ಬೆಲೆ ಏರಿಕೆ, ಸಿಡಿ ಪ್ರಕರಣ, ಮೀಸಲಾತಿ ಹೋರಾಟ: ಸದನದಲ್ಲಿ ಸರಕಾರದ ವಿರುದ್ಧ ಟೀಕಾಪ್ರಹಾರಕ್ಕೆ ವಿಪಕ್ಷಗಳು ಸಜ್ಜು
ಗುರುವಾರದಿಂದ ಅಧಿವೇಶನ: ಮಾ.8ರಂದು ಬಜೆಟ್ ಮಂಡನೆ
ಬೆಂಗಳೂರು, ಮಾ. 3: ವಿಧಾನ ಮಂಡಲ ಮಹತ್ವದ ಬಜೆಟ್ ಅಧಿವೇಶನ ನಾಳೆ(ಮಾ.4)ಯಿಂದ ವಿದ್ಯುಕ್ತವಾಗಿ ಆರಂಭವಾಗಲಿದ್ದು, ಈ ತಿಂಗಳ ಅಂತ್ಯದವರೆಗೆ ಕಲಾಪ ನಡೆಯಲಿದೆ.
ಲಿಂಗಾಯತ ಪಂಚಮಸಾಲಿ, ಕುರುಬ ಮತ್ತು ಪರಿಶಿಷ್ಟ ಪಂಗಡ ಸೇರಿದಂತೆ ಮೀಸಲಾತಿಗೆ ಆಗ್ರಹಿಸಿ ವಿವಿಧ ಸಮುದಾಯಗಳ ಹೋರಾಟ, ಸಚಿವ ರಮೇಶ್ ಜಾರಕಿಹೊಳಿ ಸಿಡಿ ಪ್ರಕರಣ, ಪೆಟ್ರೋಲ್, ಡೀಸೆಲ್ ಸಹಿತ ಅಗತ್ಯ ವಸ್ತುಗಳ ಬೆಲೆ ಏರಿಕೆ, ಬಿಜೆಪಿ ಶಾಸಕ ಯತ್ನಾಳ್ ಹೇಳಿಕೆ ಸೇರಿದಂತೆ ಇನ್ನಿತರ ವಿಚಾರಗಳನ್ನಿಟ್ಟುಕೊಂಡು ಸರಕಾರವನ್ನು ಇಕ್ಕಟ್ಟಿನಲ್ಲಿ ಸಿಲುಕಿಸಲು ವಿಪಕ್ಷಗಳು ಸಜ್ಜಾಗಿವೆ.
ಕಲಾಪ ಆರಂಭದ ಸಮಯದಲ್ಲೇ ಸಚಿವ ರಮೇಶ್ ಜಾರಕಿಹೊಳಿಯದ್ದೆನ್ನಲಾದ ಸಿಡಿ ಬಹಿರಂಗವಾಗಿರುವುದು ಬಿಜೆಪಿ ಸರಕಾರಕ್ಕೆ ತೀವ್ರ ಮುಜುಗರವನ್ನು ತಂದಿಟ್ಟಿದೆ. ಹೀಗಾಗಿ ಅದರಿಂದ ತಪ್ಪಿಸಿಕೊಳ್ಳಲು ಅವರ ರಾಜೀನಾಮೆ ಪಡೆದುಕೊಂಡಿದ್ದು, ಅದನ್ನು ಅಂಗೀಕರಿಸಲಾಗಿದೆ. ಹೀಗಾಗಿ ಸೂಕ್ತ ತನಿಖೆ ಮತ್ತು ಯುವತಿಗೆ ರಕ್ಷಣೆ ಕಲ್ಪಿಸಲು ಆಗ್ರಹಿಸಿ ಪ್ರತಿಪಕ್ಷಗಳು ಸದನದಲ್ಲಿ ಹೋರಾಟಕ್ಕೆ ಮುಂದಾಗುವ ಸಾಧ್ಯತೆಗಳಿವೆ.
ಲಿಂಗಾಯತ ಪಂಚಮಸಾಲಿ ಸಮುದಾಯ 2ಎಗೆ, ಪರಿಶಿಷ್ಟ ಪಂಗಡದ ಮೀಸಲಾತಿ ಶೇ.7.5ಕ್ಕೆ ಹೆಚ್ಚಳ ಹಾಗೂ ಕುರುಬ ಸಮುದಾಯ ಎಸ್ಟಿ ಸೇರ್ಪಡೆಗೆ ಆಗ್ರಹಿಸಿ ವಿವಿಧ ಸಮುದಾಯಗಳು ಪಾದಯಾತ್ರೆ, ಹೋರಾಟ ನಡೆಸುತ್ತಿವೆ. ಈ ಮಧ್ಯೆ ಪಂಚಮಸಾಲಿ ಸಮುದಾಯವನ್ನು 2ಎಗೆ ಸೇರ್ಪಡೆಗೆ ಕೆಲ ಸಮುದಾಯಗಳಿಂದ ವಿರೋಧವೂ ವ್ಯಕ್ತವಾಗಿದ್ದು ಗೊಂದಲ ಸೃಷ್ಟಿಯಾಗಿದೆ. ಈ ವಿಚಾರಗಳು ಸದನದಲ್ಲಿ ಪ್ರಸ್ತಾಪವಾಗುವ ಸಾಧ್ಯತೆಗಳಿವೆ.
ಒಂದು ರಾಷ್ಟ್ರ, ಒಂದು ಚುನಾವಣೆ: ಬಜೆಟ್ ಅಧಿವೇಶನದ ಮೊದಲು ಎರಡು ದಿನ ವಿಧಾನ ಮಂಡಲ ಉಭಯ ಸದನಗಳಲ್ಲಿ ‘ಒಂದು ರಾಷ್ಟ್ರ, ಒಂದು ಚುನಾವಣೆ' ಕುರಿತು ಸುದೀರ್ಘ ಚರ್ಚೆ ನಡೆಯಲಿದ್ದು, ಪ್ರತಿಪಕ್ಷದ ನಾಯಕರು ಸೇರಿದಂತೆ ಎಲ್ಲ ಸದಸ್ಯರು ಸಮಾಲೋಚನೆ ನಡೆಸಲಿದ್ದು, ಚುನಾವಣಾ ವ್ಯವಸ್ಥೆ ಸುಧಾರಣೆಗೆ ತಮ್ಮ ಸಲಹೆ-ಸೂಚನೆಗಳನ್ನು ನೀಡಲಿದ್ದಾರೆ.
‘ಉಭಯ ಸದನಗಳಲ್ಲಿ ಮೂಡುವ ಅಭಿಪ್ರಾಯಗಳನ್ನು ರಾಷ್ಟ್ರಪತಿ, ಪ್ರಧಾನಿ ಮತ್ತು ಕೇಂದ್ರ ಚುನಾವಣಾ ಆಯೋಗಕ್ಕೆ ಕಳುಹಿಸಬಹುದು. ಆದರೆ, ಒಂದು ರಾಷ್ಟ್ರ, ಒಂದು ಚುನಾವಣೆ ಸಂಬಂಧ ಯಾವುದೇ ನಿರ್ಣಯವನ್ನು ಈ ಸದನದಲ್ಲಿ ಕೈಗೊಳ್ಳಲು ಸಾಧ್ಯವಿಲ್ಲ' ಎಂದು ವಿಧಾನಸಭಾ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಸ್ಪಷ್ಟಪಡಿಸಿದ್ದಾರೆ.
ಮಾ.8ಕ್ಕೆ ಆಯವ್ಯಯ: ಹಣಕಾಸು ಸಚಿವರೂ ಆಗಿರುವ ರಾಜ್ಯದ ಮುಖ್ಯಮಂತ್ರಿ ಯಡಿಯೂರಪ್ಪ ಮಾ. 8ರ ಸೋಮವಾರ 2021-22ನೆ ಸಾಲಿನ ಆಯವ್ಯಯ ಮಂಡನೆ ಮಾಡಲಿದ್ದಾರೆ. ಪೆಟ್ರೋಲ್, ಡೀಸೆಲ್ ಸೇರಿದಂತೆ ಅಗತ್ಯ ವಸ್ತುಗಳ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸಂಕಷ್ಟಕ್ಕೆ ಸಿಲುಕಿರುವ ಜನಸಾಮಾನ್ಯರ ಮೇಲಿನ ತೆರಿಗೆ ಹೊರೆಯನ್ನು ಇಳಿಸಲಿದ್ದಾರೆಂಬ ನಿರೀಕ್ಷೆ, ಕುತೂಹಲ ಸೃಷ್ಟಿಸಿದೆ.
ಉಳಿದಂತೆ ಈ ಅಧಿವೇಶನದಲ್ಲಿ ಮೂರು ವಿಧೇಯಕಗಳು ಮಂಡನೆಯಾಗಲಿದ್ದು, ಮಾ.9ರಿಂದ ಪ್ರತಿನಿತ್ಯ ಪ್ರಶ್ನೋತ್ತರ ಕಲಾಪ, ಶೂನ್ಯವೇಳೆ, ಗಮನ ಸೆಳೆಯುವ ಸೂಚನೆಗಳು ಸೇರಿದಂತೆ ಇನ್ನಿತರ ಕಲಾಪಗಳು, ನಿಯಮ 69ರಡಿ ಪ್ರಸ್ತಾಪಿಸಲಾಗುವ ವಿಚಾರಗಳ ಚರ್ಚೆ ನಡೆಯಲಿದ್ದು, ಭಾರೀ ನಿರೀಕ್ಷೆ ಮತ್ತು ಕುತೂಹಲಕ್ಕೆ ಈ ಅಧಿವೇಶನ ಕಲಾಪ ಸಾಕ್ಷಿಯಾಗಲಿದೆ.