ನರ್ಸಿಂಗ್ ವಿಚಾರದಲ್ಲಿ ಜೆಡಿಎಸ್ ಸದಸ್ಯರಿಂದ ಮುಂದುವರಿದ ಗದ್ದಲ: ಸದನ ಸಮಿತಿ ರಚನೆಗೆ ಪಟ್ಟು
ವಿಧಾನಪರಿಷತ್ ಅಧಿವೇಶನ
ಬೆಂಗಳೂರು, ಮಾ.22: ರಾಜ್ಯದ ನರ್ಸಿಂಗ್ ಮತ್ತು ಅರೆ ವೈದ್ಯಕೀಯ ಕಾಲೇಜುಗಳ ಆರಂಭಕ್ಕೆ ಅನುಮತಿ ನೀಡಿರುವುದರಲ್ಲಿ ನಡೆದಿದೆ ಎನ್ನಲಾದ ಅಕ್ರಮಗಳ ಬಗ್ಗೆ ತನಿಖೆಗೆ ಸದನ ಸಮಿತಿ ರಚಿಸುವಂತೆ ಆಗ್ರಹಿಸಿ ಇಂದು ಕೂಡಾ ಜೆಡಿಎಸ್ ವಿಧಾನ ಪರಿಷತ್ ನಲ್ಲಿ ಧರಣಿ ಮುಂದುವರಿಸಿದೆ.
ಅಕ್ರಮಗಳ ಬಗ್ಗೆ ತನಿಖೆಯನ್ನು ಹೈಕೋರ್ಟ್ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ಸಮಿತಿಯಿಂದ ನಡೆಸಲಾಗುವುದು ಎಂದು ಮುಖ್ಯಮಂತ್ರಿ ಯಡಿಯೂರಪ್ಪ ಭರವಸೆ ನೀಡಿದರು. ಆದರೆ ಇದಕ್ಕೆ ಒಪ್ಪದ ಜೆಡಿಎಸ್ ಸದಸ್ಯರು ತನಿಖೆಗೆ ಸದನ ಸಮಿತಿ ರಚಿಸಲೇ ಬೇಕು ಎಂದು ಒತ್ತಾಯಿಸಿದರು.
ಈ ವೇಳೆ ಸಭಾಪತಿ ಬಸವರಾಜ ಹೊರಟ್ಟಿ ಮಾತನಾಡಿ, ಮುಖ್ಯಮಂತ್ರಿ, ವಿರೋಧ ಪಕ್ಷದ ನಾಯಕರು ಮತ್ತು ಜೆಡಿಎಸ್ ನಾಯಕರ ಜೊತೆ ಸಭೆ ನಡೆಸಿ ಸಹಮತಕ್ಕೆ ಬರಲು ಚರ್ಚೆಗೆ ಆಹ್ವಾನಿಸಿದರು. ಬಳಿಕ ಸಭೆಯನ್ನು 10 ನಿಮಿಷ ಮುಂದೂಡಿದರು.
ಕಲಾಪ ಆರಂಭವಾಗುತ್ತಿದ್ದಂತೆ ಸಭಾಪತಿ ಪೀಠದ ಮುಂಭಾಗದಲ್ಲಿ ಜೆಡಿಎಸ್ ಸದಸ್ಯರು ಧರಣಿ ಆರಂಭಿಸಿದರು. ಸದನ ಸಮಿತಿ ರಚಿಸಲೇಬೇಕು ಎಂದು ಜೆಡಿಎಸ್ ನ ಕೆ.ಟಿ. ಶ್ರೀಕಂಠೇಗೌಡ ಆಗ್ರಹಿಸಿದರು.
Next Story