ಗಗನ್ ಬಡೇರಿಯಾ ವಿರುದ್ಧದ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಕಾರ
ಬೆಂಗಳೂರು, ಫೆ.26: ಜಂತಕಲ್ ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಐಎಎಸ್ ಹಿರಿಯ ಅಧಿಕಾರಿ ಗಂಗಾರಾಮ್ ಬಡೇರಿಯಾ ಪುತ್ರ ಗಗನ್ ಬಡೇರಿಯಾ ವಿರುದ್ಧದ ವಿಚಾರಣೆ ರದ್ದುಗೊಳಿಸಲು ಹೈಕೋರ್ಟ್ ನಿರಾಕರಿಸಿದೆ.
ಈ ಕುರಿತು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ಹೈಕೋರ್ಟ್ ಏಕಸದಸ್ಯ ನ್ಯಾಯಪೀಠ, ನಿಮ್ಮ ಖಾತೆಗೆ ವರ್ಗಾವಣೆ ಆಗಿರುವ ಹಣ ಯಾವ ಕ್ಷೇತ್ರಕ್ಕೆ ಸೇರಿದ್ದು ಎಂಬುದು ವಿಚಾರಣೆ ಪೂರ್ಣಗೊಂಡ ಮೇಲೆ ತಿಳಿಯಲಿದೆ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾಗೊಳಿಸಿದೆ.
ಗಗನ್ ಬಡೇರಿಯಾ ಬ್ಯಾಂಕ್ ಖಾತೆಗೆ ಕಂಪೆನಿಯೊಂದರಿಂದ 20 ಲಕ್ಷ ರೂ. ಸಂದಾಯವಾಗಿದೆ. ಅದಿರು ಸಾಗಣೆಗೆ ತಂದೆ ಅನುಮತಿ ನೀಡಿದ್ದಕ್ಕಾಗಿ ಸಂದಾಯವಾದ ಹಣ ಇದು ಎಂದು ಎಸ್ಐಟಿ(ವಿಶೇಷ ತನಿಖಾ ತಂಡ) ದೋಷಾರೋಪಣೆ ಸಲ್ಲಿಸಿತ್ತು.
ಈ ಪ್ರಕರಣದಲ್ಲಿ ನನ್ನನ್ನು ಸುಖಾಸುಮ್ಮನೆ ಸಿಲುಕಿಸಲಾಗಿದೆ. ಟ್ವೆಂಟಿ ಫಸ್ಟ್ ಸೆಂಚುರಿ ವೈರ್ ರಾಡ್ಸ್ ಲಿಮಿಟೆಡ್ನಿಂದ ನನ್ನ ಖಾತೆಗೆ ಹಣ ಸಂದಾಯವಾಗಿದೆ. ಈ ಕಂಪೆನಿ ಗಣಿಗಾರಿಕೆಗೆ ಸಂಬಂಧಿಸಿದ ವ್ಯವಹಾರ ನಡೆಸುವುದಿಲ್ಲ ಮತ್ತು ಅವರ ಸಂಪರ್ಕದಲ್ಲೂ ಇಲ್ಲ. ಸಂಗೀತ ಉದ್ಯಮದ ವ್ಯವಹಾರಕ್ಕೆ ಸಂಬಂಧಿಸಿದ ಹಣ ಇದಾಗಿದೆ ಎಂದು ಗಗನ್ ಅರ್ಜಿಯಲ್ಲಿ ತಿಳಿಸಿದ್ದರು.