ಸರ್ವಾಧಿಕಾರದಿಂದ ಹಿಂದಿ ಭಾಷೆ ಹೇರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ: ಮುಖ್ಯಮಂತ್ರಿ ಚಂದ್ರು
ಮೈಸೂರು,ಫೆ.18: ಸರ್ವಾಧಿಕಾರದಿಂದ ಹಿಂದಿ ಭಾಷೆ ಹೇರಿದರೆ ಸಹಿಸಿಕೊಳ್ಳಲು ಸಾಧ್ಯವಿಲ್ಲ ಎಂದು ಕನ್ನಡ ಅಭಿವೃದ್ಧಿ ಪ್ರಾಧಿಕಾರದ ಮಾಜಿ ಅಧ್ಯಕ್ಷ ಮುಖ್ಯಮಂತ್ರಿ ಚಂದ್ರು ಅಭಿಪ್ರಾಯಿಸಿದರು.
ಕನ್ನಡ ಸಾಹಿತ್ಯ ಪರಿಷತ್ ಮೈಸೂರು ಘಟದಕ ವತಿಯಿಂದ ನಗರದ ಮಾನಸಂಗೋತ್ರಿಯ ವಿಜ್ಞಾನ ಭವನದಲ್ಲಿ ಗುರುವಾರ ಮೈಸೂರು ನಗರ ಪ್ರಥಮ ಕನ್ನಡ ಸಾಹಿತ್ಯ ಸಮ್ಮೇಳನ ಉದ್ಘಾಟಿಸಿ ನಂತರ ಅವರು ಮಾತನಾಡಿದರು.
ಶ್ರೀಮಂತ ರಾಷ್ಟ್ರ ಎಂದರೆ ಅಮೇರಿಕಾ, ಚೈನಾ, ಇಂಗ್ಲೆಂಡ್, ಜಪಾನ್ ಅಲ್ಲ. ಭಾರತ ಆರ್ಥಿಕವಾಗಿ ಶ್ರೀಮಂತ ಅಲ್ಲದಿದ್ದರೂ ಸಾಂಸ್ಕೃತಿಕವಾಗಿ, ಭಾವನಾತ್ಮಕವಾಗಿ ಶ್ರೀಮಂತ ದೇಶ. ಪ್ರಜಾಪ್ರಭುತ್ವದಲ್ಲಿ ವಿಭಿನ್ನತೆಯಲ್ಲಿ ಏಕತೆ ಕಂಡ ದೇಶ ಭಾರತ. ಒಂದು ದೇಶ ಒಂದು ರೀತಿ ಎಂದು ಮಾಡಲು ಸಾಧ್ಯವಿಲ್ಲ. ಒಂದು ದೇಶ ಒಂದು ಭಾಷೆ ಎಂದು ಮಾಡಲು ಸಾಧ್ಯವಿಲ್ಲ. ಅಂತಹ ಸಂದರ್ಭ ಬಂದರೆ ರಾಜ್ಯಗಳಿಗೆ ಹೆಸರಿಟ್ಟಿರುವುದನ್ನು ಬದಲಾಯಿಸಿ. ಏಕೀಕರಣವಾದ ಮೇಲೆ ಆ ಭಾಷೆಗಳ ಹೆಸರುಗಳಲ್ಲೇ ರಾಜ್ಯವಾಗಬೇಕು. ನಮ್ಮ ಹಕ್ಕನ್ನು ನಾವು ಪ್ರತಿಪಾದಿಸುತ್ತೇವೆ. ನಾವು ಹಿಂದಿ ವಿರೋಧಿಗಳಲ್ಲ, ರಾಷ್ಟ್ರೀಯ ಭಾಷೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಹೇಳಿದರು.
ಹಿಂದಿ ರಾಷ್ಟ್ರ ಭಾಷೆ ಎಂದು ಸರ್ವಾಧಿಕಾರದಿಂದ ಹೇರಲು ಸಾಧ್ಯವಿಲ್ಲ. ಸಂವಿಧಾನದ ಅಡಿಯಲ್ಲಿ ಚರ್ಚೆಗೆ ಎಲ್ಲಾ ರಾಜ್ಯಗಳು ಒಪ್ಪಿದರೆ ಸಾಮೂಹಿಕವಾಗಿ ನಾವು ಒಪ್ಪಿಕೊಳ್ಳೋಣ. ಶಿವಮೊಗ್ಗದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯಮಂತ್ರಿಗಳು ವೇದಿಕೆಯಲ್ಲಿ ಇರುತ್ತಾರೆ. ಆದರೆ ಕೇಂದ್ರ ಮಂತ್ರಿ ಇದ್ದಾಗ ಇಂಗ್ಲೀಷ್ ಮತ್ತು ಹಿಂದಿ ಭಾಷೆ ಮಾತ್ರ ಅಳವಡಿಸಲಾಗಿತ್ತು. ಆದರೆ ಅದನ್ನು ನಮ್ಮ ಸಂಸದರಾಗಲಿ, ಮುಖ್ಯಮಂತ್ರಿಗಳಾಗಲಿ ಕೇಳಲಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ತಮಿಳುನಾಡಿನಲ್ಲಿ ಕೇಂದ್ರ ಸರ್ಕಾರದ ಕಾರ್ಯಕ್ರಮ ನಡೆಯಿತು. ಅಲ್ಲಿ ತಮಿಳು ಭಾಷೆಗೆ ಪ್ರಾಧಾನ್ಯತೆ. ಹಿಂದಿ ಇಲ್ಲ, ಇಂಗ್ಲೀಷ್ ಇಲ್ಲ. ಹಾಗಿದ್ದರೆ ತಮಿಳುನಾಡಿಗೊಂದು ಪ್ರಜಾಪ್ರಭುತ್ವ ಕರ್ನಾಟಕಕ್ಕೊಂದು ಪ್ರಜಾಪ್ರಭುತ್ವ ಇದೆಯೇ ? ಕೇಳುವ ಹಕ್ಕನ್ನು ಕಳೆದುಕೊಂಡಿದ್ದೇವೆ. ನಮ್ಮ ರಾಜ್ಯದಲ್ಲಿ ಕನ್ನಡ ಇರುವುದರಿಂದ ಕನ್ನಡ ಹಾಕಿ ಎಂದು ಹೇಳಬೇಕಿತ್ತು. ಅವರ ಗುಲಾಮಗಿರಿಯಲ್ಲಿ ಕೆಲಸ ಮಾಡಬೇಕಾದರೆ ಅದನ್ನು ಹೇಳಲು ಸಾಧ್ಯವಿಲ್ಲ. ಆದರೆ ತಮಿಳುನಾಡಿನಲ್ಲಿ ಅಂತಹ ಗುಲಾಮಗಿರಿ ಇಲ್ಲ ಎಂದು ಹೇಳಿದರು.
ಸಮ್ಮೇಳನಾಧ್ಯಕ್ಷೆ ಆರ್ಯಂಬ ಪಟ್ಟಾಭಿ ಅವರನ್ನು ಮೆರವಣಿಗೆಯಲ್ಲಿ ಕಾಯಕ್ರಮಕ್ಕೆ ಕರೆದುಕೊಂಡು ಬರಲಾಯಿತು. ಕಾರ್ಯಕ್ರಮದಲ್ಲಿ ಶಾಸಕರುಗಳಾದ ತನ್ವೀರ್ ಸೇಠ್, ಎಲ್.ನಾಗೇಂದ್ರ, ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಡಾ.ವೈ.ಡಿ.ರಾಜಣ್ಣ, ನಗರ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಕೆ.ಎಸ್.ಶಿವರಾಮ್, ಮೈಸೂರು ವಿವಿ ಕುಲಪತಿ ಪ್ರೊ.ಜಿ.ಹೇಮಂತ್ ಕುಮಾರ್, ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಮೈಸೂರು ಪ್ರವಾಸದಲ್ಲಿರುವ ಸಚಿವ ಅರವಿಂದ ಲಿಂಬಾವಳಿ ಇಂದು ರಂಗಾಯಣಕ್ಕೆ ಭೇಟಿ ನೀಡಿದರು. ಈ ವೇಳೆ ರಂಗಾಯಣದ ವಿದ್ಯಾರ್ಥಿಗಳ ಕೋಲಾಟ ವೀಕ್ಷಿಸಿದರು. ನಂತರ ಕೊರೋನ ಬಳಿಕ ಮೊದಲ ನಾಟಕ ಪರ್ವಕ್ಕೆ ಅನುದಾನ ವಿಚಾರ ಕುರಿತು ಪ್ರತಿಕ್ರಿಯಿಸಿದ ಸಚಿವ ಅರವಿಂದ ಲಿಂಬಾವಳಿ, 50 ಲಕ್ಷ ರೂ. ಬಿಡುಗಡೆಗೆ ಅನುಮೋದನೆ ನೀಡಿದ್ದೇನೆ. ಶೀಘ್ರದಲ್ಲೇ ಅವರಿಗೆ ಅನುದಾನ ಬಂದು ಸೇರಲಿದೆ. ಈ ಬಾರಿಯ ಬಜೆಟ್ನಲ್ಲಿ ಇದಕ್ಕೆ ಅನುದಾನ ಸಿಗಲಿದೆ. ರಂಗಾಯಣ ರಾಜ್ಯವಲ್ಲ, ದೇಶದಲ್ಲೂ ಹೆಸರುವಾಸಿಯಾಗಿದೆ ಎಂದರು.
ಪರ್ವ ನಾಟಕದ ದಿನಾಂಕದ ಮಾಹಿತಿ ಪಡೆದುಕೊಳ್ಳುತ್ತೇನೆ. ಸಿಎಂ ಯಡಿಯೂರಪ್ಪ ಅವರನ್ನ ನಾಟಕ ಪ್ರದರ್ಶನಕ್ಕೆ ಕರೆತರುವ ವಿಚಾರದ ಬಗ್ಗೆಯು ಚರ್ಚೆ ಮಾಡುತ್ತೇನೆ ಎಂದು ಸಚಿವ ಅರವಿಂದ ಲಿಂಬಾವಳಿ ಹೇಳಿದರು.