ನ್ಯಾಯಮೂರ್ತಿಗಳು, ವಕೀಲರನ್ನು ಕೊಲ್ಲುವ ಬೆದರಿಕೆ: ಪತ್ರ ಬರೆದಿದ್ದ ವೃದ್ಧನಿಗೆ ಕಾನೂನು ಸಲಹೆ ಪಡೆಯಲು ಹೈಕೋರ್ಟ್ ಸೂಚನೆ
ಬೆಂಗಳೂರು, ಮಾ.1: ನ್ಯಾಯಮೂರ್ತಿಗಳು ಹಾಗೂ ಕೆಲ ವಕೀಲರನ್ನು ಹತ್ಯೆ ಮಾಡುವುದಾಗಿ ಬೆದರಿಸಿ ಪತ್ರ ಬರೆದಿದ್ದ 72 ವರ್ಷದ ವೃದ್ಧನ ಆರೋಗ್ಯ ಹಾಗೂ ವಯಸ್ಸನ್ನು ಪರಿಗಣಿಸಿರುವ ಹೈಕೋರ್ಟ್ ಪ್ರಕರಣದಲ್ಲಿ ಮುಂದುವರಿಯುವ ಮುನ್ನ ಕಾನೂನು ಸಲಹೆ ಪಡೆದುಕೊಳ್ಳುವಂತೆ ಸೂಚಿಸಿದೆ.
ನ್ಯಾಯಮೂರ್ತಿಗಳನ್ನು ಕೊಲ್ಲುವ ಬೆದರಿಕೆ ಒಡ್ಡಿ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದ ನಗರದ ಬೆಂಗಳೂರಿನ ಜೆಪಿ ನಗರ ನಿವಾಸಿ ಎಸ್.ವಿ ಶ್ರೀನಿವಾಸ ರಾವ್ ವಿರುದ್ಧ ಹೈಕೋರ್ಟ್ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ದೂರು ದಾಖಲಿಸಿಕೊಂಡಿದೆ. ಈ ಅರ್ಜಿಯನ್ನು ಸೋಮವಾರ ಮುಖ್ಯ ನ್ಯಾಯಮೂರ್ತಿ ಎ.ಎಸ್. ಓಕ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ವಿಚಾರಣೆ ವೇಳೆ ವಿಡಿಯೋ ಕಾನ್ಫರೆನ್ಸ್ ಮೂಲಕ ಹಾಜರಾದ ಆರೋಪಿ ವೃದ್ಧ ಶ್ರೀನಿವಾಸ ರಾವ್, ಅರ್ಜಿಗೆ ಸಲ್ಲಿಸಿರುವ ಆಕ್ಷೇಪಣೆಗೆ ಪೀಠ ಅಸಮಾಧಾನ ವ್ಯಕ್ತಪಡಿಸಿತು. ಜತೆಗೆ ನ್ಯಾಯಮೂರ್ತಿಗಳು ಭ್ರಷ್ಟರು ಎಂದಿದ್ದೀರಿ. ಇದು ಸರಿಯೇ ಎಂದು ಪ್ರಶ್ನಿಸಿತು. ಪೀಠದ ಪ್ರಶ್ನೆಗೆ ಉತ್ತರಿಸಿದ ಶ್ರೀನಿವಾಸರಾವ್ ನನ್ನ ತಪ್ಪಿದ್ದರೆ ನೀವು ವಿಧಿಸುವ ಯಾವುದೇ ಶಿಕ್ಷೆ ಅನುಭವಿಸಲು ಸಿದ್ಧನಿದ್ದೇನೆ ಎಂದು ಪೀಠಕ್ಕೆ ತಿಳಿಸಿದರು.
ಆರೋಪಿ ವೃದ್ಧನ ಹೇಳಿಕೆಗೆ ಬೇಸರ ವ್ಯಕ್ತಪಡಿಸಿದ ಪೀಠ, ಪ್ರಕರಣಕ್ಕೆ ಸಂಬಂಧಿಸಿದಂತೆ ಕಾನೂನು ಸಲಹೆ ಪಡೆದುಕೊಳ್ಳಿ ಎಂದು ಸೂಚಿಸಿತು. ಶ್ರೀನಿವಾಸ ರಾವ್ ತಮ್ಮ ಆಕ್ಷೇಪಣೆಗಳಿಗೆ ಕಾನೂನು ಸಲಹೆ ಪಡೆದುಕೊಳ್ಳಲು ಒಪ್ಪಿದರು. ವಿಚಾರಣೆಯನ್ನು ಮುಂದೂಡಲಾಯಿತು.
ಏನಿದು ಪ್ರಕರಣ: ಕಳೆದ ಜ.29ರಂದು ಹೈಕೋರ್ಟ್ ರಿಜಿಸ್ಟ್ರಾರ್ ಜನರಲ್ ಅವರಿಗೆ ಪತ್ರ ಬರೆದಿದ್ದ ಎಸ್.ವಿ ಶ್ರೀನಿವಾಸ ರಾವ್, ರಾಜ್ಯ ಹೈಕೋರ್ಟ್ ನಲ್ಲಿ 28 ಭ್ರಷ್ಟ ನ್ಯಾಯಮೂರ್ತಿಗಳಿದ್ದಾರೆ. ಭ್ರಷ್ಟಾಚಾರದಲ್ಲಿ ತೊಡಗಿರುವ ಹೈಕೋರ್ಟ್ ನ ಓರ್ವ ನ್ಯಾಯಮೂರ್ತಿ, ಸುಪ್ರೀಂ ಕೋರ್ಟ್ ಒಬ್ಬರು ನ್ಯಾಯಮೂರ್ತಿ ಹಾಗೂ ಇಬ್ಬರು ನ್ಯಾಯವಾದಿಗಳನ್ನು ಕೊಲ್ಲುವುದಾಗಿ ಬೆದರಿಕೆ ಹಾಕಿದ್ದರು. ಈ ಹಿನ್ನೆಲೆಯಲ್ಲಿ ಹೈಕೋರ್ಟ್ ಶ್ರೀನಿವಾಸ ರಾವ್ ವಿರುದ್ಧ ಸ್ವಯಂಪ್ರೇರಿತ ಕ್ರಿಮಿನಲ್ ನ್ಯಾಯಾಂಗ ನಿಂದನೆ ಪ್ರಕರಣ ದಾಖಲಿಸಿಕೊಂಡಿದೆ. 2010ರಲ್ಲಿ ಶ್ರೀನಿವಾಸ ರಾವ್ ಇದೇ ರೀತಿ ಪತ್ರ ಬರೆದಿದ್ದರು. ಆದರೆ, ಕ್ಷಮೆ ಕೇಳಿದ್ದರಿಂದ ಹೈಕೋರ್ಟ್ ಪ್ರಕರಣ ಕೈಬಿಟ್ಟಿತ್ತು.