್ನು ಹತ್ತಿಕ್ಕಲು ಹೊರಟಿರುವ ಕೇಂದ್ರ ಸರಕಾರದ ಈ ಫ್ಯಾಸಿಸ್ಟ್ ನೀತಿಯು ಆಳುವ ಸರ್ಕಾರದ ವಿರುದ್ಧ ಜನತೆ ಧ್ವನಿ ಎತ್ತುವುದನ್ನು ಅಡಗಿಸಲು ಬೆದರಿಕೆಯ ಮೂಲಕ ತಡೆಯುವ ಹುನ್ನಾರವಾಗಿದೆ. ಅಲ್ಲದೆ ರಾಜ್ಯದ ಪೊಲೀಸರಿಗೆ ಮಾಹಿತಿ ನೀಡದೇ ದಿಶಾ ರವಿಯವರನ್ನು ದಿಲ್ಲಿ ಪೊಲೀಸರು ಭಯೋತ್ಪಾದಕರಂತೆ ಹೊಂಚುಹಾಕಿ ಬಂಧಿಸಿರುವುದು ಒಕ್ಕೂಟ ವ್ಯವಸ್ಥೆಯನ್ನು ಅಣಕಿಸುವಂತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಕೇಂದ್ರ ಸರ್ಕಾರ ಕಾರ್ಪೋರೇಟ್ ಪರವಾದ ಮತ್ತು ಜನ ವಿರೋಧಿ ನೀತಿಗಳನ್ನು ವಿರೋಧಿಸುವವರನ್ನು ಬೆದರಿಸುವ, ಅಕ್ರಮವಾಗಿ ಬಂಧಿಸುವ, ಹಲ್ಲೆ ಮಾಡುವ ಬೆದರಿಕೆಯ ತಂತ್ರದ ಮೂಲಕ ಜನದನಿಯನ್ನು ಹತ್ತಿಕ್ಕುತ್ತಿದೆ ಎಂದು ಕಿಡಿಕಾರಿದರು.
ಸರ್ಕಾರ ಸರ್ವಾಧಿಕಾರಿ ಧೋರಣೆಯಬನ್ನು ಕೈ ಬಿಡಬೇಕು. ರೈತ ವಿರೋಧಿ ಕರಾಳ ಕಾನೂನುಗಳನ್ನು ವಾಪಸು ಪಡೆದು, ಅಕ್ರಮವಾಗಿ ಬಂಧಿಸಿರುವ ದಿಶಾ ರವಿಯವರನ್ನು ಕೂಡಲೇ ಬಿಡುಗಡೆ ಮಾಡಬೇಕೆಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಪ್ರಾಂತ ರೈತ ಸಂಘದ ಜಗದೀಶ್ ಸೂರ್ಯ, ನೆಲೆ ಹಿನ್ನಲೆ ಕೆ.ಆರ್.ಗೋಪಾಕೃಷ್ಣ, ದಸಂಸದ ಕಲ್ಲಹಳ್ಳಿ ಕುಮಾರ್, ಗಾಂಧಿನಗರ ರಮೇಶ್, ಪ್ರೊ.ಜಿ.ಪಿ.ಬಸವರಾಜು, ಸಂಧ್ಯಾ, ಡಾ.ವಿ.ಲಕ್ಷ್ಮಿನಾರಾಯಣ್, ಸಾಹಿತಿ ರತಿರಾವ್, ಉಮಾದೇವಿ, ಸಿಪಿಐಎಂ ವಿಜಯಕುಮಾರ್, ನಾ.ದಿವಾಕರ, ಅಭಿರುಚಿ ಗಣೇಶ್, ಉಗ್ರನರಸಿಂಹೇಗೌಡ, ಪಂಡಿತಾರಾಧ್ಯ, ಶಂಭಯ್ಯ, ಪಾಲ್ಗೊಂಡಿದ್ದರು.
ದಿಶಾ ರವಿ ಮೇಲೆ ಖಲಿಸ್ಥಾನ ಮತ್ತು ಐಎಸ್ಐ ನಂಟಿದೆ ಎಂಬ ಆರೋಪವನ್ನು ಹೊರಿಸಲಾಗಿದೆ. ರೈತರ ಹೋರಾಟವನ್ನು ವಿಶ್ವಮಟ್ಟದಲ್ಲಿ ತಲುಪಿಸಲು ಅವರು ಬಳಸಿರುವ ಟೂಲ್ ಕಿಟ್ನಲ್ಲಿ ದೇಶ ದ್ರೋಹದ ಯಾವ ಅಂಶವೂ ಇಲ್ಲ ಎಂದು ಸುಪ್ರೀಂ ಕೋರ್ಟ್ನ ನಿವೃತ್ತ ನ್ಯಾಯದೀಶರೇ ಹೇಳಿದ್ದಾರೆ. ಆದರೂ ಓರ್ವ ಸಣ್ಣ ಹುಡುಗಿಯನ್ನು ಬಂಧಿಸಿರುವುದು ಅಕ್ಷಮ್ಯ ಅಪರಾಧ.
- ವಿಜಯಕುಮಾರ್, ಸಿಪಿಐಎಂ ಮುಖಂಡ