ಸಿದ್ದರಾಮಯ್ಯ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ: ಬಿಜೆಪಿ
ಬೆಂಗಳೂರು, ಮಾ.9: ಮಾನ್ಯ ವಲಸೆ ನಾಯಕ ಸಿದ್ದರಾಮಯ್ಯ ಅವರೇ, ನಿಮ್ಮ ಈ ಸಾಧನೆಯನ್ನು ರಾಜ್ಯದ ಜನತೆ ಮರೆತಿಲ್ಲ. ಕಲಾಪ ಬಹಿಷ್ಕಾರ ನಿಮ್ಮ ದುರಹಂಕಾರ ಮತ್ತು ಬೇಜವಾಬ್ದಾರಿತನಕ್ಕೆ ಹಿಡಿದ ಕೈಗನ್ನಡಿ. ರಾಜ್ಯದ ಇತಿಹಾಸದಲ್ಲಿ ಬಜೆಟ್ ಕಲಾಪ ಬಹಿಷ್ಕರಿಸಿದ್ದು ಇದೇ ಮೊದಲಾಗಿದ್ದು, ಇದಕ್ಕೆ ಪಶ್ಚಾತ್ತಾಪ ಪಡುವ ದಿನಗಳು ದೂರವಿಲ್ಲ ಎಂದು ಬಿಜೆಪಿ ಸರಣಿ ಟ್ವೀಟ್ಗಳನ್ನು ಮೂಡುವ ಮೂಲಕ ಟೀಕಿಸಿದೆ.
ವೈಯಕ್ತಿಕ ಸಮಸ್ಯೆಗಾಗಿ ಗೌರವಾನ್ವಿತ ಸದನದಲ್ಲಿ ಬಟ್ಟೆ ಬಿಚ್ಚಲು ಸಿದ್ದರಾಮಯ್ಯ ಆಪ್ತ ಬಿ.ಝೆಡ್.ಝಮೀರ್ ಅಹ್ಮದ್ ಖಾನ್ ಶಾಸಕನಿಗೆ ನಿರ್ದೇಶನ ಕೊಡುತ್ತಾರೆ ಎಂದರೆ ಕಾಂಗ್ರೆಸ್ ಪಕ್ಷಕ್ಕೆ ಸಂವಿಧಾನ, ಪ್ರಜಾಪ್ರಭುತ್ವದಲ್ಲಿ ನಂಬಿಕೆ ಇಲ್ಲವೇ? ಇದು ಕೇವಲ ಸದನಕ್ಕೆ ಮಾಡಿದ ಅವಮಾನವಲ್ಲ, ರಾಜ್ಯದ ಜನತೆಗೆ ಮಾಡಿದ ಅವಮಾನ ಎಂದು ಬಿಜೆಪಿ ಹೇಳಿದೆ.
ಮಾನ್ಯ ಸಿದ್ದರಾಮಯ್ಯ, ನೀವ್ಯಾವ ಸಾಧನೆ ಮಾಡಿದ್ದೀರೆಂದು ಸಂತೋಷಗೊಂಡಿದ್ದೀರಿ. ಸಂವಿಧಾನ, ಪ್ರಜಾಪ್ರಭುತ್ವವನ್ನು ಧಿಕ್ಕರಿಸಿದ್ದು ನಿಮ್ಮ ಸಂತೋಷಕ್ಕೆ ಕಾರಣವೇ? ಜನವಿರೋಧಿ ಆಡಳಿತ ಮಾಡಿಕೊಂಡು ಬಂದ ಕಾಂಗ್ರೆಸ್ ಪಕ್ಷದಿಂದ ಪ್ರಜಾಪ್ರಭುತ್ವ, ಸದನದ ಬಗ್ಗೆ ಘನತೆ, ಗೌರವವನ್ನು ನಿರೀಕ್ಷಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಹೇಳಿದೆ.
ಗೋಹತ್ಯೆ ನಿಷೇಧ ಕಾಯ್ದೆ ಮಂಡನೆ ವೇಳೆ ಸಭಾತ್ಯಾಗ, ಕೃಷಿ ಕಾಯ್ದೆ ಮಂಡಿಸುವಾಗ ಸಭಾತ್ಯಾಗ, ಭೂ ಸುಧಾರಣಾ ಕಾಯ್ದೆ ಮಂಡಿಸುವಾಗಲೂ ಪಲಾಯನ, ಬಜೆಟ್ ಮಂಡಿಸುವಾಗಲೂ ಸಭಾತ್ಯಾಗ. ಚರ್ಚೆಗೆ ಅವಕಾಶ ನೀಡಿದಾಗ ಚರ್ಚೆ ಮಾಡದ ಕಾಂಗ್ರೆಸ್ ಪಲಾಯನವಾದ ಅನುಸರಿಸುತ್ತಿದೆ. ಇದು ಯಾವ ಸೀಮೆಯ ವಿಪಕ್ಷ ಕಾರ್ಯವೈಖರಿ? ಎಂದು ಬಿಜೆಪಿ ಪ್ರಶ್ನಿಸಿದೆ.