ಮಡಿಕೇರಿ: ಹುಲಿ ದಾಳಿಗೆ ವಿದ್ಯಾರ್ಥಿ ಬಲಿ; ದಕ್ಷಿಣ ಕೊಡಗಿನಲ್ಲಿ ಹೆಚ್ಚಿದ ಆತಂಕ
ಸಾಂದರ್ಭಿಕ ಚಿತ್ರ
ಮಡಿಕೇರಿ, ಫೆ.20: ನಿರಂತರ ಹುಲಿ ದಾಳಿಯಿಂದ ನಲುಗಿ ಹೋಗಿರುವ ದಕ್ಷಿಣ ಕೊಡಗಿನಲ್ಲಿ ಇಂದು ಮಾನವ ಜೀವವೊಂದು ಬಲಿಯಾಗಿದ್ದು, ಸ್ಥಳೀಯರಲ್ಲಿ ಆತಂಕ ಹೆಚ್ಚಾಗಿದೆ.
ಪೊನ್ನಂಪೇಟೆಯ ಶ್ರೀಮಂಗಲ ಕುಮಟೂರು ಗ್ರಾಮದಲ್ಲಿ ಈ ಘಟನೆ ನಡೆದಿದ್ದು, ಎರವರ ಅಯ್ಯಪ್ಪ (16) ಮೃತ ಯುವಕ. ಸಂಜೆ ನೀರು ತರಲೆಂದು ಲೈನ್ ಮನೆಯ ಸಮೀಪ ತೆರಳುತ್ತಿದ್ದ ಸಂದರ್ಭ ಹುಲಿ ದಾಳಿ ಮಾಡಿದ್ದು, ಆತ ಸ್ಥಳದಲ್ಲೇ ಮೃತಪಟ್ಟಿದ್ದಾನೆ. ಮೆದುಳು ಹೊರ ಬಂದಿದ್ದು, ಛಿದ್ರವಾಗಿದೆ.
ಅಯ್ಯಪ್ಪ ಕಾರ್ಮಿಕ ಎರವರ ಬಸವ ಎಂಬವರ ಪುತ್ರನಾಗಿದ್ದು, ಶ್ರೀಮಂಗಲ ಶಾಲೆಯ 8 ನೇ ತರಗತಿ ವಿದ್ಯಾರ್ಥಿಯಾಗಿದ್ದಾನೆ.
ಕುಮಟೂರು ಗ್ರಾಮದ ಬೆಳೆಗಾರ ಕೋಟ್ರಂಗಡ ಬಿದ್ದಪ್ಪ ಎಂಬವರ ಲೈನ್ ಮನೆಯಲ್ಲಿ ಬಸವ ಅವರ ಕುಟುಂಬ ವಾಸವಾಗಿತ್ತು. ಮೃತ ಅಯ್ಯಪ್ಪ ತಂದೆ, ತಾಯಿ ಹಾಗೂ ಇಬ್ಬರು ಸಹೋದರಿಯರನ್ನು ಅಗಲಿದ್ದಾನೆ. ಪುತ್ರನನ್ನು ಕಳೆದುಕೊಂಡ ಕುಟುಂಬ ಶೋಕದಲ್ಲಿ ಮುಳುಗಿದೆ.
ಸ್ಥಳಕ್ಕೆ ಅರಣ್ಯ ಅಧಿಕಾರಿಗಳು ಹಾಗೂ ಪೊಲೀಸರು ಭೇಟಿ ನೀಡಿದ್ದು, ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಗ್ರಾಮಸ್ಥರ ಅಸಮಾಧಾನ
ನಿರಂತರ ಹಸುಗಳನ್ನು ಬಲಿ ಪಡೆಯುತ್ತಿರುವ ಹುಲಿಯ ವಿರುದ್ಧ ಕಾರ್ಯಾಚರಣೆ ನಡೆಸದೆ ನಿರ್ಲಕ್ಷ್ಯ ವಹಿಸಿದ್ದೇ ಈ ಘಟನೆಗೆ ಕಾರಣವೆಂದು ಗ್ರಾಮಸ್ಥರು ಆರೋಪಿಸಿದ್ದಾರೆ. ಅರಣ್ಯ ಇಲಾಖೆ ವಿರುದ್ಧ ತೀವ್ರ ಅಸಮಾಧಾನ ವ್ಯಕ್ತಪಡಿಸಿರುವ ಬೆಳೆಗಾರರು ಹಾಗೂ ಕಾರ್ಮಿಕ ವರ್ಗ ಬೃಹತ್ ಪ್ರತಿಭಟನೆಯ ಎಚ್ಚರಿಕೆ ನೀಡಿದ್ದಾರೆ.
ರೈತ ಸಂಘ ಹಾಗೂ ವಿವಿಧ ರಾಜಕೀಯ ಪಕ್ಷಗಳ, ಸಂಘ, ಸಂಸ್ಥೆಗಳ ಮುಖಂಡರುಗಳು ಸ್ಥಳಕ್ಕೆ ಭೇಟಿ ಅರಣ್ಯ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.