ರಮೇಶ್ ಜಾರಕಿಹೊಳಿ ದೈವ ಭಕ್ತ, ಅವರು ತಪ್ಪು ಮಾಡಿದ್ದಾರೆಂದು ಅನ್ನಿಸುತ್ತಿಲ್ಲ: ಸಚಿವ ಸಿ.ಪಿ.ಯೋಗೇಶ್ವರ್
ಮೈಸೂರು,ಮಾ.3: ರಮೇಶ್ ಜಾರಕಿಹೊಳಿ ನಾನು ತಪ್ಪಿತಸ್ಥನಲ್ಲ ಎಂದು ಹೇಳಿದ್ದಾರೆ. ಹಾಗಾಗಿ ಈ ಪ್ರಕರಣದ ವಿಚಾರಣೆ ಆಗಬೇಕಿದೆ. ಸತ್ಯಾಸತ್ಯತೆ ಹೊರಗೆ ಬರಲಾಗದೆ ಏನನ್ನೂ ಹೇಳಲಾಗುವುದಿಲ್ಲ ಎಂದು ಸಚಿವ ಜಗದೀಶ್ ಶೆಟ್ಟರ್ ಹೇಳಿದರು.
ನಗರದ ಚಾಮುಂಡಿ ಬೆಟ್ಟದ ತಪ್ಪಲಿನಲ್ಲಿರು ಸುತ್ತೂರು ಶಾಖಾ ಮಠಕ್ಕೆ ಬುಧವಾರ ಕೈಗಾರಿಕೆ ಸಚಿವ ಜಗದೀಶ್ ಶೆಟ್ಟರ್, ಪ್ರವಾಸೋದ್ಯಮ ಸಚಿವ ಸಿ.ಪಿ.ಯೋಗೇಶ್ವರ್ ಮತ್ತು ಕರ್ನಾಟಕ ರಾಜ್ಯ ಪ್ರವಾಸೋದ್ಯಮ ಅಭಿವೃದ್ಧಿ ನಿಗಮದ ಅಧ್ಯಕ್ಷೆ ಶೃತಿ ಕೃಷ್ಣ ಅವರು ಭೇಟಿ ನೀಡಿ ಸುತ್ತೂರು ಶ್ರೀ ಶಿವರಾತ್ರಿ ದೇಶಿಕೇಂದ್ರ ಸ್ವಾಮೀಜಿಗಳ ಆಶೀರ್ವಾದ ಪಡೆದರು.
ನಂತರ ಮಾಧ್ಯಮದವರೊಂದಿಗೆ ಮಾತನಾಡಿದ ಸಚಿವ ಜಗದೀಶ್ ಶೆಟ್ಟರ್, ರಮೇಶ್ ಜಾರಕಿಹೊಳಿಯಿಂದ ನಾನು ತಪ್ಪಿತಸ್ಥನಲ್ಲ ಎಂಬ ಹೇಳಿಕೆ ಬಂದಿದೆ. ಈಗ ಈ ಪ್ರಕರಣದ ವಿಚಾರಣೆ ಆಗಬೇಕಿದೆ. ಆ ನಂತರ ಈ ಬಗ್ಗೆ ನಿರ್ಧಾರ ಮಾಡುತ್ತೇವೆ. ಆ ಪ್ರಕರಣದ ಸತ್ಯಾಸತ್ಯತೆ ಹೊರಗೆ ಬರಲಾಗದೆ ಏನನ್ನೂ ಹೇಳಲಾಗುವುದಿಲ್ಲ. ಇಂದು ಕ್ಯಾಬಿನೆಟ್ ಮೀಟಿಂಗ್ ಇದೆ. ಅವರು ಬರುತ್ತಾರೊ ಸಿಎಂ ಭೇಟಿ ಮಾಡುತ್ತಾರೋ ಎಂದು ನೋಡುತ್ತೇವೆ. ಈ ವಿಚಾರದ ಬಗ್ಗೆ ಮುಖ್ಯಮಂತ್ರಿಗಳ ಜೊತೆ ಚರ್ಚೆ ಮಾಡುತ್ತೇವೆ ಎಂದರು.
ಸಿಡಿ ಪ್ರಕರಣದ ಬಗ್ಗೆ ಸಚಿವ ಸಿ.ಪಿ.ಯೋಗೇಶ್ವರ್ ಪ್ರತಿಕ್ರಿಯಿಸಿ, ಇದೊಂದು ರಾಜಕೀಯ ಪಿತೂರಿ. ರಮೇಶ್ ಜಾರಕಿಹೊಳಿ ದೈವ ಭಕ್ತ. ಸಮಾಜಕ್ಕೆ ಅಂಜುವ ವ್ಯಕ್ತಿ. ಈ ರೀತಿಯ ತಪ್ಪು ಮಾಡಿರುತ್ತಾರೆ ಅಂತ ಅನ್ನಿಸುತ್ತಿಲ್ಲ. ಮೇಲ್ನೋಟಕ್ಕೆ ಇದೊಂದು ರಾಜಕೀಯ ಪಿತೂರಿ ಅನ್ನಿಸುತ್ತಿದೆ. ನಿನ್ನೆಯಿಂದಲೂ ಮೈಸೂರಿನಲ್ಲೇ ಇದ್ದೇನೆ. ಏನಾಗಿದೆ ಎಂಬುದರ ಬಗ್ಗೆ ಮಾಹಿತಿ ಇಲ್ಲ. ಸತ್ಯಾಸತ್ಯತೆ ಪರಿಶೀಲನೆ ಆಗುವವರೆಗೂ ನೋಡೋಣ. ಈ ವಿಚಾರದಲ್ಲಿ ನಾನು ರಮೇಶ್ ಜಾರಕಿಹೊಳಿ ಅವರ ಬೆಂಬಲಕ್ಕೆ ಇದ್ದೇನೆ ಎಂದರು.