'ಯುವ ಲೈವ್'ನಲ್ಲಿ ಇಂಧನ ಬೆಲೆ ಏರಿಕೆ ಸಮರ್ಥಿಸಿದ ಚಕ್ರವರ್ತಿ ಸೂಲಿಬೆಲೆ: ನೆಟ್ಟಿಗರಿಂದ ವ್ಯಾಪಕ ಆಕ್ರೋಶ
''ಡೈನಾಮಿಕ್ ಸುಳ್ಳಿಗಾಗಿ ನೀವು ಮುಂದೆ 'ಭಾರತರತ್ನ' ಪ್ರಶಸ್ತಿಗೆ ಪಾತ್ರರಾಗುತ್ತೀರಿ''
ಬೆಂಗಳೂರು, ಮೇ.19: ಇಂಧನ ಬೆಲೆ ಏರಿಕೆ ಕುರಿತಂತೆ ಯುವ ಬ್ರಿಗೇಡ್ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಫೇಸ್ಬುಕ್ ನಲ್ಲಿ 'ಯುವ ಲೈವ್' ಕಾರ್ಯಕ್ರಮ ಮಾಡಿದ್ದು, ಬೆಲೆ ಏರಿಕೆ, ಸುಂಕ ಪಾವತಿ ಹಾಗೂ ಕಚ್ಛಾ ತೈಲಗಳ ಬೆಲೆಯ ಬಗ್ಗೆ ಮಾತನಾಡಿದ್ದಾರೆ. ಆದರೆ ಚಕ್ರವರ್ತಿ ಸೂಲಿಬೆಲೆ ಬೆಲೆ ಏರಿಕೆಯನ್ನು ಸಮರ್ಥಿಸುವ ರೀತಿಯಲ್ಲಿ ಮಾತನಾಡಿದ್ದು ನೆಟ್ಟಿಗರ ಆಕ್ರೋಶಕ್ಕೆ ಕಾರಣವಾಗಿದೆ.
'ಮೋದಿ ಅಧಿಕಾರಕ್ಕೆ ಬಂದ ಬಳಿಕ ಈ ದೇಶದ ಜನರ ತಲಾ ಆದಾಯ ಶೇ.45ರಷ್ಟು ಹೆಚ್ಚಾಗಿದೆ. ಕಳೆದ 6 ವರ್ಷಗಳಲ್ಲಿ ಹಣದುಬ್ಬರ ಭಾರೀ ನಿಯಂತ್ರಣದಲ್ಲಿದೆ. ಜನಸಾಮಾನ್ಯರು ಆರಾಮವಾಗಿ ಬದುಕುತ್ತಿದ್ದಾರೆ. ಹೀಗಾಗಿಯೇ ಈ ಬಾರಿ ಜನರು ಪ್ರತಿಭಟಿಸಲು ಬೀದಿಗೆ ಬರಲಿಲ್ಲ. ಮೋದಿ ಅಧಿಕಾರಕ್ಕೆ ಬಂದಾಗ 80 ರೂ. ಇದ್ದ ಇಂಧನ ಬೆಲೆ ಈಗ 97 ರೂ.ಗೆ ಏರಿಕೆಯಾಗಿದೆ. ಕೊರೋನ ಸಾಂಕ್ರಾಮಿಕದ ನಂತರವೂ ಏರಿದ್ದು 17 ರೂ. ಮಾತ್ರ ಎಂದು ಅವರು ಹೇಳಿದ್ದಾರೆ.
ಜೇಬಿಗೆ ನಾಲ್ಕು ರೂಪಾಯಿ ಹೆಚ್ಚು ಹೊರೆಯಾದರೂ ಪರವಾಗಿಲ್ಲ. ಆದರೆ ದೇಶ ಜಗತ್ತಿನ ಮುಂದೆ ತಲೆ ತಗ್ಗಿಸಿ ನಿಲ್ಲಬಾರದು ಎಂದು ಅವರು ತಿಳಿಸಿದ್ದಾರೆ. ಅವರ ಈ 'ಯುವ ಲೈವ್'ಗೆ ಸುಮಾರು 3500 ಮಂದಿ ಲೈಕ್ ಮಾಡಿದ್ದು, 1800 ಮಂದಿ ಕಮೆಂಟ್ ಮಾಡಿದ್ದಾರೆ. ಇದರಲ್ಲಿ ಬಹುತೇಕ ಎಲ್ಲಾ ಕಮೆಂಟ್ ಗಳು ಅವರ ವಿರುದ್ಧವಾಗಿಯೇ ಬಂದಿದ್ದು, ಕೆಲವರಷ್ಟೇ ಸಮರ್ಥಿಸಿ ಕಮೆಂಟ್ ಮಾಡಿದ್ದಾರೆ.
''ನಿಜವಾಗಿಯೂ ಮೋದಿಗೆ ದೇಶದ ಜನ ದುಡಿದು ಟ್ಯಾಕ್ಸ್ ಕಟ್ಟಿ ದೇಶವನ್ನ ಬೆಳೆಸಬೇಕೆಂದು ಮನಸ್ಸಲ್ಲಿ ಇದ್ದಿದ್ದರೆ ನೀನು ಇಷ್ಟೊತ್ತಿಗೆ ದುಡಿದು ತಿನ್ನುತ್ತಿದ್ದೆ. ಯಾಕೆ ಈತರ ಭಂಡಬಾಳು ಬಾಳುತ್ತಿದ್ದೆ ಎಂದು ಪ್ರದೀಪ್ ಶೆಟ್ಟಿ ನಲ್ಲೂರು ಎಂಬವರು ಪ್ರಶ್ನಿಸಿದ್ದಾರೆ.
''ಅಣ್ಣಾ..ನಿಮ್ಮ ಮೋದಿಯ ಅಚ್ಚು ಮೆಚ್ಚಿನ ಪಕೋಡ ಅಂಗಡಿಯಲ್ಲಿ ಹೋಗಿ ಯಾಕೆ ಪಕೋಡ ಬೆಲೆ ಜಾಸ್ತಿ ಮಾಡಿದ್ದೀರಿ ಎಂದು ಕೇಳಿ. 70 ರುಪಾಯಿ ಇದ್ದ ಒಂದು ಲೀಟರ್ ಎಣ್ಣೆ ಬೆಲೆ ಈಗ 150 ರೂಪಾಯಿಯಾಗಿದೆ. ಗ್ಯಾಸ್ ದರವೂ 800 ಆಗಿದೆ ಎಂದು ಹೇಳುತ್ತಾರೆ. ಯಾವ ಬಾಯಲ್ಲಿ ಹಣದುಬ್ಬರ ಆಗಿಲ್ಲ ಅಂತೀಯ ? ಹೆಂಗ್ ಪುಂಗ್ತೀಯಣ್ಣ ಜನಕ್ಕೆ. ಅಬ್ಬಬ್ಬಾ'' ಎಂದು ಮಲ್ಲಿಕಾರ್ಜುನ ಭಾಸ್ಕರ್ ಎಂಬವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನೀನೇ ದೊಡ್ಡದಾಗಿ ಹಲವಾರು ವೀಡಿಯೋಗಳಲ್ಲಿ ಸಕ್ಕರೆ ಕೊಟ್ಟು ಪೆಟ್ರೋಲ್ ಡೀಸೆಲ್ ಖರೀದಿ ಮಾಡುತ್ತಾರೆ ನಮ್ಮ ಮೋದಿ ಅಂತ ಬೊಬ್ಬೆ ಹಾಕುತ್ತಿದ್ದೆ. ಎಲ್ಲಪ್ಪಾ ಅ ನಿನ್ನ ಡೋಂಗಿ ಮಾತುಗಳು. ಯಾಕೊ ನೀನೇ ಉಲ್ಟಾ ಹೊಡೆಯುತ್ತಿರುವ ಆಗಿದೆ. ಅಬ್ಬಬ್ಬಾ ನಮ್ಮ ಭಾರತ ದೇಶದಲ್ಲಿ ಸುಳ್ಳುಗಾರ ನಂ 1 ನಿನ್ನ ಬಿಟ್ಟರೆ ಬೇರೆ ಯಾರೂ ಇಲ್ಲ ಎಂದು ನರಸಿಂಹ. ಡಿ ಎಂಬವರು ಕಮೆಂಟ್ ಮಾಡಿದ್ದಾರೆ.
ಹೌದು..ಸರಕಾರದ ಒಡೆತನದಲ್ಲಿ ಇದ್ದ ಕಂಪೆನಿಗಳನ್ನು ಖಾಸಗಿಗೊಳಿಸುವುದು ಸರಿಯೇ ಸೂಲಿಬೆಲೆಯವರೇ. ನನಗೆ ನಿಮ್ಮ ಬಗ್ಗೆ ಹೆಮ್ಮೆ ಇತ್ತು. ಆದರೆ ನೀವು ಒಂದು ರಾಜಕೀಯ ಪಕ್ಷದ ಏಜೆಂಟ್ ಆದಾಗ ಇದ್ದ ಅಭಿಮಾನವೂ ಹೋಯ್ತು. ನಿಮ್ಮನ್ನು ಪುಂಗ್ ಲೀ ಅಂತಾರಲ್ವಾ ಸಾಮಾಜಿಕ ಜಾಲತಾಣಗಳಲ್ಲಿ, ಅದು ಸರಿ ಅಂತ ಅನ್ಸುತ್ತೆ. ಬದಲಾಗಿ ಸರ್ ಎಂದು ಶುಭಿತ್ ಕುಮಾರ ಎಂಬವರು ಮನವಿ ಮಾಡಿದ್ದಾರೆ.
ಮೊನ್ನೆ ಸೌದಿಗೆ ಪರ್ಸನಲ್ ಆಗಿ ಮೂರು ಸಲ ಕಾಲ್ ಮಾಡಿ, ನನ್ನ ದೇಶದ ಜನರಿಗೆ ತುಂಬಾ ತೊಂದರೆ ಆಗ್ತಿದೆ ದಯಮಾಡಿ ಪೆಟ್ರೋಲ್ ಬೆಲೆ ಕಡಿಮೆ ಮಾಡಿ ಅಂತ ಕೇಳಿದ್ದಕ್ಕೆ ಏನ್ ಹೇಳಿದ್ರಣ್ಣ ? ಅಕ್ಕಿ ಕೊಟ್ಟು ಸಕ್ಕರೆ ಕೊಟ್ಟು ಪೆಟ್ರೋಲ್ ಖರೀದಿ ಮಾಡ್ತಿದ್ದೀರಲ್ವಾ ? ಯಾಕೆ ನಿಲ್ಲಿಸಿದ್ದೀರಿ ಎಂದು ಭೀಮ್ ಪುತ್ರ ರಾಘವ ಎಂಬವರು ವ್ಯಂಗ್ಯವಾಡಿದ್ದಾರೆ.
ಭೂಮಿಗೆ ಭಾರವಾಗಿ ಇಂತಹ ಭಂಡ ಬಾಳು ಯಾಕೆ ಬಾಳ್ತೀಯಾ, ಹೋಗಿ ದುಡಿದು ತಿನ್ನು ಎಂದು ಗಜೇಂದ್ರ ಗಜ ಎಂಬವರು ಕಮೆಂಟಿಸಿದ್ದು, ಎಲ್ಲಾ ಕ್ಷೇತ್ರಗಳಲ್ಲೂ ಭಾರತರತ್ನ ಪ್ರಶಸ್ತಿ ಕೊಟ್ಟಿದ್ದಾರೆ, ಒಂದನ್ನು ಬಿಟ್ಟು. ಅದಾವುದೆಂದರೆ ಸುಳ್ಳು. ನಿಮಗೆ ಮುಂದಿನ ಸಲ ಡೈನಾಮಿಕ್ ಸುಳ್ಳಿಗಾಗಿ 'ಭಾರತರತ್ನ' ಪ್ರಶಸ್ತಿಗೆ ಪಾತ್ರರಾಗುತ್ತೀರಿ ಎಂದು ಅಜ್ಜಿನಪ್ಪ ಅಂಜಿ ಮನಿವಾಲ ಎಂಬವರು ತಿಳಿಸಿದ್ದಾರೆ.
ಹೆಂಗ್ ಪುಂಗ್ಲಿ ಅಂತ ಅನ್ವರ್ಥ ನಾಮಕ್ಕೆ ಕರೆಕ್ಟ್ ಇದ್ದೀರಿ. ಮೊದಲಿನ ವಿಡಿಯೋಗಳನ್ನ ಒಮ್ಮೆ ನೀನೇ ನೋಡಿ ನಿರ್ಧರಿಸು. ನಿನ್ನ ಯೋಗ್ಯತೆ ನಿನಗೆ ಗೊತ್ತಾಗುತ್ತದೆ ಎಂದು ರಾಯುಡು ಪಾವಗಡ ಎಂಬವರು ತಿಳಿಸಿದ್ದಾರೆ.
ಸಾಕು ಸ್ವಾಮಿ. ನಿನ್ನ ಮಾತು ಕೇಳಿ ತುಂಬಾ ಆನಂದವಾಯಿತು. ಚುನಾವಣೆ ಮುಂದಿಟ್ಟು ಇದರಲ್ಲಿ ಸೋಲುತ್ತೇವೆ ಎಂದು ತಿಳಿದು ಎಲ್ಲಾ ಮಾತುಗಳು ಹೀಗೆ ಬರುತ್ತವೆ. ಬಿಜೆಪಿ ಕಡೆಯಿಂದ ಇಷ್ಟು ಚೆನ್ನಾಗಿ ಸುಳ್ಳು ಹೇಳ್ತೀರಾ. ಅಣ್ಣ ದಯವಿಟ್ಟು ಬಿಟ್ಟು ಬಿಡಿ. ಮುಂದೆ ಬಡವರನ್ನು ಉಳಿಸಲು ಪ್ರಯತ್ನಪಡಿ. ನಿಮ್ಮ ಭಾಷಣಗಳು ಕೇಳಿ ನಮ್ಮ ಕಿವಿಗಳು ತೂತು ಬಿದ್ದೋಗಿದೆ. ಸಾಕು ಸ್ವಾಮಿ ಸಾಕು, ನೋಡೋಣ ಮೇ2ರ ನಂತರ ಎಂದು ಮುನಿರೆಡ್ಡಿ ಎಂಬವರು ಕಮೆಂಟ್ ಮಾಡಿದ್ದಾರೆ.
ಸರ್ಕಾರ ಇಷ್ಟು ವರ್ಷಗಳಲ್ಲಿ ಲಾಸ್ ಆಗಿಲ್ಲ. ಬರೀ ಲಾಭ ಮಾತ್ರ ಎಂದು ಮೊದಲೇ ಹೇಳಿದ್ದೀಯ. ಇನ್ನು ಉಳಿದ ನಿನ್ನ ಪುಂಗು ಪುರಾಣ ಕೇಳುವಷ್ಟು ಮೂರ್ಖತನಕ್ಕೆ ನಾ ಹೋಗಲ್ಲ. ಸರ್ಕಾರ ಇರುವುದು ಜನರ ಜೇಬು ಖಾಲಿ ಮಾಡಿ ಲಾಭ ಮಾಡಿಕೊಳ್ಳಲು ಅಲ್ಲ. ಜನಸಾಮಾನ್ಯರಿಗೆ ಯಾವುದೂ ಹೊರೆಯಾಗಂತೆ ನೋಡ್ಕೊಳೋಕೆ ಎಂದು ಮುರಳಿ ಮಾಲೂರು ಎಂಬವರು ನೆನಪಿಸಿದ್ದಾರೆ.
ನಿಮ್ಮಂತಹ ದಡ್ಡ ಶಿಖಾಮಣಿಮಣಿಗಳಿಂದಲೆ ಕೆಲವು ಜನ ಅಂದ ಭಕ್ತರಾಗಿದ್ದಾರೆ. ದೇಶದಲ್ಲಿ ಸುಮಾರು ಕನಿಷ್ಠ ಹತ್ತು ದಿನಗಳಿಗಾಗುವಷ್ಟು ದಾಸ್ತಾನು ಇರುತ್ತದೆ ಎಂಬ ಅರಿವಿಲ್ಲವೇ ಎಂದು ವಿಜಯ್ ಕುಮಾರ್ ಎಂಬವರು ಕಮೆಂಟಿಸಿದ್ದು, ಗುರು ಬ್ರದರ್ ನಿನ್ನಲ್ಲಿ ವಿಷಾದ & ಜಿಗುಪ್ಸೆ ಎದ್ದು ಕಾಣುತ್ತಿದೆ. ನೀವೆಷ್ಟೇ ಹೇಳಿದರೂ ಜನ ನಿನ್ನನ್ನು ಪುಂಗಿದಾಸ ಅಂತಾರೆ ಎಂಬುದನ್ನು ಕೇಳಿ ಕರುಳು ಕಿತ್ತು ಬರುತ್ತೆ ಎಂದು ಪುರುಷೋತ್ತಮ್ ಅನುರಾಗಿ ಎಂಬವರು ವ್ಯಂಗ್ಯವಾಡಿದ್ದಾರೆ
ನೀನು ಮೈ ಬಗ್ಗಿಸಿ ದುಡಿ ಆಗ ನಿನಗೆ ಗೊತ್ತಾಗೊತ್ತೆ. ನೀನು ಬದುಕೋದೇ ಬಿಟ್ಟಿ ಹಣದಿಂದ. ಬೇರೆಯವರಿಗೆ ಉಪದೇಶ ಕೊಡುವುದನ್ನ ಬಿಡು ಎಂದು ರವಿಕುಮಾರ್ ಪಾಟೀಲ್ ತಿಳಿಸಿದ್ದು, ಹಿಂದುತ್ವ ಹಿಂದುತ್ವ ಅಂತ ಹೇಳಿ ಅನೇಕರಿಗೆ ಮಂಕು ಬೂದಿ ಹಚ್ಚಿದವರು ನೀವು. ಕಾಂಗ್ರೆಸ್ ಗೆ ವೋಟ್ ಹಾಕೋಣ ಅಂದರೆ ಅವರು ಬರೀ ಅಲ್ಪಸಂಖ್ಯಾತರ ಅಭಿವೃದ್ಧಿಗೆ ಆದ್ಯತೆ ಕೊಡುತ್ತಾರೆ. ನೀವು ಬರೀ ಪುಂಗೋದೆ ಆಯ್ತು ಏನ್ ಮಾಡಬೇಕು ನಾವು ಎಂದು ಹರೀಶ್ ಭೋವಿ ಎಂಬವರು ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.
ಏನೋ ನಮ್ಮ ಪುಣ್ಯ. ನಮ್ಮ ಜೀವಿತಾವಧಿಯಲ್ಲೆ ತಮ್ಮಂತವರನ್ನ ನೋಡುವ ಭಾಗ್ಯ ಸಿಕ್ತು ಎಂದು ನಿಂಗರಾಜ ನವಿಲೂರು ಎಂಬವರು ವ್ಯಂಗ್ಯವಾಡಿದ್ದು, ಇಲ್ಲಿಯವರೆಗೂ ಸಾಮಾನ್ಯ ಜನರನ್ನು ಮೂರ್ಖನಾಗಿ ಮಾಡಿದ್ದು ಸಾಕು. ಇನ್ನು ನಿನ್ನ ಬೊಗಳೆ ಮಾತುಗಳನ್ನು ಬಿಟ್ಟು ಮೂರ್ಖತನವನ್ನು ಎತ್ತಿ ತೋರಿಸದಿರಿ ಎಂದು ಬೀರಲಿಂಗೇಶ್ ಎಂಬವರು ಮನವಿ ಮಾಡಿದ್ದಾರೆ.
ಪುಂಗ್ಲೀ ಅಣ್ಣಾ. ಸ್ವಾಮಿ ವಿವೇಕಾನಂದರ ಅವರ ಬಿರುಗಾಳಿ ಸಂತ ಕಾರ್ಯಕ್ರಮ ಏನು ವರ್ಕೌಟ್ ಆಗಲಿಲ. ಅದಕ್ಕೆ ಬಕೆಟ್ ಹಿಡಿಯೋಕೇ ಬಂದಿದ್ದೀಯಾ ಇಲ್ಲೇನು ಮೂರುಕಾಸು ದೊರಕಲ್ಲ ಎಂದು ಶಾಂತ ಕುಮಾರ್ ಎಂಬವರು ತಿಳಿಸಿದ್ದಾರೆ.
ಭಾರತ ಆರ್ಥಿಕ ವ್ಯವಸ್ಥೆಯನ್ನು ಕಗ್ಗೊಲೆ ಮಾಡಿ ಎಲ್ಲ ಮದ್ಯಮ ವರ್ಗದ ಜನರನ್ನು ಬಡವರನ್ನಾಗಿ ಮಾಡಿ ಮತ್ತೆ ಮನಸ್ಮೃತಿಯನ್ನು ಜಾರಿ ಮಾಡಿ ಜಮೀನುದಾರಿ ಪದ್ದತಿಯನ್ನು ಜಾರಿ ಮಾಡುವುದೇ ಆರೆಸ್ಸೆಸ್ ಮುಖ್ಯ ಉದ್ದೇಶ ಎಂದು ವೆಂಕಟೇಶ್ ಚಲುವಾದಿ ಎಂಬವರು ಕಮೆಂಟ್ ಮಾಡಿದ್ದಾರೆ.