"ಸದನದ ಕಲಾಪಗಳಿಗೆ ಅಡ್ಡಿಪಡಿಸಲು ನಿಮಗೆ ಸ್ವಾತಂತ್ರ್ಯವಿಲ್ಲ"
ಧರಣಿ ನಿರತ ಕಾಂಗ್ರೆಸ್ ಸದಸ್ಯರ ವಿರುದ್ಧ ಸ್ಪೀಕರ್ ಆಕ್ರೋಶ
ಬೆಂಗಳೂರು, ಮಾ.23: ಸರಕಾರದ ವಿಷಯದಲ್ಲಿ ಭಿನ್ನಾಭಿಪ್ರಾಯಗಳಿದ್ದರೆ ಸದನ ಹೊರಗೆ ಹೋಗಿ ಹೋರಾಟ ಮಾಡಿ, ಇಲ್ಲಿ ಯಾಕೆ ಮಾಡುತ್ತೀರಾ. ಈ ರೀತಿ ಸದನದ ಕಲಾಪಗಳಿಗೆ ಅಡ್ಡಿಪಡಿಸಲು ಪ್ರಜಾಪ್ರಭುತ್ವದ ಸಂಸದೀಯ ನಡವಳಿಕೆಯಲ್ಲಿ ನಿಮಗೆ ಸ್ವಾತಂತ್ರ್ಯವಿಲ್ಲ ಎಂದು ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದರು.
ಮಂಗಳವಾರ ವಿಧಾನಸಭೆಯಲ್ಲಿ ಭೋಜನ ವಿರಾಮದ ಬಳಿಕ ಸದನ ಸೇರಿದಾಗಲೂ ಕಾಂಗ್ರೆಸ್ ಸದಸ್ಯರು ಧರಣಿ ಮುಂದುವರೆಸಿದ್ದರಿಂದ ಬೇಸರ ವ್ಯಕ್ತಪಡಿಸಿದ ಅವರು, ನೀವು ಚರ್ಚೆಯಲ್ಲಿ ಪಾಲ್ಗೊಳ್ಳುವುದಿಲ್ಲ. ಬೇರೆಯವರಿಗೂ ಅವಕಾಶ ನೀಡುವುದಿಲ್ಲ. ಇದೀಗ ಚರ್ಚೆಗೆ ಅವಕಾಶ ಸಿಗದೆ ಜೆಡಿಎಸ್ ಸದಸ್ಯರ ಸಭಾತ್ಯಾಗ ಮಾಡಿದ್ದಾರೆ ಎಂದರು.
ಒಂದು ರಾಷ್ಟ್ರ, ಒಂದು ಚುನಾವಣೆ ಬಗ್ಗೆ ಚರ್ಚೆ ನಡೆದಾಗಲೂ ಹೀಗೆ ವಿರೋಧ ಮಾಡಿದ್ರಿ. ಸದನ ಕಲಾಪ ಸಲಾಹ ಸಮಿತಿಗೆ ಕರೆದರೂ ಬರೋದಿಲ್ಲ. ಬಜೆಟ್ ಮಂಡಿಸುವಾಗಲೂ ವಿರೋಧ ಮಾಡಿದ್ದೀರಾ. ಆದರೆ, ಇವತ್ತು ಈ ವಿಷಯದ ಮೇಲೆ ಸದನದ ಕಲಾಪ ನಡೆಸಲು ಬಿಡದೆ ಇರುವುದು ಪ್ರಜಾಪ್ರಭುತ್ವ ವ್ಯವಸ್ಥೆ ಸಂಸದೀಯ ನಡವಳಿಕೆಯಲ್ಲಿ ಶೋಭೆ ತರಲ್ಲ ಎಂದು ಸ್ಪೀಕರ್ ಹೇಳಿದರು.