ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ, ನಾವೂ ರಾಮನ ಭಕ್ತರೇ: ಡಿ.ಕೆ ಶಿವಕುಮಾರ್
ಶಿವಮೊಗ್ಗ, ಮಾ,13: ಬಿಜೆಪಿ ಸರ್ಕಾರ ಅಧಿಕಾರವನ್ನು ದುರ್ಬಳಕೆ ಮಾಡಿಕೊಂಡು ಪಕ್ಷದ ಶಾಸಕರು ಹಾಗೂ ಕಾರ್ಯಕರ್ತರ ಮೇಲೆ ಸುಳ್ಳು ಕೇಸ್ಗಳನ್ನು ದಾಖಲಿಸುತ್ತಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ ಶಿವಕುಮಾರ್ ಆರೋಪಿಸಿದರು.
ಶಿವಮೊಗ್ಗದಲ್ಲಿಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಕಬ್ಬಡ್ಡಿ ಪಂದ್ಯಾವಳಿಯಲ್ಲಿ ಮ್ಯಾಟ್ ಸುಟ್ಟು ಹಾಕಲು ಯತ್ನಿಸಿದರು. ಇದನ್ನು ಪ್ರಶ್ನಿಸಿದ್ದಕ್ಕೆ ನಮ್ಮ ಶಾಸಕರ ಮೇಲೆ ಬಿಜೆಪಿ ಸರ್ಕಾರ ಅಧಿಕಾರ ಮತ್ತು ಅಧಿಕಾರಿಗಳನ್ನು ಬಳಸಿಕೊಂಡು ಪ್ರಕರಣ ದಾಖಲಿಸಿದ್ದಾರೆ. ಇದು ಖಂಡನೀಯ ಎಂದರು.
ಪ್ರತಿಯೊಬ್ಬ ಕಾರ್ಯಕರ್ತನ ರಕ್ಷಣೆಗೆ ಕಾಂಗ್ರೆಸ್ ಪಕ್ಷ ಇದೆ ಎಂಬ ಸಂದೇಶ ಕೊಡುವುದಕ್ಕೆ ಸಿದ್ದರಾಮಯ್ಯ, ಜಿ.ಪರಮೇಶ್ವರ್ ಸೇರಿದಂತೆ ನಾವೆಲ್ಲರೂ ಶಿವಮೊಗ್ಗಕ್ಕೆ ಬಂದಿದ್ದೇವೆ ಎಂದ ಅವರು, ಶ್ರೀರಾಮ ಬಿಜೆಪಿಯವರ ಆಸ್ತಿಯಲ್ಲ, ನಾವುಗಳು ಹಿಂದುಗಳೇ. ರಾಮನ ಭಕ್ತರೇ. ಶಿವಕುಮಾರ ಅಂದರೆ ಶಿವನ ಪುತ್ರ ಎಂದರ್ಥ. ಸಿದ್ದರಾಮಯ್ಯ ಹೆಸರಲ್ಲೂ ರಾಮನ ಹೆಸರಿದೆ. ನಾವೆಲ್ಲಾ ರಾಮನ ಮಕ್ಕಳೇ ಎಂದು ಬಿಜೆಪಿಯವರಿಗೆ ತಿರುಗೇಟು ನೀಡಿದರು.
ನಮ್ಮದು ಹಿಂದುತ್ವವೇ. ಜೊತೆಗೆ ಮಾನವತ್ವವೂ ನಮ್ಮಲ್ಲಿ ಇದೆ. ಸೋನಿಯಾ ಗಾಂಧಿ ಮೇಲೆ ಸುಳ್ಳು ಕೇಸ್ ಹಾಕಿದ್ದಾರೆ. ಇದಕ್ಕಿಂತ ಸಾಕ್ಷಿ ಏನಾದ್ರೂ ಬೇಕಾ ಎಂದು ಪ್ರಶ್ನಿಸಿದ ಅವರು, ಕಾಂಗ್ರೆಸ್ ಕಾರ್ಯಕರ್ತರ ಮೇಲೆ ಹಾಕಿರುವ ಸುಳ್ಳು ಕೇಸ್ ಹಿಂಪಡೆಯುವಂತೆ ಒತ್ತಾಯಿಸಿದರು.
ಎಸ್ಐಟಿ ತನಿಖೆ ವಿಚಾರಣೆಗೆ ಪ್ರತಿಕ್ರಿಯಿಸಿದ ಅವರು, ಮೊದಲು ಸಿಡಿ - ಸತ್ಯವೋ ಸುಳ್ಳೋ ಎಂಬುದು ದೃಢವಾಗಲಿ. ಆನಂತರ ಯಾರನ್ನ ಬೇಕಾದರೂ ಬಂಧಿಸಲಿ ಎಂದು ಡಿಕೆಶಿ ಹೇಳಿದರು.