"ಸಿದ್ದರಾಮಯ್ಯ ಚ್ವಲೋ, ಯಡಿಯೂರಪ್ಪ ಭಾಳಾ ಕರಪ್ಶನ್ ಮಾಡಿದ್ದಾನೆ"
ರಮೇಶ್ ಜಾರಕಿಹೊಳಿಯದ್ದೆನ್ನಲಾದ ವೀಡಿಯೋದಲ್ಲಿ ಹಲವು ವಿವಾದಾತ್ಮಕ ಹೇಳಿಕೆಗಳು!
photo: twitter
ಬೆಂಗಳೂರು: ಬಿಜೆಪಿ ಪಕ್ಷದ ಪ್ರಭಾವಿ ಮುಖಂಡ ಹಾಗೂ ರಾಜ್ಯ ಜಲ ಸಂಪನ್ಮೂಲ ಸಚಿವರಾಗಿರುವ ರಮೇಶ್ ಜಾರಕಿಹೊಳೆಯವರದ್ದು ಎನ್ನಲಾದ ವೀಡಿಯೋ ಸಿಡಿಯನ್ನು ನಾಗರಿಕ ಹಕ್ಕು ಹೋರಾಟ ಸಮಿತಿಯ ಅಧ್ಯಕ್ಷ ದಿನೇಶ್ ಕಲ್ಲಹಳ್ಳಿ ಎಂಬವರು ಬೆಂಗಳೂರು ಪೊಲೀಸ್ ವರಿಷ್ಠರಿಗೆ ಹಸ್ತಾಂತರಿಸಿದ್ದಾರೆ. ಈಗಾಗಲೇ ವೈರಲ್ ಆಗಿರುವ ವೀಡಿಯೋ ಕುರಿತಾದಂತೆ ವ್ಯಾಪಕ ಆಕ್ರೋಶ ವ್ಯಕ್ತವಾಗುತ್ತಿದ್ದು, ಸಾರ್ವಜನಿಕರು ಸಚಿವರ ರಾಜೀನಾಮೆಗೆ ಆಗ್ರಹಿಸಿದ್ದಾರೆ.
ಈ ವೀಡಿಯೋದಲ್ಲಿ ಹಲವಾರು ವಿವಾದಾತ್ಮಕ ಮಾತುಗಳನ್ನೂ ಸೆರೆ ಹಿಡಿಯಲಾಗಿದೆ. "ಸಿದ್ದರಾಮಯ್ಯ ಚ್ವಲೋ (ಒಳ್ಳೆಯ ವ್ಯಕ್ತಿ) ಯಡಿಯೂರಪ್ಪ ಭಾಳಾ ಕರಪ್ಶನ್ ಮಾಡಿದ್ದಾನ" ಎಂದು ಹೇಳುತ್ತಿರುವುದು ವೀಡಿಯೋದಲ್ಲಿ ಸೆರೆಯಾಗಿದೆ. ಇದಲ್ಲದೇ ಬೆಳಗಾವಿಯ ಕುರಿತು ಮಾತನಾಡುತ್ತಾ, ʼಬೆಳಗಾವಿಯು ಒಂದು ರಾಜ್ಯʼ ಎಂದು ಹೇಳಿ ಪ್ರತ್ಯೇಕ ರಾಜ್ಯಕ್ಕೆ ಬೆಂಬಲ ನೀಡುವ ಮಾತುಗಳನ್ನಾಡಿದ್ದಾರೆ ಎಂದು ತಿಳಿದು ಬಂದಿದೆ.
"ಮರಾಠಿಗರು ಮತ್ತು ಕನ್ನಡಿಗರನ್ನು ಅವಾಚ್ಯ ಶಬ್ಧಗಳಿಂದ ನಿಂದಿಸಿದ್ದು ಮಾತ್ರವಲ್ಲದೇ, ಮಾಧ್ಯಮಗಳ ಕುರಿತು ಕೆಟ್ಟ ಪದಪ್ರಯೋಗ ನಡೆಸಿದ್ದು ವೀಡಿಯೋದಲ್ಲಿ ಸೆರೆಯಾಗಿದೆ. ಡ್ಯಾಮ್ ಪರಿಸರದಲ್ಲಿ ವೀಡಿಯೋ ಡಾಕ್ಯುಮೆಂಟರಿ ಮಾಡಲು ಅನುಮತಿ ಕೇಳಲು ಬಂದಿದ್ದ ಯುವತಿಯನ್ನು ಸಚಿವರು ಬಳಸಿಕೊಂಡಿದ್ದಾರೆ ಎಂದು ವೀಡಿಯೋದಲ್ಲಿ ಉಲ್ಲೇಖಿಸಲಾಗಿದೆ.
ಸದ್ಯ ಈ ಕುರಿತು ಪ್ರಕರಣ ದಾಖಲಿಸಲಾಗಿದ್ದು, ಸಚಿವ ರಮೇಶ್ ಜಾರಕಿಹೊಳಿ ಈ ಕುರಿತು ಯಾವುದೇ ಪ್ರತಿಕ್ರಿಯೆ ನೀಡಿಲ್ಲ ಎಂದು ತಿಳಿದು ಬಂದಿದೆ.