ಪೋಷಕರು-ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಇಂದಿನ ಸಂದರ್ಭಕ್ಕೆ ಅತ್ಯಗತ್ಯ
ಖಾಸಗಿ ಶಾಲೆಗಳಿಗೆ ಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಸಲಹೆ
ಬೆಂಗಳೂರು, ಫೆ.23: ಪೋಷಕರು ಮತ್ತು ಶಿಕ್ಷಕರಿಗೆ ಅನುಕೂಲವಾಗುವ ಸೂತ್ರ ಇಂದಿನ ಸಂದರ್ಭದ ಅವಶ್ಯಕತೆಯಾಗಿದ್ದು, ಈ ಹಿನ್ನೆಲೆಯಲ್ಲಿಯೆ ಶಾಲಾ ಶುಲ್ಕ ಕುರಿತಂತೆ ಆಲೋಚನೆ ಮಾಡಲಾಗುವುದು ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್.ಸುರೇಶ್ ಕುಮಾರ್ ಹೇಳಿದ್ದಾರೆ.
ಮಂಗಳವಾರ ವಿವಿಧ ಖಾಸಗಿ ಶಾಲಾ ಸಂಘಟನೆಗಳ ಆಶ್ರಯದಲ್ಲಿ ಶಾಲಾ ಶುಲ್ಕ ಕಡಿತ ಆದೇಶ ಮರುಪರಿಶೀಲನೆಗೆ ಒತ್ತಾಯಿಸಿ ಸ್ವಾತಂತ್ರ್ಯ ಉದ್ಯಾನವನದಲ್ಲಿ ನಡೆದ ಖಾಸಗಿ ಅನುದಾನ ರಹಿತ ಶಾಲಾ ಶಿಕ್ಷಕರ, ಸಿಬ್ಬಂದಿ ಮತ್ತು ಆಡಳಿತ ಮಂಡಳಿಗಳ ಪ್ರತಿನಿಧಿಗಳ ಪ್ರತಿಭಟನಾ ಸಭೆಯಲ್ಲಿ ಭಾಗವಹಿಸಿ ಅವರ ಅಹವಾಲು ಸ್ವೀಕರಿಸಿದ ಬಳಿಕ ಅವರು ಮಾತನಾಡಿದರು.
ಖಾಸಗಿ ಶಾಲಾ ಶಿಕ್ಷಕರ ಮತ್ತು ಪೋಷಕರ ಹಿತದೃಷ್ಟಿಯಿಂದ ಈ ಶೈಕ್ಷಣಿಕ ವರ್ಷಕ್ಕೆ ಸೀಮಿತಗೊಳಿಸಿ ಸರಕಾರ ಶೇ.30ರಷ್ಟು ಶುಲ್ಕ ಕಡಿತದ ನಿರ್ಧಾರ ಕೈಗೊಂಡಿತ್ತು, ಇದು ಖಾಸಗಿ ಶಾಲೆಗಳ ಹಿತದೃಷ್ಟಿಯಿಂದಲೂ ಒಳಿತಿನ ನಿರ್ಧಾರವಾಗಿತ್ತು. ಇಂತಹ ಒಂದು ನಿರ್ಧಾರ ಕೈಗೊಳ್ಳುವ ಮೊದಲು ಹತ್ತಾರು ಬಾರಿ ಶಾಲಾ ಸಂಘಟನೆಗಳು ಮತ್ತು ಪೋಷಕರ ಸಂಘಟನೆಗಳೊಂದಿಗೆ ಸಮಾಲೋಚನೆ ಮಾಡಲಾಗಿತ್ತು ಎಂದು ಅವರು ಹೇಳಿದರು.
ಎರಡೂ ಕಡೆಯ ವಾದಗಳನ್ನು ಆಲಿಸಿ ಎಲ್ಲರಿಗೂ ಸಮ್ಮತವಾಗುವ ನಿರ್ಧಾರವೊಂದನ್ನು ಕೈಗೊಳ್ಳಲಾಗಿತ್ತು. ಈ ನಿರ್ಧಾರದ ನಂತರವೇ ಪೋಷಕರು ಶಾಲೆಗಳಿಗೆ ಶುಲ್ಕ ಪಾವತಿಸಲು ಆರಂಭಿಸಿದರು. ಇದರಿಂದ ಖಾಸಗಿ ಶಾಲೆಗಳಿಗೆ ಅನುಕೂಲವಾಯಿತಲ್ಲದೆ ಇದರಿಂದ ಶಾಲಾ ಶಿಕ್ಷಕರಿಗೆ ಆ ಶುಲ್ಕದಿಂದ ಸಂಗ್ರಹವಾದ ಹಣದಿಂದ ವೇತನ ಪಾವತಿಸಲೂ ಸಹಕಾರಿಯಾಯಿತು ಎಂದು ಸುರೇಶ್ ಕುಮಾರ್ ತಿಳಿಸಿದರು.
ಸರಕಾರ ಶಿಕ್ಷಕರ ಹಿತದೃಷ್ಟಿಯಿಂದಲೆ ಈ ಆದೇಶ ಹೊರಡಿಸಿತ್ತು. ಈ ಕೋವಿಡ್ ವಿಷಮ ಕಾಲಘಟ್ಟದಿಂದಾಗಿ ಸಮಸ್ಯೆ ಸೃಷ್ಟಿಯಾಯಿತು. ಶಿಕ್ಷಕರ ಕಷ್ಟವನ್ನು ನಾನು ಕಣ್ಣಾರೆ ನೋಡಿದ್ದೇನೆ. ಶಿಕ್ಷಕರು ನರೇಗಾದಂತಹ ಕೆಲಸ ಮಾಡಿ ಬದುಕಿದ್ದಾರೆ. ಹಣ್ಣು ತರಕಾರಿ ಮಾರುತ್ತಿದ್ದಾರೆ. ಅದರೊಂದಿಗೆ ಇರುವ ಕೆಲಸ ಕಳೆದುಕೊಂಡು ಪೋಷಕರೂ ಆರ್ಥಿಕವಾಗಿ ಜರ್ಝರಿತರಾಗಿದ್ದಾರೆ. ಎಲ್ಲರನ್ನೂ ಸರಿದೂಗಿಸಿಕೊಂಡು ಹೋಗಬೇಕಾದ ಅನಿವಾರ್ಯತೆಯಿಂದಾಗಿ ನಾವು ಶೇ.30ರಷ್ಟು ಶುಲ್ಕ ಕಡಿತದ ನಿರ್ಧಾರ ಮಾಡಿದ್ದೆವು ಎಂದು ಅವರು ಮನವರಿಕೆ ಮಾಡಿದರು.
ಖಾಸಗಿ ಶಾಲಾ ಶಿಕ್ಷಕರಿಗೆ ಯಾವುದಾದರೂ ರೂಪದಲ್ಲಿ ನೆರವಾಗಬೇಕೆಂದು ನಾವು ಏನೆಲ್ಲಾ ಪ್ರಯತ್ನ ಮಾಡಿದೆವು. ಈ ಕುರಿತು ಸರಕಾರಿ ನೌಕರರ ಸಂಘ, ಆರ್ಥಿಕ ಇಲಾಖೆಯೊಂದಿಗೂ ಮಾತನಾಡಿದೆವು. ಆರ್ಥಿಕ ಪರಿಸ್ಥಿತಿಯ ದುಸ್ಥಿತಿಯ ಹಿನ್ನೆಲೆಯಲ್ಲಿ ಅದ್ಯಾವುದೂ ಈ ವರ್ಷ ಕೈಗೂಡಲಿಲ್ಲ. ಕಾರ್ಮಿಕ ಇಲಾಖೆ ಮೂಲಕವೂ ಕೊನೆಗೆ ಫುಡ್ ಕಿಟ್ ನೀಡಲು ಚಿಂತಿಸಿದೆವು. ಕಾರ್ಮಿಕ ಇಲಾಖೆ ನಿಯಮಗಳು ಅದಕ್ಕೆ ಪೂರಕವಾಗಿರಲಿಲ್ಲ. ನಾನಂತೂ ಶಿಕ್ಷಕರ ವಿರುದ್ಧವಿಲ್ಲ. ನನಗೆ ಶಿಕ್ಷಕರ ಸಮಸ್ಯೆ ಬೇರೆಲ್ಲರಿಗಿಂತಲೂ ಚೆನ್ನಾಗಿ ಅರಿವಿದೆ. ಶುಲ್ಕ ವಿಚಾರದಲ್ಲಿ ನನಗಾಗಲಿ, ಸರಕಾರಕ್ಕಾಗಿ ಯಾವುದೇ ಪ್ರತಿಷ್ಠೆಯಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ಪೋಷಕರ ಮತ್ತು ಶಾಲೆಗಳ ಮಧ್ಯದ ನಂಬುಗೆ ಮತ್ತು ವಿಶ್ವಾಸಗಳು ಈಗ ಇಲ್ಲವಾಗಿರುವುದರಿಂದ ಇಬ್ಬರೂ ಒಂದು ಸರ್ವಸಮ್ಮತ ನಿರ್ಧಾರಕ್ಕೆ ಬರಲಿಲ್ಲವಾದ್ದರಿಂದ ಅನಿವಾರ್ಯವಾಗಿ ಸರಕಾರ ಮಧ್ಯೆ ಪ್ರವೇಶ ಮಾಡಬೇಕಾದ ಅನಿವಾರ್ಯತೆ ಉಂಟಾಯಿತು ಎಂದು ಸುರೇಶ್ ಕುಮಾರ್ ಹೇಳಿದರು.
ಶಿಕ್ಷಕರು ಮತ್ತು ಖಾಸಗಿ ಆಡಳಿತ ಮಂಡಳಿಗಳ ಸಂಘಟನೆಗಳಿವೆ. ಆದರೆ ಪೋಷಕರು ಸಂಘಟಿತರಾಗಿದ್ದರೆ ಇದಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿ ಬಂದು ನಮ್ಮನ್ನು ಕೇಳುತ್ತಿದ್ದರು. ರಾಜ್ಯದ ಒಟ್ಟಾರೆ ಎಲ್ಲ ಪೋಷಕರು ಬರಲು ಸಾಧ್ಯವಾಗಿಲ್ಲ. ನೀವೆಲ್ಲ ಸಂಘಟಿತರಾಗಿ ಬಂದಿದ್ದೀರಿ. ನಾವು ಅಸಂಘಟಿತ ಸಮುದಾಯದ ಪೋಷಕರನ್ನೂ ಗಮನದಲ್ಲಿಟ್ಟುಕೊಳ್ಳಬೇಕಿದೆ. ಹಾಗಂತ ನಾವು ಶಿಕ್ಷಕರ ವಿರುದ್ಧವಿದ್ದೇವೆ ಎಂದೂ ಅರ್ಥವಲ್ಲ. ನೀವು ನಿಮ್ಮ ವಿದ್ಯಾರ್ಥಿಗಳ ಪೋಷಕರೊಂದಿಗೆ ಕುಳಿತು ಮಾತನಾಡಿಕೊಂಡು ಸೂತ್ರವೊಂದನ್ನು ತಂದರೆ ನನ್ನದೇನೂ ಅಭ್ಯಂತರವಿಲ್ಲ ಎಂದು ಸುರೇಶ್ ಕುಮಾರ್ ಹೇಳಿದರು.
ಕಡತ ವಿಲೇವಾರಿ ಆಂದೋಲನ: ಬಿಇಒ ಮತ್ತು ಡಿಡಿಪಿಐ ಕಚೇರಿಗಳಲ್ಲಿ ಭ್ರಷ್ಟಾಚಾರ ತಾಂಡವವಾಡುತ್ತಿದ್ದು, ಕಡತಗಳು ಧೂಳು ತಿನ್ನತ್ತಿದ್ದು, ಯಾವುದೇ ಕೆಲಸಗಳಾಗುತ್ತಿಲ್ಲ ಎಂಬ ಆಡಳಿತ ಮಂಡಳಿಗಳ ಪ್ರಸ್ತಾವಕ್ಕೆ, ಇದನ್ನು ತಡೆಯಲೆಂದು ಇದೆ ಮಾರ್ಚ್ ಒಂದರಿಂದ ವಿಭಾಗ ಮಟ್ಟ ಮತ್ತು ನಂತರ ಜಿಲ್ಲಾ ಮಟ್ಟದಲ್ಲಿ ಕಡತ ವಿಲೇವಾರಿ ಆಂದೋಲನ ನಡೆಸಲಾಗುವುದು ಎಂದು ಅವರು ಹೇಳಿದರು.
ಆಂಧ್ರ ಮತ್ತು ಪಂಜಾಬ್ ಹೊರತುಪಡಿಸಿದರೆ ಆರನೇ ತರಗತಿಯಿಂದ ಶಾಲೆ ಆರಂಭ ಮಾಡಿರುವುದು ನಮ್ಮ ರಾಜ್ಯ ಮಾತ್ರ. ನಾವು ಎಲ್ಲರ ಹಿತದೃಷ್ಟಿಯಿಂದ ಈ ನಿರ್ಧಾರ ಕೈಗೊಂಡಿದ್ದೇವೆ. ಇನ್ನು ಕೋವಿಡ್ ತಾಂತ್ರಿಕ ಸಲಹಾ ಸಮಿತಿ ಸಭೆ ಸೇರಿ ಒಂದನೇ ತರಗತಿಯಿಂದ ಶಾಲೆ ಆರಂಭಿಸಲೂ ಚಿಂತನೆ ನಡೆಸಿದ್ದೇವೆ. ಹಾಗೆಯೇ ಮಕ್ಕಳ ಮತ್ತು ಶಾಲೆಗಳ ಹಿತದೃಷ್ಟಿಯಿಂದ ಶಾಲಾ ದಾಖಲಾತಿ ಸಮಯವನ್ನೂ ವಿಸ್ತರಿಸಲಾಗಿದೆ. ಇದೆಲ್ಲವನ್ನೂ ನಮ್ಮ ಆಡಳಿತ ಮಂಡಳಿಗಳೂ ಗಮನಿಸಬೇಕಿದೆ ಎಂದು ಸುರೇಶ್ ಕುಮಾರ್ ಹೇಳಿದರು.